
ಮೂಡಲಗಿ: “ಕಳೆದ ಹಲವು ವರ್ಷಗಳಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ ಜ್ಞಾನ ಗಂಗೋತ್ರಿಯ ಶಾಲೆಯ ಸಾಧನೆ ಶ್ಲಾಘನೀಯ. ಗ್ರಾಮೀಣ ಪ್ರದೇಶದ ಬಡ ಹಾಗೂ ಪ್ರತಿಭಾವಂತ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಈ ಸಂಸ್ಥೆಯ ಕೊಡುಗೆ ಅಪಾರವಾಗಿದೆ”ಎಂದು ಮೂಡಲಗಿ ಬಿಇಒ ಪ್ರಕಾಶ ಹಿರೇಮಠ ಹೇಳಿದರು.
ಅವರು ತಾಲೂಕಿನ ರಾಜಾಪೂರ ಗ್ರಾಮದ ಪ್ರತಿಷ್ಠಿತ ಜ್ಞಾನಗಂಗೋತ್ರಿ ಪ್ರೌಢಶಾಲೆಯಲ್ಲಿ ೧೩ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬಹುಮಾನ ವಿತರಣಾ ಸಮಾರಂಭ “ಸ್ಪಂಧನ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಶಿಸ್ತು, ಉತ್ತಮ ಬೋಧನೆ ಹಾಗೂ ಸಮರ್ಪಿತ ಆಡಳಿತವೇ ಈ ಸಾಧನೆಯ ಹಿನ್ನಲೆ ಎಂದು ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ಕೃಪಾನಂದ ಸ್ವಾಮೀಜಿ ಮಾತನಾಡಿ, “ವಿದ್ಯೆ ಮಾತ್ರವಲ್ಲ, ಜೀವನದಲ್ಲಿ ಸಂಸ್ಕಾರ ಬಹಳ ಮುಖ್ಯ. ಆ ಸಂಸ್ಕಾರವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೊಳಗೆ ತುಂಬುವ ಪವಿತ್ರ ಕಾರ್ಯವನ್ನು ಜ್ಞಾನಗಂಗೋತ್ರಿ ಸಂಸ್ಥೆ ನಿಷ್ಠೆಯಿಂದ ಮಾಡುತ್ತಿದೆ. ಇಂತಹ ಶಿಕ್ಷಣವೇ ಉತ್ತಮ ಸಮಾಜ ನಿರ್ಮಾಣಕ್ಕೆ ಮೂಲ”ಎಂದ ಅವರು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯವೆಂದರು.
ಗೋಕಾಕ್ನ ಬಿಸಿಯೂಟ ಅಧಿಕಾರಿ ಅಶೋಕ ಮಲಬಣ್ಣವರ ಮಾತನಾಡಿ, “ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ಜ್ಞಾನ ಗಂಗೋತ್ರಿ ಶಾಲೆಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯ ಜೊತೆಗೆ ಸಹಪಾಠ್ಯ ಚಟುವಟಿಕೆಗಳಿಗೆ ಸಮಾನ ಮಹತ್ವ ನೀಡುತ್ತಿರುವುದನ್ನು ಶ್ಲಾಘನೀಸಿದರು.
ಕಾರ್ಯಕ್ರಮದ ಅಂಗವಾಗಿ ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳ ಮನಮುಟ್ಟುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕಲಾತ್ಮಕ ಪ್ರದರ್ಶನಗಳು ಸಮಾರಂಭಕ್ಕೆ ವಿಶೇಷ ಮೆರುಗು ನೀಡಿದವು.
ಕಾರ್ಯಕ್ರಮದಲ್ಲಿ ಗ್ರಾಮದ ಗುರುಹಿರಿಯರು, ವಿದ್ಯಾಭಿಮಾನಿಗಳು, ಪಾಲಕ–ಪೋಷಕರು, ವಿದ್ಯಾರ್ಥಿಗಳು ಭಾರಿ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಎರಡು ದಿನ ನಡೆದ ಈ ೧೩ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬಹುಮಾನ ವಿತರಣಾ ಸಮಾರಂಭವು ಶೈಕ್ಷಣಿಕ ಸಾಧನೆ, ಸಂಸ್ಕಾರ ಮತ್ತು ಗುಣಾತ್ಮಕ ಶಿಕ್ಷಣದ ಪ್ರತೀಕವಾಗಿ ರೂಪುಗೊಂಡು ಪಾಲಕ–ಪೋಷಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು ಮತ್ತು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿAದ ಜರುಗಿತು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದೊಂದಿಗೆ ನಿರಂತರವಾಗಿ ಶ್ರಮಿಸುತ್ತಿರುವ ಈ ಸಂಸ್ಥೆಯ ಶೈಕ್ಷಣಿಕ ಸಾಧನೆ ಮತ್ತು ಸಾಂಸ್ಕೃತಿಕ ವೈಭವಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.
ವಿದ್ಯಾರ್ಥಿನಿ ಐಶ್ವರ್ಯಾ ಕೊಡ್ಲಿ ನಿರೂಪಿಸಿದರು. ಪ್ರಧಾನಗುರು ಯುವರಾಜ ಸಿದ್ದಬಾಗೋಳ ಸ್ವಾಗತಿಸಿದರು, ಸಿದ್ದು ಅಕ್ಕಿಸಾಗರ ವಂದಿಸಿದರು.
ಶಾಲೆಯ ನಿರಂತರ ಶೈಕ್ಷಣಿಕ ಸಾಧನೆ, ಸಮರ್ಥ ಆಡಳಿತ ವ್ಯವಸ್ಥೆ ಹಾಗೂ ಶಿಕ್ಷಕರ ನಿಷ್ಠಾವಂತ ಸೇವೆ ಅತ್ಯಂತ ಪ್ರಶಂಸನೀಯವಾಗಿದೆ. ಗ್ರಾಮೀಣ ಭಾಗದಲ್ಲಿಯೇ ನಗರ ಮಟ್ಟದ ಗುಣಾತ್ಮಕ ಶಿಕ್ಷಣ ಒದಗಿಸುತ್ತಿರುವ ಜ್ಞಾನ ಗಂಗೋತ್ರಿ ಸಂಸ್ಥೆ ಇತರ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ.
ಅಜೀತ್ ಮನ್ನಿಕೇರಿ,
ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಬಾಗಲಕೋಟಿ
IN MUDALGI Latest Kannada News