ಮೂಡಲಗಿ: ಬಯಲು ಶೌಚಮುಕ್ತ ಎಂದು ಗುರುತಿಸಿಕೊಂಡಿರುವ ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಈಗಲೂ ಗ್ರಾಮ ಪಂಚಾಯಿತಿ ಮುಂದೆಯೇ ಬಯಲೇ ಬಹಿರ್ದೆಸೆ ತಾಣವಾಗಿದೆ. ಸರ್ಕಾರ ಶೌಚಾಲಯ ಕಟ್ಟಿಕೊಳ್ಳಲು ಬಿಡುಗಡೆ ಮಾಡಿರುವ ಸಹಾಯಧನವನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರಕರಣಗಳು ಒಂದೊಂದಾಗಿ ಬಯಲಿಗೆ ಬರುತ್ತಿವೆ.
ಧರ್ಮಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಾರ್ಡ ನಮ 3ರಲ್ಲಿ ಯಮನವ್ವ ಯಶವಂತ ಢವಳೇಶ್ವರ ಹಾಗೂ ರೇಣುಕಾ ಚಂದ್ರಕಾಂತ ಪರಕನಟ್ಟಿ ಎಂಬ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಬರುವ ಸಹಾಯಧನ ಜಮವಾಗಿದ್ದು, ಪಂಚಾಯಿತಿ ಅಧಿಕಾರಿಗಳು ಫಲಾನುಭವಿಗಳಿಗೆ ಶೌಚಾಲಯ ಕಟ್ಟಿಕೊಡುವಂತೆ ಹೇಳಿ ಅವರಿಂದ ಜಮವಾದ ಹಣವನ್ನು ಮರಳಿ ಪಡೆದುಕೊಂಡು ಶೌಚಾಲಯ ಕಟ್ಟಡಕ್ಕೆ ಬೇಕಾಗಿರುವ ವಸ್ತುಗಳನ್ನು ಅವರ ಮನೆ ಮುಂದೆ ಇಟ್ಟು ಹೋಗಿದ್ದಾರೆ.
ಇದು ಒಂದು ವರ್ಷದ ಕಥೆಯಲ್ಲ ಮೂರು ವರ್ಷಗಳಿಂದ ಫಲಾನುಭವಿಗಳ ಮನೆ ಮುಂದೆ ಶೌಚಾಲಯ ಕಟ್ಟಡಕ್ಕೆ ಬೇಕಾಗಿರುವ ವಸ್ತುಗಳು ಬಿದ್ದು ಹಾಳಾಗಿ ಹೋಗಿವೆ.
ಗ್ರಾಮ ಪಂಚಾಯಿತಿಯಲ್ಲಿ ಶೌಚಾಲಯದ ದಾಖಲಾತಿ ಕೂಡ ಸರಿಯಾಗಿ ಇರದೇ ಬಿಲ್ ಪಾವತಿ ಮಾಡಿದ್ದು, ಇದು ಅಧಿಕಾರಿಗಳ ನಿರ್ಲಕ್ಷವೇ ಇಲ್ಲವೇ ಅವರು ಕೂಡಾ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಅನುಮಾನಗಳು ಕೂಡ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
