ಮೂಡಲಗಿ: ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ದೀಪದಾನ
ಮೂಡಲಗಿ: ‘ದೈಹಿಕ ಶಿಕ್ಷಣದಲ್ಲಿ ಆಗಿರುವ ಹೊಸ ಬದಲಾವಣೆಗಳನ್ನು ಅಳವಡಿಸಿಕೊಂಡು ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಕ್ರೀಡೆಗಳ ಬಗ್ಗೆ ಆಸಕ್ತಿ ಬೆಳೆಸು ಜವಾಬ್ದಾರಿ ದೈಹಿಕ ಶಿಕ್ಷಣದ ಪ್ರಶಿಕ್ಷಣಾರ್ಥಿಗಳ ಜವಾಬ್ದಾರಿಯಾಗಿದೆ’ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ದೈಹಿಕ ಶಿಕ್ಷಣ ಪರಿವೀಕ್ಷಕ ಎ.ಎ. ಜುನೇದಿಪಟೇಲ ಹೇಳಿದರು.
ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಬಿ.ಪಿ.ಎಡ್ ಹಾಗೂ ಎಂ.ಪಿ.ಎಡ್ ಕಾಲೇಜುಗಳ 2020-21ನೇ ಸಾಲಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಹಾಗೂ ದೀಪದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಹೊಸ ತಂತ್ರಜ್ಞಾನ ಮತ್ತು ಬದಲಾಗುವ ಕ್ರೀಡಾ ನಿಯಮಗಳನ್ನು ನಿರಂತವಾಗಿ ಅಳವಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಶಿಕ್ಷಣ ಸಂಸ್ಥೆಯ ನಿರ್ದೇಶಕ ವೆಂಕಟೇಶ ಸೋನವಾಲಕರ ಮಾತನಾಡಿ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಕ್ರೀಡೆಗಳ ಬಗ್ಗೆ ಉತ್ಸಾಹವನ್ನು ತುಂಬುವ ಪ್ರಾಮಾಣಿಕ ಕಾರ್ಯಮಾಡಬೇಕು ಎಂದರು.
ಪ್ರಾಚಾರ್ಯ ಡಾ. ಎಂ.ಕೆ. ಕಂಕಣವಾಡಿ ಪ್ರಾಸ್ತಾವಿಕ ಮಾತನಾಡಿ ದೈಹಿಕ ಶಿಕ್ಷಣ ಪದವಿಗಳಿಂದ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಇವೆ. ಸಂಸ್ಥೆಯಲ್ಲಿ ದೈಹಿಕ ಶಿಕ್ಷಣಕ್ಕಾಗಿ ಉತ್ತಮ ಸೌಲಭ್ಯಗಳನ್ನು ಮಾಡಿದೆ ಎಂದರು.
ಶಿಕ್ಷಣ ಸಂಸ್ಥೆ ನಿರ್ದೇಶಕ ಪ್ರದೀಪ ಲಂಕೆಪ್ಪನವರ ಅತಿಥಿಯಾಗಿದ್ದರು.
ಬಿ.ಕೆ. ಬಡಗಣ್ಣವರ ಸ್ವಾಗತಿಸಿದರು, ಬಿ.ಎಸ್. ಕಂಬಾರ ನಿರೂಪಿಸಿದರು, ಎಲ್.ಬಿ. ಮನ್ನಾಪುರೆ ವಂದಿಸಿದರು.