ವಡೇರಹಟ್ಟಿಯ ಇಂದ್ರವೇಣಿ ಹಳ್ಳಕ್ಕೆ ಹರಿಯುತ್ತಿರುವ ತ್ಯಾಜ್ಯ ಮಿಶ್ರಿತ ರಾಸಾಯನಿಕ ನೀರು ವಿರೋಧಿಸಿ
ವಿಶ್ವರಾಜ್ ಶುಗರ್ಸ್ ಮಾಲೀಕರಿಗೆ ಬಿಸಿ ಮುಟ್ಟಿಸಿದ ವಡೇರಹಟ್ಟಿ ಗ್ರಾಮಸ್ಥರು
ಮೂಡಲಗಿ : ತಾಲೂಕಿನ ವಡೇರಹಟ್ಟಿಯ ಇಂದ್ರವೇಣಿ ಹಳ್ಳಕ್ಕೆ ಬೆಲ್ಲದ ಬಾಗೇವಾಡಿಯ ವಿಶ್ವರಾಜ ಶುಗರ್ಸ್ನಿಂದ ತ್ಯಾಜ್ಯ ಮಿಶ್ರಿತ ರಾಸಾಯನಿಕ ನೀರು ಬಿಡುವುದನ್ನು ವಿರೋಧಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದ್ದಾರೆ.
ಮಂಗಳವಾರದಂದು ವಡೇರಹಟ್ಟಿ ಗ್ರಾಮದ ಸುಮಾರು ಇನ್ನೂರಕ್ಕೂ ಹೆಚ್ಚು ಜನರು ಇಂದು ತಹಶೀಲ್ದಾರ ಕಛೇರಿಗೆ ಆಗಮಿಸಿ ಕಾರ್ಖಾನೆಯ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಉಮೇಶ ಕತ್ತಿ ಒಡೆತನಕ್ಕೆ ಸೇರಿರುವ ವಿಶ್ವರಾಜ್ ಶುಗರ್ಸ್ನಿಂದ ಗ್ರಾಮದ ಇಂದ್ರವೇಣಿ ಹಳ್ಳಕ್ಕೆ ಸುಮಾರು ಮೂರ್ನಾಲ್ಕು ವರ್ಷಗಳಿಂದ ಸತತವಾಗಿ ತ್ಯಾಜ್ಯ ಮಿಶ್ರಿತ ರಾಸಾಯನಿಕ(ಮಳ್ಳಿ) ನೀರನ್ನು ಬಿಡುತ್ತಿದ್ದಾರೆ. ಇದರಿಂದ ವಡೇರಹಟ್ಟಿ ಮತ್ತು ಫುಲಗಡ್ಡಿ ಗ್ರಾಮಗಳ ನಾಗರೀಕರಿಗೆ, ಜಾನುವಾರುಗಳಿಗೆ ಮತ್ತು ಜಲಚರ ಜೀವಿಗಳಿಗೆ ವಿವಿಧ ರೋಗ ರುಜಿನಗಳ ಜೊತೆಗೆ ಜೀವಹಾನಿಯಾಗುತ್ತಿದೆ. ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಸಾಕಷ್ಟು ಪ್ರಾಣಿಗಳು ಅಸುನೀಗಿವೆ. ಜಾನುವಾರುಗಳು ಮತ್ತು ನಾಗರೀಕರ ಮೈಮೇಲೆ ಗುಳ್ಳೆ ಎದ್ದು ಚರ್ಮರೋಗ ಬರ ತೊಡಗಿದೆ. ದುರ್ಗಂದ ವಾಸನೆಯಿಂದ ಪರಿಸರ ಹಾಳಾಗುತ್ತಿದೆ. ಸಾಂಕ್ರಾಮಿಕ ರೋಗವು ಕೊರೋನಾ ಮಾದರಿಯಲ್ಲಿ ಹರಡುತ್ತಿದ್ದು, ಕೂಡಲೇ ಕಲುಷಿತ ನೀರನ್ನು ಹಳ್ಳಕ್ಕೆ ಹರಿಸುತ್ತಿರುವ ಕಾರ್ಖಾನೆಯ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ನಾಗರೀಕರಿಗೆ ಆಗುತ್ತಿರುವ ಹಾನಿಯನ್ನು ಮಾಲೀಕರೇ ಭರಿಸಬೇಕು ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಒಂದು ವೇಳೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾದರೇ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಛೇರಿ ಮತ್ತು ಕಾರ್ಖಾನೆ ಮಾಲೀಕರ ಮನೆ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ವಡೇರಹಟ್ಟಿ ಗ್ರಾಪಂ ಅಧ್ಯಕ್ಷೆ ಲಕ್ಕವ್ವ ಹಾದಿಮನಿ, ಉಪಾಧ್ಯಕ್ಷೆ ಲಕ್ಕವ್ವ ಹೋಳ್ಕರ, ಪಿಕೆಪಿಎಸ್ ಅಧ್ಯಕ್ಷ ಲಗಮಣ್ಣಾ ಮಲ್ಲಿಮಾರ ನೇತೃತ್ವದಲ್ಲಿ ತಹಶೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಗೋಪಾಲ ಕುದರಿ, ಗ್ರಾಪಂ ಸದಸ್ಯ ಗೋಪಾಲ ಬೀರನಗಡ್ಡಿ, ಸಿ.ಎಸ್. ಮೋಟೆಪ್ಪಗೋಳ, ಬನಪ್ಪ ವಡೇರ, ವಿಠ್ಠಲ ಗಿಡೋಜಿ, ಶಿವಪ್ಪ ಗಿಡೋಜಿ, ಬನಪ್ಪ ಡೂಗನವರ, ಅಡಿವೆಪ್ಪ ಹಾದಿಮನಿ, ನಾಗಪ್ಪ ಹಾದಿಮನಿ, ಸಂಜು ಮಕರದ, ಅಶೋಕ ಮೇತ್ರಿ, ರಾಜು ನಿಲಜಗಿ, ರೆಬ್ಬೋಜಿ ಮಲ್ಲಿಮಾರ, ಗಣಪತಿ ಉದ್ದನ್ನವರ, ಹಣಮಂತ ಗುರುಸಿದ್ದಪ್ಪಗೋಳ, ಶಿವಾನಂದ ಹಾದಿಮನಿ, ಶ್ರೀನಿವಾಸ ಹಾದಿಮನಿ, ಖಾನಪ್ಪ ಹೋಳಕರ, ಪಂಕಜ ಮೋಟೆಪ್ಪಗೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.