ಕಲ್ಲೋಳಿ ಪ.ಪಂ ಚುನಾವಣೆ : ಉನ್ನತ ಮಟ್ಟದ ತನಿಖೆಗೆ ಆಗ್ರಹ
ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣ ಪಂಚಾಯಿತಿಗೆ ಇತ್ತಿಚಿಗೆ ನಡೆದ ಚುನಾವಣೆಯಲ್ಲಿ ಆಕ್ರಮ ನಡೆದಿರುವುದಾಗಿ ಬಿಜೆಪಿ ಪರಾಜಿತ ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರು ಆರೋಪ, ಪ್ರತ್ಯಾರೋಪ ಮಾಡುತ್ತಿರುವದರಿಂದ ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ, ಅರಭಾಂವಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕ, ಬಿಜೆಪಿ ರಾಜ್ಯಸಭಾ ಸದಸ್ಯರಿದ್ದು ಎಲ್ಲರೂ ಆಡಳಿತ ಪಕ್ಷದವರೇ ಇರುವಾಗ ಈ ಆರೋಪವನ್ನು ಉನ್ನತ ಮಟ್ಟದ ತನಿಖೆ ಮಾಡಬೇಕು ಎಂದು ಕಾಂಗ್ರೇಸ್ ಮುಖಂಡ ಲಕ್ಕನ್ನ ಸವಸುದ್ದಿ ರಾಜ್ಯದ ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತಿರುವುದಾಗಿ ಹೇಳಿದರು.
ಅವರು ಇಲ್ಲಿಯ ಪ್ರೆಸ್ ಕ್ಲಬ್ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸ್ವ ಪಕ್ಷದವರೇ ಆರೋಪ ಮಾಡಿ ಮರು ಮತದಾನಕ್ಕೆ ಆಗ್ರಹಿಸುತ್ತಿರುವದರಿಂದ ಅರಭಾಂವಿ ಮತ ಕ್ಷೇತ್ರ ಕರ್ನಾಟಕದಲ್ಲಿದ್ದೆಯೋ ಅಥವಾ ಬಿಹಾರದಲ್ಲಿದಿಯೋ ತಿಳಿತಾ ಇಲ್ಲಾ. ಇದನ್ನು ಚುನಾವಣಾ ಆಯೋಗ ಕೂಡಾ ಗಂಭೀರವಾಗಿ ಪರಿಗಣಿಸಬೇಕು. ಒಂದು ವೇಳೆ ಆಕ್ರಮ ಮತ ಪೆಟ್ಟಿಗೆ ಬದಲಾವಣೆಯಲ್ಲಿ ತಾಲೂಕಾ ಆಡಳಿತ ಭಾಗಿಯಾಗಿದ್ದರೇ, ಅಲ್ಲಿಯ ಅಧಿಕಾರಿಗಳನ್ನು ಕೂಡಲೆ ವಜಾ ಮಾಡಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದರು.
ಈ ಸಂದರ್ಭ ಕಾಂಗ್ರೇಸ್ ಪಕ್ಷದ ಮುಖಂಡರಾದ ಗುರುನಾಥ ಗಂಗಣ್ಣವರ, ಶಿವಾನಂದ ಮಡಿವಾಳರ ಇದ್ದರು.