ಮೂಡಲಗಿ: ಕೃಷಿ ಉಡಾನ್ 2.0 ಯೋಜನೆಯಡಿ ಬೆಳಗಾವಿ ವಿಮಾನ ನಿಲ್ದಾಣ ಆಯ್ಕೆಯಾಗಿದ್ದು, ಇದರಿಂದಾಗಿ ಈ ಭಾಗದ ಕೃಷಿ ಉತ್ಪನ್ನಗಳ ಸಾಗಾಟ-ಮಾರಾಟಕ್ಕೆ ಹೆಚ್ಚಿನ ಉತ್ತೇಜನೆ ಸಿಗಲಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ.
ಕೇಂದ್ರ ವಿಮಾನಯಾನ ಸಚಿವಾಲಯವು ಕೃಷಿ ಉಡಾನ್ 2.0 ಯೋಜನೆಯಡಿ ಮೊದಲ ಹಂತದಲ್ಲಿ ಒಟ್ಟು 53 ವಿಮಾನ ನಿಲ್ದಾಣಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಎರಡನೆಯ ಹಂತದಲ್ಲಿ ಹೊಸ 5 ವಿಮಾನ ನಿಲ್ದಾಣಗಳನ್ನು ಆಯ್ಕೆ ಮಾಡಿದೆ. ಅದರಲ್ಲಿ ಬೆಳಗಾವಿ ವಿಮಾನ ನಿಲ್ಧಾಣವನ್ನು ಕೂಡ ಸೇರ್ಪಡೆ ಮಾಡಲಾಗಿದೆ ಎಂದರು. ಕೃಷಿ ಉತ್ಪನ್ನ ಬೆಳೆಯುವುದರಲ್ಲಿ ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಹೀಗಾಗಿ ಕೃಷಿ ಉಡಾನ್ ಯೋಜನೆಯಿಂದ ರೈತರಿಗೆ ಕೃಷಿ ಉತ್ಪನ್ನಗಳನ್ನು ಬೇರೆ ರಾಜ್ಯಗಳಿಗೆ ಸಾಗಾಟಕ್ಕೆ ಅನುಕೂಲವಾಗಲಿದೆ. ಇದರಿಂದಾಗಿ ಉತ್ಪನ್ನಗಳ ನೈಜ ಮೌಲ್ಯವನ್ನು ಅರಿತುಕೊಳ್ಳಲು ರೈತರಿಗೆ ಸಹಾಯಕವಾಗುತ್ತದೆ. ಇದು ಅವರ ಆದಾಯ ಹೆಚ್ಚಿಸಲು ಮತ್ತು ಮಾರುಕಟ್ಟೆಯಲ್ಲಿ ಅವರ ಸ್ಪರ್ಧಾತ್ಮಕತೆ ವೃದ್ಧಿಸಲು ಸಹಾಯ ಮಾಡುತ್ತದೆ ಎಂದರು.
ಬೆಳಗಾವಿ ವಿಮಾನ ನಿಲ್ದಾಣವನ್ನು ಕೃಷಿ ಉಡಾನ್ 2.0 ಯೋಜನೆಗೆ ಆಯ್ಕೆ ಮಾಡಲು ಕಾರಣಿಭೂತರಾದ ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ವಿಮಾನಯಾನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಹ್ಲಾದ ಜೋಶಿ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆಂದರು.
