ಮೂಡಲಗಿ: ‘ಅಂತರಂಗವನ್ನು ಶುದ್ಧಗೊಳಿಸುವ ವಚನಾಧ್ಯನವನ್ನು ಆಧುನಿಕ ಕಾಲಘಟ್ಟದಲ್ಲಿ ಹೆಚ್ಚು ಪ್ರಚುರಪಡಿಸಬೇಕಾಗಿದೆ’ ಎಂದು ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಹೇಳಿದರು.
ಮೂಡಲಗಿ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಜಾನಪದ ಪರಿಷತ್ದಿಂದ ನೀಲಕಂಠೇಶ್ವರ ಮಠದಲ್ಲಿ ಏರ್ಪಡಿಸಿದ್ದ ಡಾ. ಮಹಾದೇವ ಪೋತರಾಜರಿಂದ ರಚಿತವಾದ ಸುವರ್ಣದೀಪ ವಚನ ಸಂಕಲನ ಬಿಡುಗಡೆ ಮತ್ತು ವಿಶ್ವ ಜಾನಪದ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಕೃತಿಯ ಕುರಿತು ಮಾತನಾಡಿದ ಅವರು 12ನೇ ಶತಮಾನದ ಶರಣ ವಚನಗಳಿಂದ ಪ್ರಭಾವಿತರಾಗಿರುವ ಡಾ. ಮಹಾದೇವ ಪೋತರಾಜ ಅವರು ರಚಿಸಿರುವ ಸುವರ್ಣದೀಪ ಆಧುನಿಕ ವಚನ ಸಂಕಲನವು ಸಮಾಜಕ್ಕೆ ಸಂದೇಶಗಳನ್ನು ನೀಡಿದೆ ಎಂದರು.
182 ವಚನಗಳನ್ನು ಹೊಂದಿರುವ ಸುವರ್ಣದೀಪ ಕೃತಿಯಲ್ಲಿ ಆತ್ಮಾವಲೋಕನ, ಅಂತ:ಕರಣಗಳ ಅನುಷ್ಠಾನದ ಮೂಲಕ ಮಾನವ ಸನ್ಮಾರ್ಗದ ಪಥಿಕನಾಗಬೇಕೆಂಬ ಚಿಂತನೆಯನ್ನು ಬಿಂಬಿಸಲಾಗಿದೆ ಎಂದರು.
ವಚನಗಳ ಓದು, ಅರ್ಥೈಸುವಿಕೆ ಹಾಗೂ ಅಳವಡಿಕೆಗಳಿಂದ ಬದುಕು ಸುಂದರವಾಗುತ್ತದೆ. ಸಮಾನತೆ, ಕರುಣೆ, ಮನಶುದ್ಧತೆ ಹಾಗೂ ಮಾನವೀಯತೆಯ ಮೂಲಕವೇ ಭಕ್ತಿಮಾರ್ಗ ರೂಪಿಸಿಕೊಂಡು ಬದುಕನ್ನು ಸಾರ್ಥಕಪಡಿಸಿಕೊಳ್ಳುವುದು ಶರಣರ ಸಾಹಿತ್ಯದ ಆಶಯವಾಗಿತ್ತು ಎಂದರು.
ಹಾರೂಗೇರಿಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್.ಬಿ. ಕೊಕಟನೂರ ಮಾತನಾಡಿ ಮಹಾದೇವ ಪೋತರಾಜ ಅವರು ವಚನಗಳನ್ನು ಅರ್ತಗರ್ಭಿತವಾಗಿ ರಚಿಸಿದಾರೆ. ಶರಣರ ವಚನಗಳಂತೆ ಸಮಾಜದಲ್ಲಿಯ ಅಂಕುಡೊಂಕುಗಳನ್ನು ತಿದ್ದುವ ಸಂದೇಶಗಳಾಗಿವೆ ಎಂದರು.
ಮುಖ್ಯ ಅತಿಥಿಳಾದ ಬಾಲಶೇಖರ ಬಂದಿ, ಕಲ್ಲೋಳಿಯ ಪದವಿ ಕಾಲೇಜು ಪ್ರಾಚಾರ್ಯ ಡಾ. ಸುರೇಶ ಹನಗಂಡಿ, ಕೃತಿಕಾರ ಡಾ. ಮಹಾದೇವ ಪೋತರಾಜ, ಅಧ್ಯಕ್ಷತೆವಹಿಸಿದ್ದ ಕಸಾಪ ಕಾರ್ಯದರ್ಶಿ ಅಣ್ಣಪ್ಪ ವಂಟಗೋಡಿ ಮಾತನಾಡಿದರು.
ಸಾನ್ನಿಧ್ಯವಹಿಸಿದ್ದÀ ಶಿವಾನಂದ ಸ್ವಾಮಿಗಳು ಆಶೀರ್ವಚನ ನೀಡಿದರು.
ಅತಿಥಿಗಳಾಗಿ ನೀಲಕಂಠ ಸೇವಾ ಸಮಿತಿಯ ಅಧ್ಯಕ್ಷ ಈಶ್ವರ ಮುರಗೋಡ, ಜಿ.ಕೆ. ಮುರಗೋಡ, ಸಾಹಿತಿ ಸಿದ್ರಾಮ ದ್ಯಾಗಾನಟ್ಟಿ, ಚುಸಾಪ ಅಧ್ಯಕ್ಷ ಚಿದಾನಂದ ಹೂಗಾರ, ಹಳ್ಳೂರದ ಸಿದ್ದು ಮಹಾರಾಜ, ನಿಂಗಪ್ಪ ಸಂಗ್ರೋಜಿಕೊಪ್ಪ, ಬಿ.ವೈ. ಶಿವಾಪುರ, ಬಸವರಾಜ ತರಕಾರ, ಸುಭಾಷ ಕಡಾಡಿ, ಶಾನೂರ ಐಹೊಳಿ, ಬಿ.ಸಿ. ಹೆಬ್ಬಾಳ, ಶಿವಾನಂದ ಚಂಡಕಿ, ಬಿ.ಎ. ದೇಸಾಯಿ, ಪೂರ್ಣಿಮಾ ಯಲಿಗಾರ, ಶಶಿರೇಖಾ ಬೆಳ್ಳಕ್ಕಿ, ಭಾಗೀರಥಿ ಕುಳಲಿ, ಖನ್ನವ್ವ ಸೊಪ್ಪಾಡಲಾ ಇದ್ದರು.
ಕಮಲಾಬಾಯಿ ಚಂದ್ರಪ್ಪ ಪೋತರಾಜ, ಚಿತ್ರಕಲಾ ಶಿಕ್ಷಕ ಸುಭಾಷ ಕುರಣಿ, ನಾಗಪ್ಪ ಗಡಾದ ಹಾಗೂ ಕೃತಿಕಾರ ಮಹಾದೇವ ಪೋತರಾಜ ಅವರನ್ನು ಸನ್ಮಾನಿಸಿದರು.
ನಾಗೇಂದ್ರ ಮಾನೆ, ಚುಟುಕುಸಾಬ ಜಾತಿಗಾರ ಇವುರ ಸಂಬಾಳವನ್ನು ನುಡಿಸಿ ಎಲ್ಲರ ಮೆಚ್ಚುಗೆ ಪಡೆದರು.
ಶಿವಕುಮಾರ ಕೋಡಿಹಾಳ ಮತ್ತು ಗೀತಾ ಹಿರೇಮಠ ನಿರೂಪಿಸಿದರು.