ಮೂಡಲಗಿ : ಬಡತನ, ಅನಕ್ಷರತೆ ನಿರ್ಮೂಲನೆಗೆ ಶಿಕ್ಷಣವೊಂದೇ ಅಸ್ತ್ರ ಎಂದು ದಿವಾಣಿ ಹಾಗೂ ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಪಾಟೀಲ ಅಭಿಪ್ರಾಯಪಟ್ಟರು.
ಪಟ್ಟಣದ ಹೊರವಲಯದಲ್ಲಿರುವ ಮಡ್ಡಿ ಈರಣ್ಣ ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ,ತಾಲೂಕಾ ಮಟ್ಟದ ಎನ್.ಎಮ್.ಎಮ್.ಎಸ್ ಶಿಷ್ಯವೇತನ ಅರ್ಹತಾ ಪರೀಕ್ಷೆಯ ಪೂರ್ವಭಾವಿ ತಯಾರಿ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದವರು, ನಾವು ಹಳ್ಳಿಯ ಮಕ್ಕಳು ಪಟ್ಟಣದ ಮಕ್ಕಳ ಜೊತೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ ಎಂಬ ಭಾವನೆ ಯಾರಲ್ಲಿಯೂ ಬರಬಾರದು. ಜಗತ್ತಿನಲ್ಲಿ ಹಲವಾರು ಮಹಾನ್ ಸಾಧನೆ ಮಾಡಿರುವವರು ಹಳ್ಳಿಗಳ ಶಾಲೆಯಲ್ಲಿ ಓದಿ ಬಂದವರೆ. ಬಡತನದ ಬೇಗೆಯಲ್ಲಿ ಹುಟ್ಟಿದ ಪಾರಿಜಾತಗಳು. ನಿಮ್ಮಲ್ಲಿ ಅಡಗಿರುವ ಅದಮ್ಯ ಶಕ್ತಿಯಿಂದ ಉತ್ತಮ ಶೈಕ್ಷಣಿಕ ಸಾಧನೆ ಮಾಡಿ ಎಂದು ಮಕ್ಕಳಿಗೆ ಸಲಹೆ ನೀಡಿದ ಅವರು ತಮ್ಮ ಬಾಲ್ಯ ಜೀವನದ ಶೈಕ್ಷಣಿಕ ಕ್ಷಣಗಳನ್ನು ನೆನೆಸಿಕೊಂಡು ಭಾವಕರಾದರು.
ತಾಲೂಕಾ ಮಟ್ಟದ ಶಿಷ್ಯವೇತನ ಅರ್ಹತಾ ಪರೀಕ್ಷೆಯ ಪೂರ್ವಭಾವಿ ತಯಾರಿ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳೊಂದಿಗೆ ನ್ಯಾಯಾಧೀಶೆ ಜ್ಯೋತಿ ಪಾಟೀಲ ಸಂವಾದ ನಡೆಸಿದರು.
ಮೂಡಲಗಿಯ ಶೈಕ್ಷಣಿಕ ವಲಯಕ್ಕೆ ಇಲ್ಲಿಯ ಬಿಇಒ ಅಜೀತ್ ಮನಿಕೇರಿಯವರು ಗುರುವಿನ ಸ್ಥಾನವನ್ನು ಹೊತ್ತು, ಮಕ್ಕಳಿಗೆ ತಂದೆಯ ಸ್ಥಾನದಲ್ಲಿ ನಿಂತು ಪ್ರತಿಯೊಂದು ವಿದ್ಯಾರ್ಥಿಗಳ ಚಟುವಟಿಕೆಯಲ್ಲಿ ತಮ್ಮದೇ ಆದ ಶೈಲಿಯಲ್ಲಿ ಮಕ್ಕಳ ಕಲಿಕೆಯನ್ನು ಹೆಚ್ಚಿಸಲು ಅವರು ಮಾಡುತ್ತಿರುವಂತ ಕಾರ್ಯ ಶ್ಲಾಘನೀಯವಾಗಿದ್ದು, 2012ರಿಂದಲೂ ಸಹ ಈ ಶಿಷ್ಯವೇತನ ಪರೀಕ್ಷೆಯಲ್ಲಿ ಇಡೀ ದೇಶದಲ್ಲಿ ಮೂಡಲಗಿ ಶೈಕ್ಷಣಿಕ ವಲಯ ಹೆಸರುವಾಸಿಯಾಗಿದ್ದು ಈ ಭಾಗದ ಜನರ ಸೌಭಾಗ್ಯ ಎಂದರು.
ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಈ ವರ್ಷದ ಶಿಷ್ಯವೇತನ ಅರ್ಹತಾ ಪರೀಕ್ಷೆಯ ಪೂರ್ವಭಾವಿ ಕಾರ್ಯಾಗಾರದಲ್ಲಿ ವಲಯದ 88 ಶಾಲಾ ಮಕ್ಕಳು ಭಾಗಿಯಾಗಿದ್ದು, ಪ್ರತಿವರ್ಷದಂತೆ ಈ ವರ್ಷವೂ ಕೂಡ ರಾಷ್ಟ್ರಮಟ್ಟದಲ್ಲಿ ಕೂಡ ವಲಯದ ಕೀರ್ತಿಯನ್ನು ಹೆಚ್ಚಿಸುವಲ್ಲಿ ಶಿಕ್ಷಕರ ಜೊತೆ ಮಕ್ಕಳ ಕ್ರಿಯಾಶೀಲರಾಗಿ ಅಧ್ಯಯನ ಮಾಡಬೇಕೆಂದು ತಿಳಿ ಹೇಳಿದರು.
ರಾಜ್ಯದ 35 ಶೈಕ್ಷಣಿಕ ಜಿಲ್ಲೆಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮೂಡಲಗಿ ಶೈಕ್ಷಣಿಕ ವಲಯದ ಮಕ್ಕಳು ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಶಿಷ್ಯವೇತನ ಅರ್ಹತಾ ಪರೀಕ್ಷೆಯಲ್ಲಿ ಭಾಗವಹಿಸಿ ಆಯ್ಕೆಯಾಗುವ ಮೂಲಕ ಮತ್ತು ವಿವಿಧ ಪರೀಕ್ಷೆಗಳನ್ನು ಕೂಡ ಮೂಡಲಗಿ ಶೈಕ್ಷಣಿಕ ವಲಯ ಮೈಲುಗಲ್ಲು ಸಾಧಿಸುತ್ತಿದೆ ಎಂದು ಹೇಳಿದರು.
ಈ ವೇಳೆ ಕಾರ್ಯಾಗಾರದಲ್ಲಿ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ವಿಷಯಗಳ ಕುರಿತು ನುರಿತ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಗೋಕಾಕ ಪ್ರಾಥಮಿಕ ಸಹಕಾರ ಪತ್ತಿನ ಸಂಘದ ಅಧ್ಯಕ್ಷ ವಾಯ್. ಬಿ ಪಾಟೀಲ, ಕಾರ್ಯಾಗಾರದ ಶಿಕ್ಷಕರಾದ ಎಸ್.ಜಿ. ಅರಗಿ, ಆರ್.ಎಲ್. ಮಿರ್ಜಿ, ಶೈಲಾ ಹೂಗಾರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿಗಳು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.