ಮೂಡಲಗಿ : ಇಲ್ಲಿನ ಮುಸ್ಲಿಂ ಸಮಾಜವು ಒಗ್ಗಟ್ಟಿಗೆ ಹೆಸರಾಗಿದ್ದು, ಯಾವುದೇ ಕಾರಣಕ್ಕೂ ನಮ್ಮ ನಮ್ಮಲ್ಲಿ ಭಿನ್ನಾಭಿಪ್ರಾಯ ಬೇಡ. ಮಸೀದಿ ಲೆಕ್ಕಪತ್ರದ ಬಗ್ಗೆ ಕೆಲವರಿಗೆ ಗೊಂದಲ ಉಂಟಾಗಿದ್ದು, ಗೊಂದಲಕ್ಕೆ ತೆರೆ ಎಳೆಯೋಣ ಎಂದು ಬಿಟಿಟಿ ಕಮೀಟಿ ಪ್ರಭಾರಿ ಅಧ್ಯಕ್ಷ ಮಲೀಕ ಕಳ್ಳಿಮನಿ ಹೇಳಿದರು.
ಸೋಮವಾರದಂದು ಪಟ್ಟಣದ ಜುಮ್ಮಾ ಮಸೀದಿ ಮುಂದೆ ಬಿಟಿಟಿ ಕಮೀಟಿ ಆಯೋಜಿಸಿದ ಕಮೀಟಿಯ ಲೆಕ್ಕಪತ್ರ ಬಗ್ಗೆ ವಿವರಣೆ ನೀಡಲು ಕರೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು,ಜುಮ್ಮಾ ಮಸೀದಿಯ ನೂತನ ಕಟ್ಟಡ ನಿರ್ಮಾಣಕ್ಕಾಗಿ 2019-20ನೇ ಸಾಲಿನಲ್ಲಿ ಕಮೀಟಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಪಟ್ಟಣದ ಸಮಾಜದ ಜನರಿಂದ 85.84ಲಕ್ಷ ರೂ,ಗಳನ್ನು ದೇಣಿಗೆ ಸಂಗ್ರಹಿಸಲು ತೀರ್ಮಾನಿಸಿದಂತೆ 2025 ಮೇ ತಿಂಗಳ ಅಂತ್ಯಕ್ಕೆ 67.85ಲಕ್ಷ ರೂ,ಗಳು ಸಂದಾಯವಾಗಿದ್ದು, ಇನ್ನುಳಿದ 29.03ಲಕ್ಷ ರೂ, ಗಳು ಸಂದಾಯವಾಗಬೇಕು. ಹಾಗೂ ಇತರೆ ರೂಪದಲ್ಲಿ ಸಂಗ್ರಹವಾದ 24.54ಲಕ್ಷ ರೂ, ಗಳು ಸೇರಿದಂತೆ ಒಟ್ಟು 92.40ಲಕ್ಷ ರೂ, ಸಂದಾಯವಾಗಿದ್ದು, ಅದರಲ್ಲಿ ಕಟ್ಟಡಕ್ಕಾಗಿ 91.05ಲಕ್ಷ ರೂ,ಗಳು ಬಳಸಲಾಗಿದೆ.1.35ಲಕ್ಷ ರೂ,ಗಳು ಬ್ಯಾಂಕ್ ಖಾತೆಯಲ್ಲಿ ಜಮಾ ಇದೆ. ಇನ್ನೊಂದು ಬ್ಯಾಂಕ್ ಖಾತೆಯಲ್ಲಿ 90 ಸಾವಿರ ಇದ್ದು ಒಟ್ಟು 2.25ಲಕ್ಷ ರೂ, ಶಿಲ್ಕು ಉಳಿದಿದೆ ಎಂದರಲ್ಲದೆ.
ಇನ್ನೊಂದು ಲೆಕ್ಕಪತ್ರ ವಿಭಾಗವಿದ್ದು, ಕಾರ್ಯ ನಿರ್ವಹಿಸುವ ಮೌಲಾನಾ ಮತ್ತು ಸಿಬ್ಬಂದಿಗಳಿಗೆ ಮಸೀದಿಯ ಇತರೆ ಖರ್ಚು ವೆಚ್ಚಗಳಿಗೆ 2024-25ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ಒಟ್ಟು 5.68ಲಕ್ಷ ರೂ,ಗಳು ಸಂದಾಯವಾಗಿದ್ದು, 5.51ಲಕ್ಷ ರೂ,ಗಳನ್ನು ಸಂಬಳ ನೀಡಲಾಗಿದ್ದು, 17 ಸಾವಿರ ಕಮೀಟಿಯಲ್ಲಿ ಉಳಿದಿದೆ, ವಾರ್ಷಿಕ ಸರ್ವ ಸಾಧರಣ ಸಭೆಯನ್ನು ಕರೆಯಬೇಕೆಂದರೆ ಅದು ನ್ಯಾಯಾಲಯದ ಹಂತದಲ್ಲಿ ಇರುವುದರಿಂದ ವಿಳಂಬವಾಗಿದೆ ಶೀಘ್ರವೇ ಅದನ್ನೂ ಕೂಡ ಪರಿಹರಿಸಿ ಸರ್ವ ಸಾಧರಣ ಸಭೆಯನ್ನು ಆಯೋಜಿಸಲಾಗುವುದೆಂದು ಹೇಳಿದರು.
ಕಮೀಟಿಯ ಲೆಕ್ಕಪತ್ರದ ವಿವರಣೆಗಾಗಿ ಅನಿರ್ಧಿಷ್ಠಾವಧಿ ಉಪವಾಸ ಸತ್ಯಾಗ್ರಹ ನಡೆಸಿದ್ದ ಮೈನುದ್ದಿನ ಪಟೇಲ ಹಾಗೂ ಸಾರ್ವಜನಿಕರಿಗೆ ಲೆಕ್ಕಪತ್ರದ ದಾಖಲೆಗಳನ್ನು ನೀಡಿ ಗೊಂದಲಕ್ಕೆ ತೆರೆ ಎಳೆಯುವ ಮೂಲಕ ಸಭೆ ಮುಕ್ತಾಯಗೊಳಿಸಿದರು.
ಈ ಸಂದರ್ಭದಲ್ಲಿ ಪಿಎಸ್ಐ ಬಿ ಎಚ್ ಕುಂಬಾರ, ಕಮೀಟಿ ಕಾರ್ಯದರ್ಶಿ ಮದಾರ ಮುಗಟಖಾನ್, ಮುಖಂಡರಾದ ಅಮೀರಸಾಬ್ ಥರಥರಿ, ಹಸನಸಾಬ್ ಮುಗಟಖಾನ್, ಇಮಾಹುಸೇನ ತಾಂಬೋಳಿ, ಹಾಜಿಸಾಬ್ ಪೀರಜಾದೆ, ರಶಿದ್ ಪಠಾನ್, ಗಪಾರ್ ಬಳಿಗಾರ ಹಾಗೂ ಕಮೀಟಿ ಸರ್ವ ಸದಸ್ಯರು, ಪೊಲೀಸ್ ಸಿಬ್ಬಂದಿ ಸೇರಿದಂತೆ ಯಂಗ್ ಕಮೀಟಿ ಸದಸ್ಯರು ಇದ್ದರು.