ಮೂಡಲಗಿ -ಶಿವಾಪೂರ ಹ ಗ್ರಾಮದ ಶರಣ ಜೀವಿ, ಆಧ್ಯಾತ್ಮದ ಚಿಂತಕರು, ದೇವಿ ಆರಾಧಕರು ಆದ ಕವಿ ಚಿದಾನಂದ ಮ ಹೂಗಾರ ಇವರ *ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮವನ್ನು ಮೂಡಲಗಿಯ ಚೈತನ್ಯ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸೈಟಿಯ ಸಭಾಭವನದಲ್ಲಿ ರವಿವಾರ ದಿವಸ ಮುಂಜಾನೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವೇ.ಮೂ ಶ್ರೀ ಚರಮೂರ್ತೇಶ್ವರ ಮಹಾಸ್ವಾಮಿಗಳು ಮಮದಾಪೂರ ಇವರು ವಹಿಸಿಕೊಳ್ಳುವರು. ಉದ್ಘಾಟಕರಾಗಿ ಶ್ರೀ ಮಲ್ಲನಗೌಡ ಶಂ.ಪಾಟೀಲ ಶಿವಾಪೂರ ಗ್ರಾಮದ ಹಿರಿಯರು ಆಗಮಿಸುವರು. ಅಧ್ಯಕ್ಷತೆ ಶ್ರೀ ತಮ್ಮಣ್ಣ ಕೆಂಚರೆಡ್ಡಿ, ಪುಸ್ತಕ ಪರಿಚಯಿಸಲು ಡಾ.ಮೇತ್ರೆಯಿಣಿ ಗದಿಗೆಪ್ಪಗೌಡರ ಸದಸ್ಯರು ಕರ್ನಾಟಕ ಸಾಹಿತ್ಯ ಅಕಾಡೆಮಿ ಮುಖ್ಯ ಅತಿಥಿಗಳಾಗಿ ಸಂಗಮೇಶ ಗುಜಗೊಂಡ,ಬಾಲಶೇಖರ ಬಂದಿ, ಶಿವನಗೌಡ ಶಂ.ಪಾಟೀಲ,ಬಿ.ಎಂ.ಸ್ವರಮಂಡಲ,ಎಂ.ಸಿ.ಮನ್ನಿಕೇರಿ, ಈಶ್ವರ ಬೆಳಗಲಿ, ಸಿದ್ರಾಮ ದ್ಯಾಗಾನಟ್ಟಿ,ಡಾ.ಮಹಾದೇವ ಜಿಡ್ಡಿಮನಿ,ಡಾ||ಎಸ್.ಎಸ್.ಪಾಟೀಲ, ಶಬ್ಬೀರ್ ಡಾಂಗೆ, ಗಂಗಾಧರ ಬಿಜಗುಪ್ಪಿ , ಮುಂತಾದವರು ಆಗಮಿಸುವರು.
ಚಿದಾನಂದ ಹೂಗಾರ ಇವರು ಬಾಲ್ಯದಲ್ಲಿ ಸಾಹಿತ್ಯ ಕೃಷಿ ಆರಂಭಿಸಿದರು. ಆದರೆ ೨೦೦೧ ರಿಂದ ವಿವಿಧ ವೇದಿಕೆಗಳಲ್ಲಿ ಕವನ ವಾಚನ ಮಾಡಿ ಬೆಳಕಿಗೆ ಬಂದರು. ಅವರ ಸಾಹಿತ್ಯ ನಿಜಕ್ಕೂ ಕನ್ನಡ ಕಾವ್ಯ ಪರಂಪರೆಯಲ್ಲಿ ವಿಭಿನ್ನ ಶೈಲಿಯ ಮೂಲಕ ಗಮನ ಸೆಳೆಯುತ್ತದೆ.
ಚಿದಾನಂದರು ಬಹುಮುಖ ವ್ಯಕ್ತಿತ್ವದ ಪ್ರತಿಭೆ ಎಂದರೆ ತಪ್ಪಾಗಲಾರದು. ಭಾಷಣಕಾರರಾಗಿ, ನಿರೂಪಕರಾಗಿ, ಪ್ರವಚನಕಾರರಾಗಿ, ವಾಸ್ತು ಸಲಹೆಗಾರರಾಗಿ, ಜಲಶೋಧಕರಾಗಿ, ವೈದಿಕ ಪೂಜಾ ಕೈಂಕರ್ಯಗಳ ಜೊತೆಗೆ ಪ್ರಧಾನ ಗುರುಗಳಾಗಿ ಸಾಹಿತಿಗಳಾಗಿ ಗುರುತಿಸಿಕೊಂಡು ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಇವರು ಭಾಗವಹಿಸಿದ ಕ್ಷೇತ್ರಗಳಿಲ್ಲ.
ಸದ್ಯ ಚುಟುಕು ಸಾಹಿತ್ಯ ಪರಿಷತ್ತು ಮೂಡಲಗಿ ಘಟಕದ ಅಧ್ಯಕ್ಷರಾಗಿ ಹಲವು ವಿಭಿನ್ನ ಕವಿಗೋಷ್ಠಿ, ಚುಟುಕು ಗೋಷ್ಠಿ, ಕಥಾಗೋಷ್ಠಿ, ಕವಿ ಕಾವ್ಯ ಕುಂಚ ಗಾಯನದಂಯಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಲವು ಕವಿಗಳನ್ನು, ಕಲಾವಿದರನ್ನು, ಗಾಯಕರನ್ನು ಪರಿಚಯಿಸಿದರು. ಜೊತೆಗೆ ಸರಳತೆಯ ಸಾಕಾರ ಮೂರ್ತಿ ತರಹ ಎಲ್ಲರೊಂದಿಗೆ ನಗುನಗುತ್ತಲೇ ಇರುವ ಇವರು ಆದರ್ಶನೀಯ ವ್ಯಕ್ತಿ. ಇವರಿಂದ ಇನ್ನೂ ಹೆಚ್ಚು ಕೃತಿಗಳು ಬರಲೆಂಬುದು ಎಲ್ಲಾ ಸಾಹಿತ್ಯಾಸಕ್ತರ ಅಭಿಪ್ರಾಯವಾಗಿದೆ.