ಮೂಡಲಗಿ: ಕೇಂದ್ರ ಸರ್ಕಾರವು ನಿಯೋಜಿಸಿರುವ 8ನೇ ವೇತನ ಆಯೋಗದಲ್ಲಿ ನಿವೃತ್ತ ನೌಕರರಿಗೆ ಪಿಂಚಣಿಯನ್ನು ಪರಿಷ್ಕರಿಸದಿರುವುದು ಮತ್ತು ತುಟ್ಟಿ ಭತ್ಯೆಯನ್ನು ನಿಲ್ಲಿಸುವ ಬಗ್ಗೆ ಲೋಕಸಭೆಯಲ್ಲಿ ಚರ್ಚೆಯಾಗಿರುವುದನ್ನು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಮೂಡಲಗಿ ತಾಲ್ಲೂಕು ಘಟಕವು ತೀವ್ರವಾಗಿ ಖಂಡಿಸಿದೆ.
ಈ ವಿಷಯ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಮೂಡಲಗಿ ತಾಲ್ಲೂಕು ಘಟಕದ ಅಧ್ಯಕ್ಷ ಪ್ರೊ. ಎಸ್.ಎಂ. ಕಮದಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದು ಇದೇ ಜುಲೈ 21ರಂದು ಬೆಳಿಗ್ಗೆ 10 ಗಂಟೆಗೆ ಮೂಡಲಗಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಿ ನಿವೃತ್ತ ನೌಕರರ ಸಹಿ ಸಂಗ್ರಹ ಚಳುವಳಿ ಮಾಡಿ ಪಿಂಚಣಿದಾರರಿಗೆ 8ನೇ ವೇತನ ಆಯೋಗದಲ್ಲಿ ಅನ್ಯಾಯ ಮಾಡಬಾರದು ಎಂದು ಮನವಿಯನ್ನು ಪ್ರಧಾನಮಂತ್ರಿಯವರಿಗೆ ಮೂಡಲಗಿ ತಹಶೀಲ್ದಾರ್ ಅವರ ಮೂಲಕ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ವೇತನ ಭತ್ಯೆಗಳನ್ನು ಮತ್ತು ಪಿಂಚಣಿಯನ್ನು ಪರಿಷ್ಕರಿಸಲು 8ನೇ ಆಯೋಗವನ್ನು ಈಗಾಗಲೇ ರಚನೆ ಮಾಡಿ ಅದು ಕಾರ್ಯೋನ್ಮುಖವಾಗಿದೆ. ಏತನ್ಮಧ್ಯೆ ಕೇಂದ್ರ ಸರ್ಕಾರದ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮ್ರವರು ಇದೇ ವರ್ಷದ ಕಳೆದ ಮಾರ್ಚ 25ರಂದು ಲೋಕಸಭೆಯಲ್ಲಿ ಆರ್ಥಿಕ ಬಿಲ್ವನ್ನು ಮಂಡಿಸುವ ಸಂದರ್ಭದಲ್ಲಿ 1-4-2026ರ ಪೂರ್ವದಲ್ಲಿ ನಿವೃತ್ತರಾಗಿರುವ ಎಲ್ಲ ಪಿಂಚಣಿದಾರರಿಗೆ 8ನೇ ವೇತನ ಆಯೋಗದಲ್ಲಿ ಪಿಂಚಣಿಯನ್ನು ಪರಿಷ್ಕರಿಸುವುದು ಕಷ್ಟಸಾಧ್ಯ ಮತ್ತು ಅವರಿಗೆ ಮುಂಬರುವ ತುಟ್ಟಿ ಭತ್ಯೆಗಳನ್ನು ಸಹ ನಿಲ್ಲಿಸಬಹುದಾಗಿದೆ ಎಂದು ತಿಳಿಸಿ ಪಿಂಚಣಿದಾರರಲ್ಲಿ ಆತಂಕ ಮೂಡಿಸಿದ್ದಾರೆ. ಈ ವಿಷಯ ಬಗ್ಗೆ ಅಖಿಲ ಭಾರತ ನಿವೃತ್ತ ನೌಕರರ ಸಮಿತಿಯು ಸಹ ಬೆಂಗಳೂರಿನಲ್ಲಿ ಸಭೆ ಸೇರಿ ಸಚಿವೆ ನಿರ್ಮಲಾ ಸೀತಾರಾಮ್ ಅವರ ನಡೆಯನ್ನು ತೀವ್ರವಾಗಿ ಖಂಡಿಸಿದೆ ಎಂದಿದ್ದಾರೆ.
ಪಿಂಚಣಿದಾರರಿಗೆ ಮುಂದೆ ಆಗುವ ಸಮಸ್ಯೆಗಳ ಬಗ್ಗೆ ಪ್ರಧಾನಿ ಮಂತ್ರಿಗಳ ಗಮನಸೆಳೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಿ ನಿವೃತ್ತ ನೌಕರರರು ಜುಲೈ 21ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಸಹಿ ಆಂದೋಲನಕ್ಕಾಗಿ ಎಸ್ಎಸ್ಆರ್ ಕಾಲೇಜು ಬಳಿಯಲ್ಲಿ ಸಮಾವೇಶಗೊಳ್ಳಬೇಕು ಎಂದು ಪ್ರೊ. ಕಮದಾಳ ಅವರು ತಿಳಿಸಿದ್ದಾರೆ.