ಮೂಡಲಗಿ: ‘ಬಸವಣ್ಣನವರ ತತ್ವ, ವ್ಯಕ್ತತ್ವದಿಂದ ಪ್ರಭಾವಿತರಾದ ಮೋಳಿಗೆ ಮಾರಯ್ಯ ತಮ್ಮ ವಚನಗಳಲ್ಲಿ ಡಂಭಾಚಾರವನ್ನು ಕಟುವಾಗಿ ಟೀಕಿಸಿದ ಕಾಯಕನಿಷ್ಠ ಶರಣ ಎಂದು ಗುರುತಿಸಿಕೊಂಡಿದ್ದರು’ ಎಂದು ಮಕ್ಕಳ ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಹೇಳಿದರು.
ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಮಠದ 19ನೇ ಮಾಸಿಕ ಶಿವಾನುಭವ ಗೋಷ್ಠಿಲ್ಲಿ ಮೋಳಿಗೆ ಮಾರಯ್ಯ ಅವರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದ ಅವರು ಮಾರಯ್ಯನವರು ಅಂತರಂಗ, ಬಹಿರಂಗದ ಶುದ್ಧತೆಯೇ ಭಕ್ತಿಯ ನಿಜವಾದ ಮಾರ್ಗವೆಂದು ಪ್ರತಿಪಾದಿಸಿದ್ದರು ಎಂದರು.
ಸಾನ್ನಿಧ್ಯವಹಿಸಿದ್ದ ಅರಭಾವಿ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮೀಜಿ ಮಾತನಾಡಿದ ಅವರು ಸತ್ಯ, ಶುದ್ಧ ಕಾಯಕ, ಸದ್ವಿಚಾರಗಳಿಂದ ಬದುಕಿನಿಂದ ಮುಕ್ತಿಯನ್ನು ಪಡೆಯಲು ಸಾಧ್ಯ. ಶರಣರು ಕಾಯಕ ಮತ್ತು ದಾಸೋಹದ ಪರಿಕಲ್ಪನೆಯ ಅಮೂಲ್ಯ ಕೊಡುಗೆಯನ್ನು ನೀಡಿದ್ದರು. ಶರಣರ ಸನ್ಮಾರ್ಗದಲ್ಲಿ ನಡೆಯುವುದರ ಮೂಲಕ ಜೀವನದಲ್ಲಿ ಶಾಂತಿ, ಆನಂದವನ್ನು ಪಡೆದುಕೊಳ್ಳಬೇಕು ಎಂದರು.
ಶರಣ ದಂಪತಿ ದಿ. ಚಂಬಕ್ಕಾ ಮತ್ತು ಈಶ್ವರಪ್ಪ ಸಿದ್ರಾಮಪ್ಪ ನಿಜಗುಲಿ ಸ್ಮರಣೆಯಲ್ಲಿ ಅವರ ಪುತ್ರ ಶಿವಾನಂದ ನಿಜಗುಲಿ ಅವರು ಶ್ರೀಮಠದ ದಾಸೋಹ ಭವನ ಕಟ್ಟಡಕ್ಕೆ ರೂ.5 ಲಕ್ಷ ದೇಣಿಗೆ ನೀಡಿದ ಪ್ರಯುಕ್ತ ಅವರನ್ನು ಸನ್ಮಾನಿಸಿ ಗೌರವಿಸಿದರು.
ಅತಿಥಿಯಾಗಿ ಸವದತ್ತಿಯ ವಲಯ ಅರಣ್ಯಾಧಿಕಾರಿ ಸಂಜೀವ ಸಂವಸುದ್ದಿ, ಕೃಷಿ ಸಾಧಕ ಲಕ್ಷ್ಮೀಕಾಂತ ಸೊಲ್ಲಾಪೂರ ಅವರನ್ನು ಸನ್ಮಾನಿಸಿದರು.
ಶಿಕ್ಷಕ ಅಪ್ಪಾಸಾಹೇಬ ಕುರುಬರ ಅವರಿಂದ ಸಂಗೀತ ಜರುಗಿತು. ವಿ.ಕೆ. ನಾಯ್ಕ ಪ್ರಾಸ್ತಾವಿಕ ಮಾತನಾಡಿ ನಿರೂಪಿಸಿದರು.