ಮೂಡಲಗಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (ಕೆಎಎಸ್ಎಸ್)ಯು ಬರುವ ಅ.1ರಿಂದ ಜಾರಿಗೆ ಬರಲಿದೆ. ಜಿಲ್ಲೆಯ ಸರ್ಕಾರಿ ನೌಕರರು ಇದರ ಪ್ರಯೋಜನ ಪಡೆಯಬೇಕು ಎಂದು ಸಂಘದ ತಾಲೂಕಾ ಘಟಕದ ಅಧ್ಯಕ್ಷ ಆನಂದ ಹಂಜ್ಯಾಗೋಳ ಹೇಳಿದ್ದಾರೆ.
ಈ ಯೋಜನೆಯ ಸೌಲಭ್ಯ ಪಡೆಯಲು ಪ್ರತಿ ತಿಂಗಳು ಸರ್ಕಾರ ನಿಗದಿಪಡಿಸಿದ ವಂತಿಗೆಯನ್ನು ಮುಂದಿನ ತಿಂಗಳಿನಿಂದ ಪಾವತಿಸಬೇಕು. ಪತಿ-ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದಲ್ಲಿ ಒಬ್ಬರು ಮಾತ್ರ ವಂತಿಗೆ ಪಾವತಿಸಬೇಕು. ಮಾಸಿಕ ವಂತಿಕೆಯನ್ನು ನೀಡಲು ಇಚ್ಚಿಸುವವರು ಅ.18ರೊಳಗೆ ಸಂಬಂಧಿಸಿದ ಬಟವಾಡೆ ಅಧಿಕಾರಿಗಳಿಗೆ (ಡಿಡಿಒ) ತಿಳಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಅಧಿಕಾರಿ/ನೌಕರರ ತಂದೆ-ತಾಯಿ ಪಿಂಚಣಿದಾರರಾಗಿದ್ದಲ್ಲಿ ಅವರ ಮಾಸಿಕ ಆದಾಯ ಮಿತಿಯನ್ನು ರೂ.17,000ದಿಂದ ರೂ. 27,000ಕ್ಕೆ ಹೆಚ್ಚಿಸಲಾಗಿದೆ. ವಿವಾಹಿತ ಸರ್ಕಾರಿ ಮಹಿಳಾ ನೌಕರರ ತಂದೆ-ತಾಯಂದಿರೂ ಸಹ ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ. ಈ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಎಎಎಸ್ಟಿ) ನಿರ್ವಹಿಸಲಿದೆ ಎಂದು ಹೇಳಿದ್ದಾರೆ.
ಯೋಜನೆಯನ್ನು ಜಾರಿಗೊಳಿಸಿದ್ದಕ್ಕಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಜಿಲ್ಲಾ ಉಸ್ತುವಾರಿ ಮಂತ್ರಿ ಸತೀಶ್ ಜಾರಕಿಹೊಳಿ ಅವರಿಗೆ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ನಗದು ರಹಿತ ಚಿಕಿತ್ಸೆ ಜಾರಿಗೊಳಿಸಲು ನಿರಂತರ ಶ್ರಮವಹಿಸಿದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರಿಗೆ ಮೂಡಲಗಿ ತಾಲೂಕಿನ ಸಮಸ್ತ ನೌಕರರ ಪರವಾಗಿ ತುಂಬು ಹೃದಯದ ಧನ್ಯವಾದಗಳು ಎಂದು ತಿಳಿಸಿದ್ದಾರೆ.