ಮೂಡಲಗಿ: ‘ಭಾರತ ದೇಶವು ಅನಂತ ಕೋಟಿ ದೇವಸ್ಥಾನಗಳು, ಮಠಮಾನ್ಯಗಳು, ಸಾಧು, ಸತ್ಪುರುಷರು ನೆಲೆಸಿದ್ದ ಪುಣ್ಯ ಭೂಮಿಯಾಗಿದೆ’ ಎಂದು ಶ್ರೀಶೈಲ್ ಮಹಾಪೀಠದ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ಇಲ್ಲಿಯ ಬಸವ ರಂಗಮಂಟಪದಲ್ಲಿ ಮಂಗಳವಾರ ಜರುಗಿದ ಭದ್ರಕಾಳಿ ಸಮೇತ ವೀರಭದ್ರೇಶ್ವರ ನೂತನ ಪಲ್ಲಕ್ಕಿ ಆಗಮನ ಹಾಗೂ 32ನೇ ಜಾತ್ರಾ ಮಹೋತ್ಸವದ ಧರ್ಮ ಸಭೆಯ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಭಾರತೀಯರ ದೈವ ಭಕ್ತಿಯೂ ಅನನ್ಯವಾಗಿದೆ.
ಧಾರ್ಮಿಕ ಆಚರಣೆಗಳ ಮೂಲಕ ಧರ್ಮವನ್ನು ಉಳಿಸಬೇಕು ಎಂದರು.
ತಂದೆ, ತಾಯಿಗಳಾದವರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು, ಧಾರ್ಮಿಕ ನಡೆ, ನುಡಿ, ಆಚರಣೆಗಳ ಅರಿವು ಮೂಡಿಸುವ ಮೂಲಕ ದೇಶದ ಸತ್ಪಜೆಗಳನ್ನಾಗಿಸಬೇಕು ಎಂದರು.
ಯಡೂರ ಕ್ಷೇತ್ರವು ಜೀರ್ಣೋದ್ಧಾರಗೊಂಡಿದ್ದು, ಬರುವ ಮಾ. 1ರಿಂದ 6 ರವರೆಗೆ ಯೂಡೂರ ಕ್ಷೇತ್ರದಲ್ಲಿ ಮಹಾಕುಂಭ ಮೇಳವು ಜರುಗಲಿದೆ. ಪಂಚಪೀಠ ಜಗದ್ಗುರುಗಳು ನೂತನವಾಗಿ ನಿರ್ಮಿಸಿರುವ ಪಂಚ ರಾಜಗೋಪುರಗಳನ್ನು ಉದ್ಘಾಟಿಸುವರು. 5 ಸಾವಿರ
ಮಹಿಳೆಯರಿಂದ ನದಿಯ ನೀರಿನ ಅಭಿಷೇಕ ಜರುಗಲಿದೆ. ಭಕ್ತಾದಿಗಳು ಕುಂಭಮೇಳದಲ್ಲಿ ಭಾಗಿಯಾಗಿ ದೇವರ ಕೃಪೆಗೆ ಪಾತ್ರಾರಾಗಬೇಕು.
ಮೂಡಲಗಿಯಲ್ಲಿ ವೀರಭದ್ರೇಶ್ವರ ದೇವಸ್ಥಾನವು ಉತ್ತಮ ಪ್ರಗತಿಯಾಗಿದೆ, ಭಕ್ತರ ಸಂಖ್ಯೆ ವೃದ್ಧಿಯಾಗಿದ್ದು ಶ್ಲಾಘನೀಯವಾಗಿದೆ ಎಂದರು.
ಸಾನ್ನಿಧ್ಯವಹಿಸಿದ್ದ ಕಾಶಿ ಮಹಾಪೀಠದ ಜಗದ್ಗುರು ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ ಮನುಷ್ಯನು ಸತ್ಯ, ಪ್ರಾಮಾಣಿಕತೆಯಿಂದ
ನಡೆದುಕೊಂಡು ದೇವರನ್ನು ತಮ್ಮೊಳಗೆ ಕಾಣಬೇಕು. ಉತ್ತಮ ನಡೆ, ನುಡಿ, ಆಚರಗಳಿಂದ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದರು.
ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪೂರದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯರು, ಸುಣಧೋಳಿಯ ಶಿವಾನಂದ ಸ್ವಾಮೀಜಿ,
ಮಮದಾಪೂರದ ಮೌನಮಲ್ಲಿಕಾರ್ಜುನ ಸ್ವಾಮೀಜಿ, ಇಟನಾಳದ ಸಿದ್ದೇಶ್ವರ ಸ್ವಾಮೀಜಿ, ನಾಗನೂರದ ಮಾತೋಶ್ರೀ ಕಾವ್ಯ ಅಮ್ಮನವರು, ನೀಲಕಂಠೇಶ್ವರ ಮಠದ ಶಿವಾನಂದ ಸ್ವಾಮೀಜಿಯವರು, ವೀರಭದ್ರೇಶ್ವರ ದೇವಸ್ಥಾನದ ಧರ್ಮದರ್ಶಿ ಈರಯ್ಯ ಹಿರೇಮಠ ಸ್ವಾಮೀಜಿ ವೇದಿಕೆಯಲ್ಲಿದ್ದರು.
ದಾನಿಗಳಿಗೆ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿದರು. ಶ್ರೀಶೈಲ್ ಹಿರೇಮಠ ಸ್ವಾಗತಿಸಿದರು, ಸದಾಶಿವ ತಲಬಟ್ಟಿ, ಬಾಲಶೇಖರ ಬಂದಿ ನಿರೂಪಿಸಿದರು.
ಮೆರವಣಿಗೆ: ಜಗದ್ಗುರುಗಳನ್ನು ಕುಂಭಮೇಳ ಹಾಗೂ ವಿವಿಧ ವಾದ್ಯ ಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ವೇದಿಕೆಗೆ ಬರಮಾಡಿಕೊಂಡರು. ಮೆರವಣಿಗೆಯಲ್ಲಿ ಕರಡಿಮಜಲು, ಪುರವಂತರ ಶಸ್ತ್ರ ಪ್ರದರ್ಶನವು ಗಮನಸೆಳೆದವು
IN MUDALGI Latest Kannada News