ನಿಂಗವ್ವ ನಟಿಸಲೆಂದೇ ಹುಟ್ಟಿದವಳು-
ಶ್ರೀ ಲಕ್ಷ್ಮಣ ಚೌರಿ
ಗೋಕಾಕ: ಶ್ರೀ ಕೃಷ್ಣ ಪಾರಿಜಾತ ನಾಟಕದ ಒಂದು ಕಾಲಘಟ್ಟದಲ್ಲಿ ನಟಿಸಿ ಬೈಲಾಟ ರಂಗ ಪರಂಪರೆಯನ್ನು ಶ್ರೀಮಂತಗೊಳಿಸಿದ ಜಾನಪದ ರಂಗಭೂಮಿಯ ಪ್ರಥಮ ರಂಗನಟಿ ಎನಿಸಿಕೊಂಡ ಕೌಜಲಗಿ ನಿಂಗವ್ವ ನಟಿಸಲೆಂದೇ ಹುಟ್ಟಿದವಳು ಎಂದು ಮಕ್ಕಳ ಸಾಹಿತಿ-ಕಥೆಗಾರ-ಶಿಕ್ಷಕ ಶ್ರೀ ಲಕ್ಷ್ಮಣ ಚೌರಿ ಹೇಳಿದರು.
ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕೋವಿಡ್ -19 ಲಾಕ್ಡೌನ್ ಸಂದರ್ಭದಲ್ಲಿ ಗೂಗಲ್ ಮೀಟ್ ನ ಸೆಮಿನಾರ್ ಅಲ್ಲ ವೇಬಿನಾರ್ ವಿಶೇಷ ಉಪನ್ಯಾಸ ಮಾಲಿಕೆ 19ನೇ ಗೋಷ್ಠಿಯಲ್ಲಿ “ಅಭಿಜಾತ ಕಲಾವಿದೆ ಕೌಜಲಗಿ ನಿಂಗವ್ವ” ವಿಷಯ ಕುರಿತು ಮಾತನಾಡುತ್ತಾ, ಗೋಕಾವಿ ನಾಡಿನ ಜಾನಪದ ರಂಗಕಲೆಗೆ ಶ್ರೀ ಕೃಷ್ಣ ಪಾರಿಜಾತ ಹೊಸ ಪರಂಪರೆಯನ್ನೇ ಹುಟ್ಟುಹಾಕಿದೆ. ರಾಯಚೂರು ಜಿಲ್ಲೆ ಶಿರಗುಪ್ಪಿ ಸದಾಶಿವನಿಂದ ಹುಟ್ಟಿಕೊಂಡ ಕಾವ್ಯ ನಾಟಕವನ್ನು ನಮ್ಮ ಗೋಕಾವಿ ನಾಡಿನ ಕುಲಗೋಡ ತಮ್ಮಣ್ಣ ಕಾವ್ಯ ನಾಟಕವನ್ನು ಸಂಭಾಷಣೆ ಮತ್ತು ನಟನೆಯಿಂದ ಒಗ್ಗೂಡಿಸಿ ಪ್ರಥಮ ರಂಗಪ್ರಯೋಗಕ್ಕೆ ತಂದನು. ಕೌಜಲಗಿ ನಿಂಗಮ್ಮ ಶ್ರೀ ಕೃಷ್ಣ ಪಾರಿಜಾತದಲ್ಲಿ ಪ್ರಥಮ ರಂಗ ನಟಿಯಾಗಿ ಪ್ರವೇಶ ಮಾಡಿದಳು ಎಂದು ಹೇಳಿದರು.
ಕಲಾವಿದ ಹಾಗೂ ಸಾಹಿತಿ ಜಯಾನಂದ ಮಾದರ್ ಸಂಘಟಿಸಿ ಸಂಚಾಲಕತ್ವದಲ್ಲಿ ಮೂಡಿಬಂದ ಈ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಹಿರಿಯ ಸಾಹಿತಿ ಚಿಂತಕ ಶ್ರೀ ವಸಂತರಾವ್ ಕುಲಕರ್ಣಿ ಸಣ್ಣಾಟ ಕಲೆಯ ರಾಜ ಎನಿಸಿಕೊಂಡ ಶ್ರೀ ಕೃಷ್ಣ ಪಾರಿಜಾತ ಉತ್ತರ ಕರ್ನಾಟಕದ ಬಲು ಪ್ರಸಿದ್ಧಿ ಪಡೆದ ರಂಗ ಕಲೆಯಾಗಿದೆ ಎಂದರು.