ಮೂಡಲಗಿ ಸಮೀಪದ ಮುನ್ಯಾಳದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ‘ಮನೆ, ಮನೆಗೆ ಪ್ರವಚನ’ದ 3ನೇ ದಿನದ ಕಾರ್ಯಕ್ರಮದಲ್ಲಿ ಶ್ರೀಗಳು ಮತ್ತು ಭಕ್ತರು ಭಾಗವಹಿಸಿದ್ದರು
ಡಾ. ಜಗದೀಶ ಸೂರಣ್ಣವರ ಸಲಹೆ
‘ಕೋವಿಡ್ ಭಯ ಬೇಡ; ಎಚ್ಚರವಹಿಸಿರಿ’
ಮೂಡಲಗಿ: ‘ಆರೋಗ್ಯದ ಬಗ್ಗೆ ಮುಂಜಾಗೃತ ಕ್ರಮವನ್ನು ತೆಗೆದುಕೊಂಡು ಕೊರೊನಾ ಸೋಂಕಿನಿಂದ ಮುಕ್ತರಾಗಿ ಆರೋಗ್ಯಪೂರ್ಣ ಜೀವನ ನಡೆಸಿರಿ’ ಎಂದು ಕೆ.ಎಲ್.ಇ. ಆಸ್ಪತ್ರೆಯ ಎಲುವು, ಕೀಲು ತಜ್ಞ ವೈದ್ಯ ಡಾ. ಜಗದೀಶ ಸೂರಣ್ಣವರ ಹೇಳಿದರು.
ತಾಲ್ಲೂಕಿನ ಖಾನಟ್ಟಿಯಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ಹಮ್ಮಿಕೊಂಡಿರುವ ‘ಮನೆ, ಮನೆಗೆ ಅರುಹಿನ ಅರಮನೆ ಪ್ರವಚನ ಮತ್ತು ಕೋವಿಡ್ ಅರಿವು’ ಅಭಿಯಾನದ 3ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೋವಿಡ್ದಿಂದ ಭಯಪಡದೆ, ಎಚ್ಚರವಹಿಸಿದರಿ. ವೈದ್ಯರ ಸಲಹೆಗಳನ್ನು ಪಾಲಿಸುವ ಮೂಲಕ ಅಪಾಯದಿಂದ ಮುಕ್ತರಾಗಿರಿ ಎಂದರು.
ಕೋವಿಡ್ ದೃಢವಾದ ಸಾವಿರಾರು ಜನರು ಆರೋಗ್ಯವಾಗಿದ್ದಾರೆ. ನಿರ್ಲಕ್ಷತೆ ತೋರದೆ ಇರುವುದು ಇದಕ್ಕೆ ಸರಿಯಾದ ಮದ್ದು ಎಂದರು.
ಪ್ರವಚನಕಾರ ಶರಣ ಲಕ್ಷ್ಮಣ ದೇವರು ಮಾತನಾಡಿ ‘ಉತ್ತಮ ಸಮಾಜಕ್ಕಾಗಿ ಒಳ್ಳೆಯ ಸಂಸ್ಕಾರದ ಅವಶ್ಯವಿದೆ. ಸಂಸ್ಕಾರವು ಮನೆಯಿಂದ ಪ್ರಾರಂಭಗೊಳ್ಳಬೇಕು. ಪಾಲಕರು ಮಕ್ಕಳಿಗೆ ಉತ್ತಮ ನಡೆ, ನುಡಿಯನ್ನು ಕಲಿಸುವ ಮೂಲಕ ಉತ್ತಮ ಸಮಾಜ ಕಟ್ಟಬೇಕು’ ಎಂದರು.
ಸಾನ್ನಿಧ್ಯವಹಿಸಿದ್ದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿಗಳು ಆಶೀರ್ವಚನ ನೀಡಿ ದೇಹ ಮತ್ತು ಮನಸ್ಸು ಎರಡನ್ನೂ ಶುದ್ಧ ಮಾಡುವ ಸಲುವಾಗಿ ಅಧಿಕ ಮಾಸದ ಪ್ರವಚನ ಮುಖ್ಯ ಉದ್ಧೇಶವಾಗಿದೆ ಎಂದರು.
ಕಾರ್ತಿಕ ಶಾಸ್ತ್ರೀ, ವೀರಯ್ಯ ಶಾಸ್ತ್ರೀಗಳು ಪ್ರಾರಂಭದಲ್ಲಿ ಮಂತ್ರಘೋಷ ಪಠಣ ಮಾಡಿದರು.
ಬಾಳಪ್ಪ ತುಪ್ಪದ, ಶಂಕರ ಡೋಣಿ, ಪ್ರಕಾಶ ಪಾಟೀಲ, ಸಿದಲಿಂಗ ತುಪ್ಪದ, ಮಹಾದೇವ ತುಪ್ಪದ, ಶಿವಲಿಂಗ ಗುದಗನ್ನವರ, ಶಿವನಪ್ಪ ರಡ್ಡೇರಟ್ಟಿ, ಬಸವರಾಜ ಕೌಜಲಗಿ, ಜಗದೀಶ ಬಳಿಗಾರ, ಯಂಕನಗೌಡ ಪಾಟೀಲ ಉಪಸ್ಥಿತರಿದ್ದರು.
ಡಾ. ಕೆ.ಎಚ್. ನಾಗರಾಳ ನಿರೂಪಿಸಿದರು, ಪ್ರವೀಣ ಹುಕ್ಕೇರಿ ವಂದಿಸಿದರು.
