ಬೆಟಗೇರಿ:ಸ್ಥಳೀಯ ಗ್ರಾಮ ಪಂಚಾಯತಿ ಮೂಲಕ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಸರ್ಕಾರ ಗ್ರಾಮೀಣ ಜನರಿಗೆ ಹಲವಾರು ಸಹಾಯ ಸೌಲಭ್ಯಗಳನ್ನು ನೀಡುತ್ತಿದೆ. ಈ ಯೋಜನೆಯ ಸದುಪಯೋಗವನ್ನು ಸ್ಥಳೀಯರು ಪಡೆದುಕೊಳ್ಳಬೇಕು ಎಂದು ಗೋಕಾಕ ತಾಲೂಕಾ ಪಂಚಾಯತಿ ಐಇಸಿ ಸಂಯೋಜಕ ಶಂಕರ ಗುಜನಟ್ಟಿ ಹೇಳಿದರು.
ಬೆಳಗಾವಿ ಜಿಲ್ಲಾ ಪಂಚಾಯತ, ಗೋಕಾಕ ತಾಲೂಕಾ ಪಂಚಾಯತ ಹಾಗೂ ಸ್ಥಳೀಯ ಗ್ರಾಮ ಪಂಚಾಯತ ಸಹಯೋಗದಲ್ಲಿ ಬುಧವಾರ ಸೆ.23 ರಂದು ಗ್ರಾಮದಲ್ಲಿ ಆಯೋಜಿಸಿದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಬಚ್ಚಲು ಗುಂಡಿ, ಪೌಷ್ಠಿಕ ತೋಟ ಹಾಗೂ ಅಣಬೆ ಬೇಸಾಯಗಳ ವಿಶೇಷ ಅಭಿಯಾನಕ್ಕೆ ಚಾಲನೆ ಮತ್ತು ಅನುಷ್ಠಾನ ಕುರಿತು ತಿಳುವಳಿಕೆ ಮೂಡಿಸುವ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಲ್ಲಿಯ ಗ್ರಾಮ ಪಂಚಾಯತ ಅಧಿಕಾರಿಗಳನ್ನು ಸ್ಥಳೀಯರು ಭೇಟಿಯಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಹಾಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಳ್ಳಬೇಕು ಎಂದು ಐಇಸಿ ಸಂಯೋಜಕ ಶಂಕರ ಗುಜನಟ್ಟಿ ತಿಳಿಸಿದರು.
ಗ್ರಾಮದ ಪ್ರಮುಖ ಸ್ಥಳ, ಬೀದಿಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹಲವಾರು ಸೌಲಭ್ಯಗಳ ಕುರಿತು ಸ್ಥಳೀಯ ಗ್ರಾಪಂ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಂದ ಗ್ರಾಮಸ್ಥರಲ್ಲಿ ತಿಳುವಳಿಕೆ ಮೂಡಿಸುವ ಪ್ರಚಾರ ಕಾರ್ಯಕ್ರಮ ನಡೆಯಿತು.
ಗ್ರಾಪಂ ಪಿಡಿಒ ಎಚ್.ಎನ್.ಬಾವಿಕಟ್ಟಿ, ಕಾರ್ಯದರ್ಶಿ ಗೌಡಪ್ಪ ಮಾಳೇದ, ಸುರೇಶ ಬಾಣಸಿ, ವಿಠಲ ಚಂದರಗಿ, ಶಿವಾನಂದ ಐದುಡ್ಡಿ ಸೇರಿದಂತೆ ಸ್ಥಳೀಯ ಗ್ರಾಪಂ ಮಾಜಿ ಸದಸ್ಯರು, ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಇದ್ದರು.
IN MUDALGI Latest Kannada News