ಮೂಡಲಗಿ ಸಮೀಪದ ರಂಗಾಪುರ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ‘ಮನೆ, ಮನೆಗೆ ಆಧ್ಯಾತ್ಮಿಕ ಪ್ರವಚನ’ ದ 23ನೇ ದಿನದ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಜೀವಿ ವೆಂಕಪ್ಪ ಪಾಟೀಲ ಅವರನ್ನು ಸನ್ಮಾನಿಸಿದರು
ಡಾ. ಶಿವಲಿಂಗ ಮುರುಘರಾಜೇಂದ್ರ ಶಿಚಾಚಾರ್ಯರ ನುಡಿ
‘ಮನಸ್ಸಿನ ಮಲೀನತೆ ತೆಗೆಯಲು ಆಧ್ಯಾತ್ಮಿಕ ಚಿಂತನ ಅವಶ್ಯ’
ಮೂಡಲಗಿ: ‘ಮನಸ್ಸಿನ ಮಲೀನತೆ ತೆಗೆಯಲು ಆಧ್ಯಾತ್ಮಿಕ ಚಿಂತನಗಳು, ಸತ್ಪುರುಷರ ಸತ್ಸಂಗಗಳು ಅವಶ್ಯವಿದೆ’ ಎಂದು ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಸದಾಶಿವಯೋಗೀಶ್ವರ ಮಠದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ರಂಗಾಪುರ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ಹಮ್ಮಿಕೊಂಡಿರುವ ‘ಮನೆ, ಮನೆಗೆ ಅರುಹಿನ ಅರಮನೆ ಪ್ರವಚನ ಮತ್ತು ಕೋವಿಡ್ ಅರಿವು’ ಅಭಿಯಾನದ ರೈತ ಸಂಘದ ಆತಿಥ್ಯದಲ್ಲಿ ಶನಿವಾರ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿದ 23ನೇ ದಿನದ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯನು ಕೇವಲ ತನ್ನ ಬಹಿರಂಗದ ಶುದ್ಧಿಗೆ ಮಹತ್ವ ನೀಡುತ್ತಿದ್ದು ಅದರೊಂದಿಗೆ ಅಂತರಂಗದ ಶುದ್ಧಿಯಾಗಬೇಕು. ಆಗ ಮಾತ್ರ ಸದೃಢ ದೇಹ ಮತ್ತು ಮನಸ್ಸಿನಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗುವುದು ಎಂದರು.
ಸಾಹಿತಿ ಬಾಲಶೇಖರ ಬಂದಿ ಮಾತನಾಡಿ ಕೊರೊನಾ ಸೋಂಕು ಕಳೆದ 7 ತಿಂಗಳದಲ್ಲಿ ಸಾಕಷ್ಟು ಆತಂಕ ಮೂಡಿಸಿದೆ. ಅದರೊಂದಿಗೆ ಜನರಿಗೆ ಬದುಕಿನ ಹಾಗೂ ಬದುಕುವ ಪಾಠವನ್ನು ಕಲಿಸಿದೆ ಎಂದರು.
ಕೊರೊನಾದ ಆತಂಕದಲ್ಲಿ ಜನರಲ್ಲಿಯ ಶ್ರೀಮಂತಿಕೆ, ಅಧಿಕಾರದ ಅಹಂಕಾರ ನಿರ್ಮೂಲನೆ ಮಾಡಿದೆ. ಜನರಲ್ಲಿ ಕೌಟುಂಬಿಕ ಸಂಬಂಧ, ಪ್ರೀತಿ ಬೆಳೆಸಿದೆ, ಶಿಸ್ತು, ಸ್ವಚ್ಛತೆ ಕಲಿಸಿದೆ. ಪರಿಸರದ ಮಹತ್ವವನ್ನು ತಿಳಿಸಿದೆ. ಜನರಲ್ಲಿ ದಾನ, ದಾಸೋಹದ ಸಂಸ್ಕøತಿ ಬೆಳಿಸಿದೆ. ಸಮುದಾಯದಲ್ಲಿ ಒಕ್ಕಟ್ಟು, ಭಾವೈಕ್ಯತೆ ಬೆಳೆಸಿದೆ ಎಂದರು.
ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದ ಚೇತನ ನಿಶಾನಿಮಠ ಮಾತನಾಡಿ ಕೋವಿಡ್ಕ್ಕಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯ ಕುರಿತು ವಿವರಿಸಿದ ಅವರು ಕೊರೊನಾ ಸೋಂಕು ಅನುಮಾನಿತರು ಧೈರ್ಯಗೆಡದೆ ಚಿಕಿತ್ಸೆ ಪಡೆದುಕೊಂಡರೆ ಕೊರೊನಾದಿಂದ ಖಂಡಿತ ಮುಕ್ತರಾಗುವಿರಿ ಎಂದರು.
ಆನಂದರಾವ ನಾಯ್ಕ ಹಾಗೂ ಡಾ. ಬಸವರಾಜ ಚಿಪ್ಪಲಕಟ್ಟಿ ಅವರು ಕಾರ್ಯಕ್ರಮದ ಕುರಿತು ಮಾತನಾಡಿದರು.
ಪ್ರವಚನಕಾರ ಶರಣ ಲಕ್ಷ್ಮಣ ದೇವರು ಆಧ್ಯಾತ್ಮಿಕ ಪ್ರವಚನ ನೀಡಿದರು.
ತೊಂಬತ್ತು ವಯಸ್ಸು ದಾಟಿದ ಗ್ರಾಮದ ಹಿರಿಯ ಜೀವಿ ವೆಂಕಪ್ಪಾ ಪಾಟೀಲ ಹಾಗೂ ಐಐಟಿ ಕೋರ್ಸಗೆ ಪ್ರವೇಶಪಡೆದುಕೊಂಡಿರುವ ಗ್ರಾಮದ ಶಿವಾಣಿ ಬೈಲವಾಡ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿದರು.
ಸಿದ್ರಾಮಯ್ಯ ಹಿರೇಮಠ, ಮಲ್ಲಿಕಾರ್ಜುನ ಕಬ್ಬೂರ, ಶಿವಪ್ಪ ಕಬ್ಬೂರ, ಹಣಮಂತ ಬೀರನಗಡ್ಡಿ, ಈಶ್ವರ ಬೈಲವಾಡ, ಕಲ್ಲಪ್ಪ ಮನಗೂಳಿ, ಸೋಮಪ್ಪ ಪಾಟೀಲ, ಹಣಮಂತ ತೇರದಾಳ ಅತಿಥಿಯಾಗಿದ್ದರು.
ಪ್ರಾರಂಭದಲ್ಲಿ ಕಾರ್ತಿಕಶಾಸ್ತ್ರೀ, ವೀರಯ್ಯಶಾಸ್ತ್ರೀಗಳು ಮಂತ್ರಘೋಷ ಪಠಣ ಮಾಡಿದರು. ಗಾಯಕ ಮಾರುತಿ ದಾಸರ ಮತ್ತು ಕಾರ್ತಿಕಶಾಸ್ತ್ರೀಗಳ ಭಕ್ತಿ ಗಾಯನವು ಎಲ್ಲರ ತಲೆದೂಗುವಂತೆ ಮಾಡಿತು.
ಡಾ. ಕೆ.ಎಚ್. ನಾಗರಾಳ ನಿರೂಪಿಸಿದರು, ರೈತ ಮುಖಂಡ ದುಂಡಪ್ಪ ಪಾಟೀಲ ವಂದಿಸಿದರು.