
ಮೂಡಲಗಿ: ಚೌಕೇಶ್ವರ ಮಠದ ಪೂಜ್ಯರಾಗಿದ್ದ ಲಿಂ. ಪ್ರಭುಲಿಂಗ ಮಹಾಸ್ವಾಮಿಗಳು ಯಾದವಾಡ ಭಾಗದಲ್ಲಿ ಸಾಮಾಜಿಕ, ಧಾರ್ಮಿಕ, ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿ ಭಕ್ತರ ಪಾಲಿಗೆ ಕಾಮಧೇನು ಆಗಿದ್ದರು. ಅವರ ಆದರ್ಶಗಳು ಇಂದಿನ ಯುವ ಪೀಳಿಗೆ ಮುಂದುವರೆಸಿಕೊಂಡು ಹೋಗಬೇಕಿದೆ. ಈ ದಿಸೆಯಲ್ಲಿ ಚೌಕಿಮಠದ ಪಟ್ಟವನ್ನು ಅಲಂಕರಿಸಿಕೊಂಡಿರುವ ವಿಶ್ವಾರಾಧ್ಯ ದೇವರಿಗೆ ಭಕ್ತರು ಮತ್ತು
ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ತಿಳಿಸಿದರು.
ಬುಧವಾರ, ತಾಲ್ಲೂಕಿನ ಯಾದವಾಡ ಗ್ರಾಮದಲ್ಲಿ ನಡೆಯುತ್ತಿರುವ ಚೌಕೇಶ್ವರ ವಿರಕ್ತಮಠದ ವಿಶ್ವಾರಾಧ್ಯ ದೇವರ ಚರ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಕ್ತರ ಆಶಯನುಸಾರವಾಗಿ ನೂತನ ಶ್ರೀಗಳು ಯಾದವಾಡ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ನಿರ್ಮಿಸಿ, ಮಠದ ಅಭಿವೃದ್ಧಿಗೆ ಶ್ರಮಿಸಲು ಮುಂದಾಗುವಂತೆ ಅವರು ಹೇಳಿದರು.
ನಾಡಿನ ಜನತೆಯು ಸುಖ, ಶಾಂತಿ, ನೆಮ್ಮದಿ ಬದುಕಿಗೆ ಪೂಜ್ಯರ ಪಾತ್ರ ಮಹತ್ವದ್ದಾಗಿದೆ. ಭಾರತವು ವಿವಿಧತೆಯಲ್ಲಿ ಏಕತೆಯ ಸಾಮರಸ್ಯ ಮೂಡಲು ಪೂಜ್ಯರ ಆಶೀರ್ವಾದ ಕಾರಣವಾಗಿದೆ. ನೂರಾರು ಜಾತಿ, ಧರ್ಮಗಳಿದ್ದರೂ ನಮ್ಮ ದೇಶದಲ್ಲಿ ಎಲ್ಲ ಜಾತಿ, ಧರ್ಮದವರು ಏಕತೆಯ ಮಂತ್ರ ಜಪಿಸಿ, ಒಗ್ಗಟ್ಟಿನ ಬದುಕು ಕಟ್ಟಿಕೊಂಡಿದ್ದಾರೆ. ಇದು ದೇವರ ವರದಾನವಾಗಿದೆ. ಇದಕ್ಕಾಗಿಯೇ ಭಾರತವು ಮಿಕ್ಕ ದೇಶಗಳಿಗಿಂತ ಭಿನ್ನವಾಗಿದೆ ಎಂದು ತಿಳಿಸಿದರು.
ರೈತರು ಈ ದೇಶದ ಬೆನ್ನೆಲುಬು. ರೈತರಿಂದಲೇ ನಾವೆಲ್ಲ ಸುಖ ಜೀವನ ನಡೆಸುತ್ತಿದ್ದೇವೆ. ಕಾಲ ಕಾಲಕ್ಕೆ ಮಳೆಯಾಗಿ ಉತ್ತಮ ಬೆಳೆಯಾದರೆ ರೈತರ ಮುಖದಲ್ಲಿ ಮಂದಹಾಸ ಮೂಡುತ್ತದೆ. ರೈತರಿಂದಲೇ ನಮ್ಮ ದೇಶವು ಸಮೃದ್ಧಿಯ ಬಾಳು ನಡೆಸುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹಂದಿಗುಂದ ಮಠದ ಶಿವಾನಂದ ಮಹಾಸ್ವಾಮಿಗಳು, ಬೈಲಹೊಂಗಲ ಮೂರು ಸಾವಿರ ಮಠದ ನೀಲಕಂಠ ಮಹಾಸ್ವಾಮಿಗಳು, ಭಾಗೋಜಿಕೊಪ್ಪದ ಶಿವಲಿಂಗ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ಸಾನಿಧ್ಯವನ್ನು ಗೋಕಾಕ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು, ಕೊಲ್ಹಾರದ ಯೋಗಿ ಕಲ್ಲಿನಾಥ ದೇವರು, ಹುಲಜಂತಿಯ ಮಾಳಿಂಗರಾಯ ಮಹಾರಾಜರು, ಬಬಲಾದಿಯ ಸಿದ್ರಾಮಯ್ಯ ಅಜ್ಜ, ಹಂಚಿನಾಳದ ಮಹೇಶಾನಂದ ಸ್ವಾಮಿಗಳು, ತೊಂಡಿಕಟ್ಟಿಯ ಅವಧೂತ ವೆಂಕಟೇಶ ಮಹಾರಾಜರು, ಹುಣಶ್ಯಾಳ ಪಿಜಿಯ ನಿಜಗುಣಾನಂದ ದೇವರು, ನರಸಿಪೂರದ ಶಾಂತಭೀಷ್ಮ ಮಹಾಸ್ವಾಮಿಗಳು, ತರಿಕೇರೆಯ ವೃಷಬೇಂದ್ರ ಮಹಾಸ್ವಾಮಿಗಳು, ಹೆಬ್ಬಳ್ಳಿಯ ದತ್ತಾವಧೂತ ಗುರುಗಳು, ಸ್ಥಳೀಯ ಅಬ್ದುಲ್ ಜಮಾದಾರ ವಹಿಸಿದ್ದರು. ಗ್ರಾಮದ ಹಲವು ಮುಖಂಡರು, ಸದ್ಭಕ್ತರು ಉಪಸ್ಥಿತರಿದ್ದರು.
ಬೀಳಗಿಯ ಸಿದ್ದಪ್ಪ ಬಿದರಿ ಅವರು ರೈತ ಸಮಾವೇಶದ ವಿಶೇಷ ಉಪನ್ಯಾಸ ನೀಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಚೌಕೇಶ್ವರ ಮಠದ ಪೀಠಾಧಿಪತಿಯಾಗಿ ಪಟ್ಟಾಧಿಕಾರ ವಹಿಸಿಕೊಂಡಿರುವ ವಿಶ್ವಾರಾಧ್ಯ ದೇವರನ್ನು ಸತ್ಕರಿಸಿ, ಗೌರವಿಸಿ ಶುಭ ಕೋರಿದರು.
IN MUDALGI Latest Kannada News