ಭೂತಾಯಿ ಮಡಿಲಲ್ಲಿ ಚರಗ ಚಲ್ಲಿ ಎಳ್ಳು ಅಮವಾಸ್ಯೆ ಹಬ್ಬ ಆಚರಣೆ
ವರದಿ: ಅಡಿವೇಶ ಮುಧೋಳ.
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಎಳ್ಳು ಅಮವಾಸ್ಯೆ ಹಬ್ಬದ ಪ್ರಯುಕ್ತ ರೈತರು ತಮ್ಮ ತಮ್ಮ ಹೊಲ-ಗದ್ದೆಗಳÀಲ್ಲಿರುವ ಹಚ್ಚ ಹಸಿರಿನ ಬೆಳೆಗಳ ನಡುವೆ ಭೂಮಿ ತಾಯಿಗೆ ಪೂಜಿಸಿ, ಚರಗ ಚಲ್ಲುವ ಕಾರ್ಯಕ್ರಮ ಶನಿವಾರ ಡಿ.20 ರಂದು ನಡೆಯಿತು.
ಗ್ರಾಮದ ಎಲ್ಲರ ಮನೆಗಳಲ್ಲಿ ಹಬ್ಬದ ಸಡಗರ, ಸಂಭ್ರಮ ಮನೆ ಮಾಡಿತ್ತು, ಇಲ್ಲಿಯ ರೈತ ಕುಟುಂಬದ ಮಕ್ಕಳು ಸೇರಿದಂತೆ ಎಲ್ಲರೂ ಒಟ್ಟಿಗೆ ಸೇರಿಕೊಂಡು ಎತ್ತಿನ ಬಂಡಿ ಹೂಡಿಕೊಂಡು, ಕೆಲವರು ಕಾಲ್ನಡೆಗೆ, ಇನ್ನೂ ಕೆಲವರು ದ್ವಿಚಕ್ರ ವಾಹನಗಳಲ್ಲಿ ತಮ್ಮ ತಮ್ಮ ಹೊಲ-ಗದ್ದೆಗಳಿಗೆ ಹೋಗಿ ಭೂಮಿ ತಾಯಿಯನ್ನು ನಂಬಿ ವರ್ಷವಿಡೀ ದುಡಿಯುವ ರೈತ ತನ್ನ ಪರಿಶ್ರಮಕ್ಕೆ ತಕ್ಕ ಫಲವನ್ನು ನೀಡೆಂದು ಪ್ರಾರ್ಥಿಸಿ, ಚರಗ ಚಲ್ಲಿ ಎಳ್ಳು ಅಮವಾಸ್ಯೆಯ ಹಬ್ಬ ಸಡಗರದಿಂದ ಆಚರಿಸಿದರು.
ಸ್ಥಳೀಯ ರೈತರು ತಮ್ಮ ತಮ್ಮ ಹೊಲ-ಗದ್ದೆಗಳಲ್ಲಿ ಐದು ಜೋಳದ ದಂಟು ಇಲ್ಲವೇ ಕಬ್ಬು, ಐದು ಸಣ್ಣ ಗಾತ್ರದ ಕಲ್ಲುಗಳನ್ನು ಹುಡುಕಿ ತಂದು ಪೂಜಿಸಿ, ಮನೆಯಿಂದ ಒಯ್ದ ಅಡುಗೆ ಬಿಚ್ಚಿಟ್ಟು ಹೊಲ-ಗದ್ದೆಯ ತುಂಬೆಲ್ಲಾ ನೈವೇದ್ಯ ರೂಪದಲ್ಲಿರುವ ಮೃಷ್ಟಾನ್ನ ಎಡೆಯನ್ನು ಚರಗ ಚಲ್ಲುವ ಮೂಲಕ ಭೂತಾಯಿಗೆ ನಮನ ಸಮರ್ಪಿಸಿದ ಬಳಿಕ ಮನೆಮಂದಿ ಹಾಗೂ ಅಕ್ಕ-ಪಕ್ಕದ ಮನೆಯವರು ಸೇರಿಕೊಂಡು ಒಟ್ಟಿಗೆ ಕುಳಿತು ಭೋಜನ ಸವಿದು ಸಂಭ್ರಮಿಸಿದರು. ಪ್ರಸಕ್ತ ವರ್ಷದ ಸಮಸ್ತ ಮಳೆ ಮತ್ತು ಬೆಳೆಗಳ ಕುರಿತು ತಮ್ಮ ತಮ್ಮಲ್ಲಿ ಚರ್ಚಿಸುತ್ತಾ ತಮ್ಮ ಮನೆಗಳತ್ತ ಮರಳಿದರು.
IN MUDALGI Latest Kannada News