
ಬೆಳಗಾವಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ನಲ್ಲಿ ದೇಶದ ಆರ್ಥಿಕ ಅಭಿವೃದ್ಧಿಯ ದೂರದೃಷ್ಟಿತ್ವ, ವಿಕಸಿತ ಭಾರತದ ಕಲ್ಪನೆ ಮತ್ತಷ್ಟು ಅರಳಿದೆ ಎಂದು ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕೇಂದ್ರದ ಬಜೆಟ್ ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ದೇಶದ ಜಿಡಿಪಿಯ ಬೆಳವಣಿಗೆಗೆ ಹೆಚ್ಚು ಆದ್ಯತೆ ನೀಡಿರುವುದು ಇದರಲ್ಲಿ ಕಂಡುಬರುತ್ತದೆ. ಕೃಷಿ, ಶಿಕ್ಷಣ, ಆರೋಗ್ಯ, ಹೂಡಿಕೆ, ಮೂಲಭೂತ ಸೌಕರ್ಯ, ಜವಳಿ ಉದ್ಯಮ, ಐಟಿ ಬಿಟಿಗಳಿಗೆ ಈ ಬಾರಿಯ ಬಜೆಟ್ ಹೆಚ್ಚು ಬಂಪರ್ ತಂದುಕೊಟ್ಟಿದೆ. ಆದಾಯ ತೆರಿಗೆ ವಿಳಂಬಕ್ಕೆ ಶಿಕ್ಷೆ ರದ್ದು ಮಾಡಿ ಶೇ.10ರಷ್ಟು ದಂಡ ಪ್ರಯೋಗ ಮಾಡಿರುವುದು ತೆರಿಗೆದಾರರ ಸ್ನೇಹಿಯಾಗಿ ಅವರು ಬಜೆಟ್ ಮಂಡನೆ ಮಾಡಿದ್ದಾರೆ. ಜತೆಗೆ ಮೂಲಭೂತ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದವರು ಹೇಳಿದ್ದಾರೆ. ಕೈಗಾರಿಕೆ ಮತ್ತು ಸಣ್ಣ ಕೈಗಾರಿಕೆ ವಿಶೇಷ ಅನುದಾನ ನೀಡುವ ಮೂಲಕ ದೇಶದ ಆರ್ಥಿಕ ಚಟುವಟಿಕೆಗೆ ಪರೋಕ್ಷ ಉತ್ತೇಜನ ನೀಡಿದ್ದಾರೆ. ಆರೋಗ್ಯಕ್ಕೂ ಹೆಚ್ಚು ಒತ್ತು ನೀಡಿರುವ ಅವರು, ಕ್ಯಾನ್ಸರ್ ರೋಗಗಳಿಗೆ ವಿದೇಶದಿಂದ ತರಿಸುವ ಔಷಧಗಳಿಗೆ ರಿಯಾಯಿತಿ ಘೋಷಣೆ ಮಾಡಿರುವುದು ಶ್ಲಾಘನೀಯ. ಭಾರತ್ ವಿಸ್ತಾರ್ ಎಂಬ ಕೃತಕ ಬುದ್ಧಿಮತ್ತೆ ಟೂಲ್ ಅನ್ನು ಘೋಷಿಸಿದ್ದು ತಂತ್ರಜ್ಞಾನ ಆಧಾರಿತ ಕೃಷಿಗೆ ಒತ್ತು ನೀಡಿದ್ದಾರೆ. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಿದೆ. ಇದರ ಜತೆಗೆ ಬಯೋಫಾರ್ಮಾದಲ್ಲಿ ಭಾರತ ಹಬ್ ಆಗಲು ₹10 ಸಾವಿರ ಕೋಟಿ ನಿಗದಿಪಡಿಸಿರುವುದು ಉತ್ತಮ ನಡೆ. ಉದಾರೀಕೃತ ರವಾನೆ ಯೋಜನೆ ಜಾರಿಗೆ ಉದ್ದೇಶಿಸಿರುವುದು ವಿದೇಶಿ ಶಿಕ್ಷಣವನ್ನು ಬಯಸುವ ವಿದ್ಯಾರ್ಥಿಗಳ ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡಲಿದೆ. ಜತೆಗೆ ಬೈಕ್ ಅಪಘಾತ ಪರಿಹಾರ ವಿಮೆ ಹಣಕ್ಕೆ ಯಾವುದೇ ತೆರಿಗೆ ರದ್ದು ಸೇರಿದಂತೆ ಹತ್ತು ಹಲವಾರು ಜನಸ್ನೇಹಿಯಾಗಿ ಬಜೆಟ್ ಅಂಶಗಳು ಇದರಲ್ಲಿವೆ.
ಇದರ ಜತೆಗೆ ರೈತರು, ರೈಲ್ವೆಗೂ ಹೆಚ್ಚು ಒತ್ತು ನೀಡಿದ್ದು, ಈ ಎರಡೂ ಕ್ಷೇತ್ರಗಳನ್ನು ಮತ್ತಷ್ಟು ಸ್ಮಾರ್ಟ್ ಆಗಿಸಿದ್ದಾರೆ. ತೆಂಗಿನಕಾಯಿ ಬೆಳೆಯಲು ಉತ್ತೇಜನ ಯೋಜನೆ, ಭಾರತೀಯ ಗೋಡಂಬಿ, ಭಾರತೀಯ ಕೋಕೋವನ್ನು ಪ್ರೀಮಿಯಂ ಜಾಗತಿಕ ಬ್ರ್ಯಾಂಡ್ಗಳಾಗಿ ಪರಿವರ್ತಿಸಲು ಗೋಡಂಬಿ ಮತ್ತು ಕೋಕೋಗೆ ಮೀಸಲಾದ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿದ್ದು, ಜಾಗತಿಕ ಮಟ್ಟದಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸುವ ಗುರಿ ಹೊಂದಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ವಿಕಸಿತ ಭಾರತ ಎಂಬ ಪರಿಕಲ್ಪನೆಯಲ್ಲಿ ಕೇಂದ್ರದ ಬಜೆಟ್ ಮೂಡಿಬಂದಿದೆ ಎಂದು ಶಾಸಕ
ಬಾಲಚಂದ್ರ ಜಾರಕಿಹೊಳಿ ಅವರು ರವಿವಾರದಂದು ಕೇಂದ್ರದ ವಿತ್ತೆ ಸಚಿವೆ ನಿರ್ಮಲ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ನ್ನು ಸ್ವಾಗತಿಸಿ, ಪ್ರಧಾನಿ ನರೇಂದ್ರ ಮೋದಿಯವರ ಕನಸನ್ನು ಸಾಕಾರಗೊಳಿಸಲು ನಾವೆಲ್ಲರೂ ಕೈ ಜೋಡಿಸೋಣ ಎಂದು ಅಭಿನಂದಿಸಿ, ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
IN MUDALGI Latest Kannada News