ಸಂಭ್ರಮದಿಂದ ನಡೆದ ಬೆಟಗೇರಿ ಗ್ರಾಮದೇವತೆ ಜಾತ್ರಾಮಹೋತ್ಸವ
ಬೆಟಗೇರಿ:ಐದು ವರ್ಷಕ್ಕೂಮ್ಮೆ ಐದು ದಿನಗಳ ಕಾಲ ಜರುಗುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದೇವತೆ ಶ್ರೀದ್ಯಾಮವ್ವದೇವಿ 3ನೇ ಜಾತ್ರಾಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು 2 ನೇ ದಿನವಾದ ಜು.25 ರಂದು ವಿಜೃಂಭನೆಯಿಂದ ನಡೆದವು.
ಸ್ಥಳೀಯ ಅಡವಿಸಿದ್ದೇಶ್ವರ ದೇವಸ್ಥಾನದಿಂದ ಎಲ್ಲ ದೇವರ ಪಲ್ಲಕ್ಕಿ, ಸುಮಂಗಲೆಯರ ಕುಂಭ, ಆರತಿ ಮತ್ತು ಸಕಲ ವಾದ್ಯಮೇಳಗಳೊಂದಿಗೆ ಶ್ರೀದೇವಿಯನ್ನು ಬಸ್ ನಿಲ್ದಾಣದ ಮೂಲಕ ತಂದು ಗೌಡರ ಕಟ್ಟೆಗೆ ಸಡಗರದಿಂದ ಕೂಡ್ರಿಸಿದ ಬಳಿಕ ಪುರ ಜನರಿಂದ ಶ್ರೀದೇವಿಯ ಉಡಿ ತುಂಬುವದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ನೈವೇದ್ಯ ಸಮರ್ಪನೆ ಸಂಭ್ರಮದಿಂದ ನಡೆಯಿತು.
ರಾತ್ರಿ ಗೌಡರ ಮನೆಯಿಂದ ಶ್ರೀದೇವಿಯ ಹೊನ್ನಾಟ ವೈಭವದಿಂದ ಜರುಗಿದ ನಂತರ ಊರಿನ ಪ್ರಮುಖ ಬೀದಿಗಳ ಮೂಲಕ ಶ್ರೀದೇವಿಯನ್ನು ಸ್ಥಳೀಯ ಉದ್ದಮ್ಮನ ಗುಡಿಗೆ ತಂದು ಕೂಡ್ರಿಸುವದು. ಮದ್ಯಾಹ್ನ 2 ಗಂಟೆಗೆ ನಿಮಿಷದ ಬಂಡಿ ಶರ್ತು ನಡೆದು ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸ್ಥಳೀಯ ಶ್ರೀದೇವಿಯ ಭಕ್ತರು, ಗಣ್ಯರು, ಗ್ರಾಮದೇವತೆ ಜಾತ್ರಾಮಹೋತ್ಸವ ಆಚರಣಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮದೇವತೆ ದೇವಾಲಯ ಅರ್ಚಕರು, ಸ್ಥಳೀಯರು ಇದ್ದರು. ಮಕ್ಕಳು, ಯುವಕರು ಒಬ್ಬರಿಗೊಬ್ಬರು ಭಂಡಾರ ಎರಚಿ ಸಂಭ್ರಮಿಸಿದರು.
ಇಂದಿನ ಕಾರ್ಯಕ್ರಮ ಏನು.?: ಜುಲೈ.26ರಂದು ಮುಂಜಾನೆ 7 ಗಂಟೆಗೆ ಶ್ರೀದೇವಿಗೆ ಉಡಿ ತುಂಬುವ, ನೈವೇದ್ಯ ಸಮರ್ಪನೆ ನಡೆದು, ಮುಂಜಾನೆ 8 ಗಂಟೆಗೆ 5 ಕಿ.ಮೀ.ಓಟದ ಸ್ಪರ್ಧೆ, 10 ಗಂಟೆಗೆ ತೆರೆಬಂಡಿ ಶರ್ತು ಜರುಗಲಿದೆ. ಸಾಯಂಕಾಲ ಶ್ರೀದೇವಿಯನ್ನು ಉದ್ದಮ್ಮನ ಗುಡಿಯಿಂದ ಪ್ರಮುಖ ಬೀದಿಗಳ ಮುಖಾಂತರ ಅಂಬೇಡ್ಕರ್ ಸರ್ಕಲ್ಗೆ ತಂದು ಕೂಡ್ರಿಸುವದು, ರಾತ್ರಿ 10ಗಂಟೆಗೆ ಶ್ರೀ ದ್ಯಾಮವ್ವದೇವಿ ನಾಟ್ಯ ಸಂಘದವರಿಂದ ಗೌಡನ ದೌರ್ಜನ್ಯಕ್ಕೆ ಸಿಂಹಗರ್ಜನೆ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಇಲ್ಲಿಯ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾಮಹೋತ್ಸವ ಆಚರಣಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.