*ಗ್ಯಾರಂಟಿಯತ್ತ ಗಮನ, ಅಭಿವೃದ್ಧಿ ಶೂನ್ಯ ಬಜೆಟ್*
ತಮ್ಮ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡುವುದರಲ್ಲಿಯೇ ಬಜೆಟ್ ರೂಪುರೇಶೆ ತಯಾರಿಸಿದಂತಿದೆ. ಕನ್ನಡಿಗರ ಮೇಲೆ ಮತ್ತಷ್ಟು ಸಾಲದ ಹೊರೆಯನ್ನು ಹೊರೆಸಿದ್ದಾರೆ. ಈ ಮೂಲಕ ಜನರನ್ನು ಆರ್ಥಿಕವಾಗಿ ಮತ್ತಷ್ಟು ಕುಗ್ಗುವಂತೆ ಮಾಡಿದ್ದಾರೆ. ಇಲಾಖಾವಾರು ಹಣ ಹಂಚಿಕೆ ಮಾಡಿರುವುದನ್ನು ಗಮನಿಸಿದರೆ ಖಜಾನೆಯಲ್ಲಿ ಹಣದ ಕೊರತೆ ರಾಜ್ಯ ಸರ್ಕಾರವನ್ನು ಕಾಡುತ್ತಿದೆ ಎಂಬುವುದು ಸ್ಪಷ್ಟವಾಗುತ್ತಿದೆ. ಹೀಗಾಗಿ ಇದೊಂದು ಅಭಿವೃದ್ಧಿ ಶೂನ್ಯ, ಪ್ರಗತಿ ರಹಿತ, ದಿಕ್ಕು ದೆಸೆ ಇಲ್ಲದ ಬಜೆಟ್ ಆಗಿದೆ. ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣನೆ ಮಾಡಲಾಗಿದೆ. ಉತ್ತರ ಕರ್ನಾಟಕದ ಯುಕೆಪಿಗೆ ಹೆಚ್ಚು ಹಣವನ್ನು ತೆಗೆದಿಡದೇ ಅನ್ಯಾಯ ಮಾಡಲಾಗಿದೆ. ಜತೆಗೆ ನೀರಾವರಿ ಕ್ಷೇತ್ರಕ್ಕೂ ಹೇಳಿಕೊಳ್ಳುವಷ್ಟು ಅನುದಾನ ನೀಡಿಲ್ಲ. ವಿತ್ತೀಯ ಕೊರತೆ ಬಜೆಟ್ನಲ್ಲಿ ಎದ್ದು ಕಾಣುತ್ತಿರುವುದರಿಂದ ಯಾವುದೇ ಹೊಸ ಯೋಜನೆಗಳನ್ನು ಘೋಷಿಸಲು ಮುಖ್ಯಮಂತ್ರಿಯವರು ಮುಂದಾಗಿಲ್ಲ. ಹಳೆಯ ಭರವಸೆಗಳನ್ನೇ ಹೊಸದಾಗಿ ಹೇಳಿದ್ದಾರೆ. ರೈತರಿಗಾಗಿ ಬಜೆಟ್ನಲ್ಲಿ ಯಾವುದೇ ವಿಶೇಷ ಪ್ಯಾಕೇಜ್ಗಳು ನೀಡಿಲ್ಲ. ರೈತರಲ್ಲಿ ಭೇದ ಭಾವ ಮಾಡಿದ್ದು, ಕಬ್ಬು ಬೆಳೆಗಾರರನ್ನು ಸಂಪೂರ್ಣ ಕಡೆಗಣನೆ ಮಾಡಲಾಗಿದೆ. ಮಾತ್ರವಲ್ಲ, ನಿಸ್ವಾರ್ಥದಿಂದ ಸಮಾಜ ಸೇವೆ ಮಾಡುತ್ತಿರುವ ಮಾಧ್ಯಮ ಪ್ರತಿನಿಧಿಗಳಿಗೆ ಯಾವ ಯೋಜನೆಗಳನ್ನೂ ಅವರು ಇದರಲ್ಲಿ ನೀಡಲು ಮುಂದಾಗಿಲ್ಲ. ಬೆಂಗಳೂರು- ಮೈಸೂರು ಅಭಿವೃದ್ಧಿಯತ್ತಲೇ ಹೆಚ್ಚು ಚಿತ್ತ ಹರಿಸಿರುವುದು ಕಂಡುಬರುತ್ತಿದೆ. ಉತ್ತರ ಕರ್ನಾಟಕದ ಬಹುತೇಕ ಭಾಗಗಳಿಗೆ ಯಾವುದೇ ಉತ್ತೇಜನಕವಾದ ಅನುದಾನ ನೀಡುವಲ್ಲಿ ಮೈ ಮರೆತಿರುವುದು ವಿಷಾದನೀಯ. ಇದಲ್ಲದೆ, ಕಳೆದ ಎರಡು ವರ್ಷಗಳ ಬಜೆಟ್ ಅನ್ನು ಗಮನಿಸಿದಾಗ ಅವರು ಮಾತನಾಡಿರುವುದಕ್ಕೂ ಬಜೆಟ್ನಲ್ಲಿ ಘೋಷಣೆ ಮಾಡಿರುವ ಕಾರ್ಯಕ್ರಮ ಅನುಷ್ಠಾನ ಮಾಡಿರುವುದಕ್ಕೂ ಒಂದಕ್ಕೊಂದು ಸಂಬಂಧ ಇಲ್ಲ. ಹೀಗಾಗಿ ಈ ಬಜೆಟ್ನಲ್ಲಿ ಬೇರೆ ಬೇರೆ ಇಲಾಖೆಗಳಿಗೆ ಮೀಸಲಿಟ್ಟಿರುವ ಹಣವನ್ನು ಅವರು ಪೂರ್ಣ ಪ್ರಮಾಣದಲ್ಲಿ ಕೊಡುವುದಿಲ್ಲ. ಈ ಬಜೆಟ್ ಪುಸ್ತಕದಲ್ಲಿ ಮಾತ್ರ ಇರಲಿದೆ.
ಸರ್ಕಾರಕ್ಕೆ ಸಾಕಷ್ಟು ಆದಾಯ ತಂದುಕೊಡುವ ಹಲವಾರು ಪ್ರವಾಸಿ ತಾಣಗಳು ಉತ್ತರ ಕರ್ನಾಟಕದಲ್ಲಿದ್ದರೂ ಇಂತಹ ಪ್ರವಾಸಿ ತಾಣಗಳ ಅಭಿವೃದ್ಧಿಯ ಪ್ರಸ್ತಾವವೇ ಇಲ್ಲ.
– ಬಾಲಚಂದ್ರ ಜಾರಕಿಹೊಳಿ, ಶಾಸಕರು, ಬೆಮುಲ್ ಅಧ್ಯಕ್ಷರು*
IN MUDALGI Latest Kannada News