
ಗೋಕಾಕ್- ಹಿಡ್ಕಲ್ ಜಲಾಶಯದಿಂದ ಘಟಪ್ರಭಾ ಕಾಲುವೆಗಳಿಗೆ ನೀರನ್ನು ಹರಿಸಿದ್ದು, ಕೌಜಲಗಿ ಮತ್ತು ಯಾದವಾಡ ಭಾಗದ ರೈತರಿಗೆ ಈ ಕೂಡಲೇ ನೀರು ತಲುಪಿಸವಂತೆ ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ, ಗೋಕಾಕ ತಾಲೂಕಿನ ಹಡಗಿನಾಳ ಗ್ರಾಮದಲ್ಲಿ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಸಭೆಯನ್ನು ನಡೆಸಿದ ಅವರು, ಕಳೆದ ದಿ. 7 ರಿಂದ ಘಟಪ್ರಭಾ ಬಲದಂಡೆ ಕಾಲುವೆಗೆ ನೀರನ್ನು ಬಿಟ್ಟಿದ್ದು, ಇಂದು ತಡರಾತ್ರಿ ಕೌಜಲಗಿ ಉಪವಿಭಾಗದ ಕಾಲುವೆಗೆ ನೀರು ಹರಿಯಲು ಕ್ರಮ ಕೈಕೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ದಿನಂಪ್ರತಿ 2200 ಕ್ಯೂಸೆಕ್ಸ್ ನೀರನ್ನು ಬಿಡಲಾಗುತ್ತಿದೆ. ಕೌಜಲಗಿ ಮತ್ತು ಯಾದವಾಡ ಗ್ರಾಮಗಳ ಸಾರ್ವಜನಿಕರಿಗೆ ನೀರು ತಲುಪಿಲ್ಲ ಎಂಬ ದೂರಿನನ್ವಯ ಅಲ್ಲಿನ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದರ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳ ತುರ್ತು ಸಭೆಯನ್ನು ಕರೆದು ಸೂಚನೆಗಳನ್ನು ನೀಡಿದ್ದೇನೆ. ಗೋಕಾಕ ಉಪವಿಭಾಗದ ಗೇಟ್ಗಳನ್ನು ಮುಚ್ಚಲಾಗಿದ್ದು, ತಕ್ಷಣವೇ ಕೌಜಲಗಿ ಹಾಗೂ ಯಾದವಾಡ ಕಾಲುವೆ, ಹಳ್ಳಗಳಿಗೆ ನೀರನ್ನು ಹರಿಸಲು ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಈ ಕ್ರಮಗಳನ್ನು ಕೈಕೊಂಡಿದ್ದೇನೆ. ರೈತರಿಗೆ ಸಮರ್ಪಕವಾಗಿ ನೀರು ತಲುಪಿಸಲು ಅಧಿಕಾರಿಗಳ ಜತೆಗೆ ಸಮನ್ವಯ ಸಾಧಿಸಲು ನಮ್ಮ ಎನ್ಎಸ್ಎಫ್ ನ ನಿಂಗಪ್ಪ ಕುರಬೇಟ, ಬಸಪ್ಪ ಕಪರಟ್ಟಿ, ಮುತ್ತೆಪ್ಪ ಮನ್ನಾಪೂರ ಅವರಿಗೆ ಕಾಲುವೆ ಮೇಲೆ ಇದ್ದುಕೊಂಡು ಮೇಲುಸ್ತುವಾರಿ ನಿರ್ವಹಿಸುವಂತೆಯೂ ಸೂಚನೆ ನೀಡಲಾಗಿದೆ. ಉಭಯ ಕಾಲುವೆಗಳಿಗೆ ನೀರು ತಲುಪಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಲಸಂಪನ್ಮೂಲ ಇಲಾಖೆಯ ಗೋಕಾಕ ವಿಭಾಗದ ಎಇಇ ಎಚ್.ಎಸ್. ಕಾಖಂಡಕಿ, ಕೌಜಲಗಿ ಉಪವಿಭಾಗದ ಎಇಇ ರಘುರಾಮ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.
IN MUDALGI Latest Kannada News