ಮೂಡಲಗಿ: ‘ರಾಜಕಾರಣಿಗಳು ಲಿಂಗಾಯತ ಸಮಾಜವನ್ನು ರಾಜಕೀಯ ದಾಳವನ್ನಾಗಿ ಮಾಡಿಕೊಂಡು ಟೀಕೆ, ಟಿಪ್ಪಣೆ ಮಾಡುವುದನ್ನು ಬಿಡಬೇಕು. ಲಿಂಗಾಯತ ಬಗ್ಗೆ ಅಭಿಮಾನವಿದ್ದರೆ ಎಲ್ಲ ರಾಷ್ಟ್ರೀಯ ಪಕ್ಷಗಳು ಲಿಂಗಾಯತ ಸಮಾಜದ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಬದ್ಧತೆಯನ್ನು ವ್ಯಕ್ತಪಡಿಸಿಬೇಕು’ ಎಂದು ಕೂಡಲಸಂಗಮದ ಪಂಚಮಸಾಲಿ ಸಮಾಜ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬಸವ ಸೇವಾ ಯುವಕ ಸಂಘದವರು ಸೋಮವಾರ ಏರ್ಪಡಿಸಿದ್ದ ಮೂಡಲಗಿ ತಾಲ್ಲೂಕು ಮಟ್ಟದ ಬಸವ ಉತ್ಸವದ ಬೃಹತ್ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು ಬಸವಣ್ಣನವರು ಸರ್ವರಲ್ಲಿ ಸಮಾನತೆಯನ್ನು ಸಾರಿದ ಮಹಾನ ದಾರ್ಶಿಕ ಎಂದರು.
ರಾಜಕಾರಣಿಗಳ ಟೀಕೆಗಳು ವಯಕ್ತಿಕವಾಗಿ ಮಾಡಿರುವ ತಪ್ಪುಗಳ ಕುರಿತಾಗಿ ಆಗಿರಲಿ. ಅದು ಬಿಟ್ಟು ಒಂದು ಸಮಾಜ, ಜನಾಂಗ, ಧರ್ಮವನ್ನು ಬಳಸಿ ಟೀಕೆ ಮಾಡುವುದು ಯಾವ ರಾಜಕಾರಣಿಗೆ ಶೋಭೆ ತರುವಂತದಲ್ಲ. ಸಿದ್ದರಾಮಯ್ಯನವರು ಈಗಾಗಲೇ ಸ್ಪಷ್ಟಿಕರಣ ನೀಡಿದ್ದರಿಂದ ಅವರ ಹೇಳಿಕೆಯನ್ನು ಮತ್ತೆ ಮುಂದುವರಿಸುವುದು ಬೇಡ ಎಂದರು.
12 ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ್ದ ಅನುಭವ ಮಂಟಪದ ಮಾದರಿಯಲ್ಲಿ ಸರ್ಕಾರವು ಪಾರ್ಲಿಮಂಟ ಕಟ್ಟಡವನ್ನು ನಿರ್ಮಿಸುತ್ತಿರುವುದು ಸ್ತತ್ಯಾರ್ಹವಾಗಿದೆ. ಹೊಸ ಕಟ್ಟಡದ ಒಂದು ಭಾಗವನ್ನು ಅನುಭವ ಮಂಟಪ ಎಂದು ನಾಮಕರಣ ಮಾಡಲಿ ಎಂದು ಸರ್ಕಾರಕ್ಕೆ ನನ್ನ ಒತ್ತಾಯವಿದೆ ಎಂದರು
ಪಂಚಮಸಾಲಿ ಸಮಾಜಕ್ಕೆ ಸರ್ಕಾರವು 2ಡಿ ಮೀಸಲಾತಿ ನೀಡಿದ್ದು ಇದು ಮೊದಲ ಹಂತದ ಸಮಾಜಕ್ಕೆ ಗೆಲವು ಆಗಿದೆ. ಚುನಾವಣೆ ನಂತರ ನ್ಯಾಯ¨ದ್ಧವಾಗಿ ದೊರೆಯಬೇಕಾದ ಮೀಸಲಾತಿಗಾಗಿ ಹೋರಾಟ ಮುಂದುವರೆಯುತ್ತದೆ ಎಂದರು.
ಆನೆ ಮೆಲೆ ಬಸವೇಶ್ವರರ ಬಾವಚಿತ್ರವನ್ನು ವಿವಿಧ ವಾದ್ಯಗಳೊಂದಿಗೆ ಮೆರವಣಿಗೆಯು ಪಟ್ಟಣದಲ್ಲಿ ಪ್ರಮುಖ ಬೀದಿಗಳಲ್ಲಿ ಜರುಗಿತು. ಆರತಿ, ಕುಂಭ ಹೊತ್ತ ನೂರಾರು ಸಂಖ್ಯೆಯ ಮಹಿಳೆಯರು, ಅಲಂಕೃತ ಜೋಡು ಎತ್ತುಗಳು, ನೂರಾರು ಸಂಖ್ಯೆಯಲ್ಲಿ ಅಲಂಕೃತ ಟ್ರ್ಯಾಕ್ಟರ್ಗಳು, ಕೇಸರಿ ದ್ವಜಗಳು ಮೆರವಣಿಗೆಯಲ್ಲಿ ಗಮನಸೆಳೆದವು. ದಾರಿಯುದ್ದಕ್ಕೂ ಬಸವೇಶ್ವರಿಗೆ ಜೈವಾಗಲಿ ಎನ್ನುವ ಘೋಷಣೆಗಳು ಮೊಳಗಿದವು.
ಬಸವ ಸಮಿತಿ ಅಧ್ಯಕ್ಷ ಕಲ್ಮೇಶ ಗೋಕಾಕ, ಉಪಾಧ್ಯಕ್ಷ ಪ್ರವೀಣ ಕುರಬಗಟ್ಟಿ, ಕಾರ್ಯದರ್ಶಿ ಉಮೇಶ ಶೆಕ್ಕಿ ಹಾಗೂ ಪಂಚಮಸಾಲಿ ಸಮಾಜ ಸಂಘದ ಪದಾಧಿಕಾರಿಗಳು, ವಿವಿಧ ಸಮಾಜದ ಜನರು ಮೆರವಣಿಗೆಯಲ್ಲಿ ಭಾಗಹಿಸಿದ್ದರು.