ಮೂಡಲಗಿ: ರಜಾ ಅವಧಿಯಲ್ಲೂ ಬಡ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕಾಗಿ ಯುವ ಶಿಕ್ಷಕ ಶಿವರಾಜ ಕಾಂಬಳೆ ಅವರು ಕಳೆದ ಮೂರು ವರ್ಷಗಳಿಂದ ಉಚಿತ ಬೇಸಿಗೆ ಶಿಬಿರದ ಆಯೋಜನೆ ಮಾಡಿ ಮಕ್ಕಳ ಕಲಿಕೆಯ ಸುಧಾರಣೆಗೆ ಶ್ರಮಸುತ್ತಿರುವುದು ಶ್ಲಾಘನಿಯವಾದದ್ದು ಎಂದು ಬಿಇಒ ಅಜೀತ ಮನ್ನಿಕೇರಿ ಹೇಳಿದರು.
ತಾಲೂಕಿನ ಧರ್ಮಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಿವರಾಜ ಕಾಂಬಳೆ ಅವರು ಸತತ 3ನೇ ವರ್ಷವೂ ನಡೆಸುತ್ತಿರುವ ಉಚಿತ ಬೇಸಿಗೆ ಶಿಬಿರಕ್ಕೆ ಭೇಟಿ ನೀಡಿ ಮಾತನಾಡಿದರು. ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಶಿವರಾಜ ಕಾಂಬಳೆ ಅವರು ಇತರಿರೆಗೆ ಮಾದರಿಯಾಗಿದ್ದಾರೆ ಎಂದ ಅವರು ಗ್ರಾಮದ ವಿದ್ಯಾರ್ಥಿಗಳು ಶಿಬಿರದ ಸದುಪಯೋಗ ಪಡಿಸಿಕೊಂಡು ತಮ್ಮ ಭಾವಿ ಜೀವನವನ್ನು ಉಜ್ವಲಗೋಳಿಸಿ ಕೊಳ್ಳಬೇಕೆಂದರು.
ಈ ಸಮಯದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಉಪನಿರ್ದೇಶಕ ಸೀತಾರಾಮು ಅವರು ಉಚಿತ ಬೇಸಿಗೆ ಶಿಬಿರದ ಮಕ್ಕಳೊಂದಿಗೆ ಫೋನ್ ಮೂಲಕ ಮಾತನಾಡಿ, ರಜೆ ಇದ್ದರೂ ಆಟ ಆಡುತ್ತಾ, ನಲಿಯುತ್ತಾ ಮತ್ತು ಓದುತ್ತಾ ಜೀವನದಲ್ಲಿ ಮುಂದೆ ಬರಬೇಕೆಂದರು.
ಈ ಸಂದರ್ಭದಲ್ಲಿ ಪಟಗುಂದಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ರಾಜೀವ ಕೊಳದೂರ, ಅತಿಥಿ ಶಿಕ್ಷಕಿ ಭಾಗ್ಯಶ್ರೀ ಹಳ್ಳೆರ ಉಪಸ್ಥಿತರಿದ್ದರು.
ಬೇಸಿಗೆಯಲ್ಲಿ ಮಕ್ಕಳು ಆಟದೊಂದಿಗೆ ಕಲಿಕೆಯಲ್ಲಿ ತೊಡಗಬೇಕ್ಕೆನ್ನುವ ಉದ್ದೇಶ ಹಾಗೂ ರಜಾ ಅವಧಿಯಲ್ಲಿ ಬಡ ಮಕ್ಕಳು ಬೇಸಿಗೆ ಶಿಬಿರದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಧರ್ಮಟ್ಟಿ ಗ್ರಾಮದ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶಿಬಿರವನ್ನು ಏರ್ಪಡಿಸುತ್ತಿರುವದರಿಂದ ವಿದ್ಯಾರ್ಥಿಗಳು ಸಹ ಆಸಕ್ತಿಯಿಂದ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಶಿವರಾಜ ಕಾಂಬಳೆ, ಸಹ ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಧರ್ಮಟ್ಟಿ