ಮೂಡಲಗಿ:-ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ರಾತ್ರಿ ೧೨.೦೦ ಗಂಟೆಯ ಸಮಯದಲ್ಲಿ ನಾಗನೂರ ಪಟ್ಟಣದಲ್ಲಿ ಧ್ವಜಾರೋಹಣ ನೆರವೇರಿಸುವ ಅವಕಾಶ ದೊರೆತಿರುವುದು ನನ್ನ ಅದೃಷ್ಟವೆಂದು ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ತಾಲ್ಲೂಕಿನ ನಾಗನೂರ ಪಟ್ಟಣದ ಮಾಧವಾನಂದ ಆಶ್ರಮದ ಬಳಿ ೭೯ ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.
ಮೂಡಲಗಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಬರುವ ಸಂದರ್ಭದಲ್ಲಿ ನಾಗನೂರ ಪಟ್ಟಣದ ಪ್ರಮುಖರು ಸೇರಿಕೊಂಡು ಇಲ್ಲಿಯೇ ಧ್ವಜಾರೋಹಣ ನೆರವೇರಿಸಿಕೊಂಡು ಹೋಗಿರಿ ಎಂದರು. ಇಲ್ಲಿನ ನೇತಾಜಿ ಸುಭಾಸ್ ಚಂದ್ರ ಬೋಸ್ ಯುವಕ ಮಂಡಳದವರು ಕಳೆದ ೨೫ ವರ್ಷಗಳಿಂದ ಪ್ರತಿ ವರ್ಷವೂ ಸ್ವಾತಂತ್ರ್ಯ ದಿನಾಚರಣೆಯನ್ನು ಅಗಸ್ಟ್ ೧೪ ರ ರಾತ್ರಿ ೧೨ ಗಂಟೆಗೆ ಆಚರಿಸುವ ಮೂಲಕ ಮಾದರಿಯಾಗಿದ್ದಾರೆ. ಪ್ರತಿಯೊಬ್ಬರೂ ದೇಶ ಪ್ರೇಮವನ್ನು ಬೆಳೆಸಿಕೊಂಡು ಹೋಗುವಂತೆ ಯುವ ಸಮುದಾಯಕ್ಕೆ ಕರೆ ನೀಡಿದರು.
ರಾತ್ರಿ ೧೨ ರ ವೇಳೆಯಲ್ಲಿ ೧೯೪೭ ನ್ನು ನೆನಪಿಸುವ ಸ್ವಾತಂತ್ರ್ಯ ದಿನದ ಧ್ವಜಾರೋಹಣದಲ್ಲಿ ಭಾಗಿಯಾಗಿರುವ ಖುಷಿ ನನ್ನದಾಯಿತು ಎಂದು ಸಂತಸವನ್ನು ಹಂಚಿಕೊಂಡರು.
ಮಹಾನ್ ರಾಷ್ಟ್ರ ಪುರುಷರ ತ್ಯಾಗ, ಬಲಿದಾನಗಳಿಂದ ಬ್ರಿಟಿಷ್ ರ ಕಪಿಮುಷ್ಟಿಯಿಂದ ಭಾರತಕ್ಕೆ ಸ್ವಾತಂತ್ರ್ಯ ಬಂದಿತು. ರಾಷ್ಟ್ರದ ಕಲ್ಯಾಣಕ್ಕಾಗಿ ಇಂದಿನ ಯುವಕರು ಸಂಕಲ್ಪ ಮಾಡಿಕೊಳ್ಳಬೇಕು. ಸಶಕ್ತ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಟೊಂಕು ಕಟ್ಟಿ ನಿಲ್ಲಬೇಕು. ವಿಶ್ವದಲ್ಲಿ ನಮ್ಮ ರಾಷ್ಟ್ರವು ಶಕ್ತಿ ಶಾಲಿ ರಾಷ್ಟ್ರವಾಗುವ ದಿನಗಳು ದೂರವಿಲ್ಲ. ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಕಲ ಭಾರತೀಯರ ಕನಸುಗಳನ್ನು ಸಾಕಾರಗೊಳಿಸುವತ್ತ ಮುನ್ನಡೆದಿದ್ದಾರೆ ಎಂದು ಅವರು ತಿಳಿಸಿದರು.
ಪ್ರಮುಖರಾದ ವಿಠ್ಠಲ ಗುಡೆನ್ನವರ, ರಾಮಣ್ಣ ನಾಯಿಕ, ಗಜಾನನ ಯರಗಣವಿ, ಭೀಮಗೌಡ ಹೊಸಮನಿ, ಪಾವಾಡಿ ಗೋಟೂರ, ಬಸು ಹಳಿಗೌಡರ, ಮುತ್ತೆಪ್ಪ ಖಾನಪ್ಪಗೋಳ, ಸಿದ್ದಪ್ಪ ಯಾದಗೂಡ, ಅಜಯ ಗೋಟೂರ, ನಾಗೇಶ ಯಡ್ರಾವಿ, ಶಿವಾನಂದ ಗೋಟೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
