ಮೂಡಲಗಿ ಸಮೀಪದ ಮುನ್ಯಾಳದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ‘ಮನೆ, ಮನೆಗೆ ಪ್ರವಚನ’ ದ 9ನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿದರು
‘ನಿಮ್ಮ ಯಶಸ್ಸಿಗೆ ಬೇರೆಯವರ ಅವಲಂಬನೆಯಾಗದಿರಿ’
– ಲಕ್ಷ್ಮಣ ದೇವರು ವ್ಯಾಖ್ಯಾನ
ಮೂಡಲಗಿ: ‘ಪ್ರತಿ ವ್ಯಕ್ತಿಯು ತಮ್ಮಲ್ಲಿಯ ಮನೋಬಲ ಮತ್ತು ಚೈತನ್ಯದಿಂದ ಮಾತ್ರ ಯಶಸ್ಸು ಮತ್ತು ಸಾಧನೆಯ ಶಿಖರ ಏರಲು ಸಾಧ್ಯ’ ಎಂದು ಮಹಾಯೋಗಿ ವೇಮನ ಕುಟೀರದ ಶರಣ ಲಕ್ಷ್ಮಣ ದೇವರು ಹೇಳಿದರು.
ತಾಲ್ಲೂಕಿನ ಮುನ್ಯಾಳ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ಹಮ್ಮಿಕೊಂಡಿರುವ ‘ಮನೆ, ಮನೆಗೆ ಅರುಹಿನ ಅರಮನೆ ಪ್ರವಚನ ಮತ್ತು ಕೋವಿಡ್ ಅರಿವು’ ಅಭಿಯಾನದ ವಾಸ್ತುರತ್ನ ಗಂಗಾಧರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಯ ಸಮುದಾಯ ಜನರ ಆತಿಥ್ಯದಲ್ಲಿ ನಡೆದ 9ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ವ್ಯಕ್ತಿಯು ತನ್ನ ಬದುಕಿನ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ತಮ್ಮಲ್ಲಿಯ ಪ್ರತಿಭೆ, ಜ್ಞಾನ, ಚೈತನ್ಯತೆಯನ್ನು ಕ್ರಿಯೆಗೊಳಿಸಿಕೊಳ್ಳಬೇಕು. ನಿಮ್ಮ ಯಶಸ್ಸಿಗೆ ಬೇರೆಯವರ ಅವಲಂಬನೆಯಾಗಬಾರದು ಎಂದರು.
ಸಾನ್ನಿಧ್ಯವಹಿಸಿದ್ದ ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಸದಾಶಿವಯೋಗೀಶ್ವರ ಮಠದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ ಆಧ್ಯಾತ್ಮಿಕದೊಂದಿಗೆ ಆರೋಗ್ಯದ ಬಗ್ಗೆ ಎಚ್ಚರವಹಿಸುವುದು ಅವಶ್ಯವಿದೆ. ನಿರ್ಲಕ್ಷತೆಯು ಅನಾಹುತಕ್ಕೆ ಕಾರಣವಾಗುತ್ತದೆ ಎಂದರು.
ಅತಿಥಿ ಆನಂದರಾವ ನಾಯ್ಕ್, ಹಣಮಂತ ಗೋಡಿಗೌಡರ ಮಾತನಾಡಿದರು.
ಪ್ರಾರಂಭದಲ್ಲಿ ಕಾರ್ತಿಕಶಾಸ್ತ್ರೀ, ವೀರಯ್ಯಶಾಸ್ತ್ರೀಗಳು ಮಂತ್ರಘೋಷ ಪಠಣ ಮಾಡಿದರು. ಐಶ್ವರ್ಯ ತಳವಾರ ಕೊರೊನಾ ಹಾಡುಗಳನ್ನು ಹೇಳಿ ಗಮನಸೆಳೆದಳು.
ವಿಠಲ ಉರಬಿನವರ, ಮಹಾಲಿಂಗಪ್ಪ ಮುಗಳಖೋಡ, ಚಿದಾನಂದ ವಾಲಿ, ಮಹಾಂತಪ್ಪ ತುಪ್ಪದ ಭಾಗವಹಿಸಿದ್ದರು.
ಡಾ. ಕೆ.ಎಚ್. ನಾಗರಾಳ ನಿರೂಪಿಸಿದರು, ಶಿಕ್ಷಕ ಪ್ರವೀಣ ಹುಕ್ಕೇರಿ ವಂದಿಸಿದರು.