ಮೂಡಲಗಿ ಸಮೀಪದ ಮುನ್ಯಾಳದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ‘ಮನೆ, ಮನೆಗೆ ಆಧ್ಯಾತ್ಮಿಕ ಪ್ರವಚನ’ ದ 15ನೇ ದಿನದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯೆ ವಾಸಂತಿ ತೇರದಾಳ ಮಾತನಾಡಿದರು
ಜಿಲ್ಲಾ ಪಂಚಾಯ್ತಿ ಸದಸ್ಯೆ ವಾಸಂತಿ ತೇರದಾಳ ಅಭಿಪ್ರಾಯ
‘ಶರಣರ ನುಡಿಗಳಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ಪ್ರಾಪ್ತಿ’
ಮೂಡಲಗಿ: ‘ಶರಣರ ಮತ್ತು ಸತ್ಪುರುಷರ ನುಡಿಗಳನ್ನು ಕೇಳುವುದರಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ವಾಸಂತಿ ಹಣಮಂತ ತೇರದಾಳ ಹೇಳಿದರು.
ತಾಲ್ಲೂಕಿನ ಮುನ್ಯಾಳ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ಹಮ್ಮಿಕೊಂಡಿರುವ ‘ಮನೆ, ಮನೆಗೆ ಅರುಹಿನ ಅರಮನೆ ಪ್ರವಚನ ಮತ್ತು ಕೋವಿಡ್ ಅರಿವು’ ಅಭಿಯಾನದ ಲಕ್ಷ್ಮಣ ಭೀಮಪ್ಪ ಮದಿಹಳ್ಳಿ ಕುಟುಂಬದವರ ಆತಿಥ್ಯದಲ್ಲಿ ಶುಕ್ರವಾರ ನಡೆದ 15ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮುನ್ಯಾಳ ಗ್ರಾಮದ ಜನರು ಅಧಿಕ ಮಾಸದಲ್ಲಿ ಒಂದು ತಿಂಗಳ ಪರ್ಯಂತರವಾಗಿ ಆಧ್ಯಾತ್ಮಿಕ ಪ್ರವಚನ ಕೇಳುವ ಭಾಗ್ಯ ದೊರಕಿಸಿಕೊಂಡಿದ್ದು ಪುಣ್ಯವಂತರು ಎಂದರು.
ಆಧ್ಯಾತ್ಮಿಕದೊಂದಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಅರುವಿನ ಅರಮನೆ ಕಾರ್ಯಕ್ರಮವು ಮಾದರಿಯಾಗಿದೆ. ಕೋವಿಡ್ ಆತಂಕದ ಸಂದಿಗ್ಧ ದಿನಗಳಲ್ಲಿ ಶ್ರೀಗಳ ಸಂಕಲ್ಪವು ಶ್ಲಾಘನೀಯವಾಗಿದೆ ಎಂದರು.
ಅತಿಥಿ ಆನಂದರಾವ ನಾಯ್ಕ್, ಹಣಮಂತ ಗೋಡಿಗೌಡರ, ಎ.ಎಚ್. ವಂಟಗೋಡಿ ಮಾತನಾಡಿದರು.
ಪ್ರವಚನಕಾರ ಶರಣ ಲಕ್ಷ್ಮಣ ದೇವರು ಆಧ್ಯಾತ್ಮಿಕ ಪ್ರವಚನ ನೀಡಿದರು.
ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಸದಾಶಿವಯೋಗೀಶ್ವರ ಮಠದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಪೂರ್ವದಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ಬಹಾದ್ದೂರ ಶಾಸ್ತ್ರೀಜಿ ಅವರ ಭಾವಚಿತ್ರಗಳಿಗೆ ಪೂಜೆಯನ್ನು ಸಲ್ಲಿಸಿ ಜಯಂತ್ಯುತ್ಸವ ಆಚರಿಸಿದರು.
ಕಾರ್ತಿಕಶಾಸ್ತ್ರೀ, ವೀರಯ್ಯಶಾಸ್ತ್ರೀಗಳು ಮಂತ್ರಘೋಷ ಪಠಣ ಮಾಡಿದರು. ಐಶ್ವರ್ಯ ಹಣಮಂತ ತಳವಾರ ಪ್ರಾರ್ಥಿಸಿದರು.
ಉದ್ದಪ್ಪ ಮದಿಹಳ್ಳಿ, ಶ್ರೀಕಾಂತ ಡೊಡ್ಡಗೋಳ, ಶ್ರೀಶೈಲ್ ಸೂರಣ್ಣವರ, ಮಡ್ಡೆಪ್ಪ ಮದಿಹಳ್ಳಿ ಭಾಗವಹಿಸಿದ್ದರು.
ಡಾ. ಕೆ.ಎಚ್. ನಾಗರಾಳ ಪ್ರಾಸ್ತಾವಿಕ ಮಾತನಾಡಿ ನಿರೂಪಿಸಿದರು, ಶಿಕ್ಷಕ ಪ್ರವೀಣ ಹುಕ್ಕೇರಿ ವಂದಿಸಿದರು.