ರೈತ ಹೊಟ್ಟೆ ತುಂಬಿಸಿದರೆ,ಕವಿ ಎದೆ ತುಂಬಿಸುತ್ತಾನೆ: ನಾಗೇಶ ನಾಯಿಕ
ಗೋಕಾಕ: ಚುಟುಕು ಸಾಹಿತ್ಯ ಸಮಾಜದ ದುರ್ವ್ಯವಸ್ತೆಯ ವಿರುದ್ಧ ಸಿಡಿದೆದ್ದಿದೆ. ಇಂತಹ ಚುಟುಕು ಸಾಹಿತ್ಯ ರಚಿಸಿದ ಚುಟುಕು ಬ್ರಹ್ಮ ದಿನಕರ ದೇಸಾಯಿ, ಸಿ ಪಿ.ಕೆ, ಅಕಬರ ಅಲಿ, ದುಂಡಿರಾಜ, ಜಿನದತ್ತ ದೇಸಾಯಿ, ಜರಗನಹಳ್ಳಿ ಶಿವಶಂಕರ, ಟಿ.ಸಿ.ಮೊಹರೆ ಇವರೆಲ್ಲ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಹೊಸ ದಿಕ್ಕನ್ನು ಹುಟ್ಟು ಹಾಕಿದರು. ಹೀಗಾಗಿ ರೈತ ನಾಗರಿಕನ ಹೊಟ್ಟೆ ತುಂಬಿಸಿದರೆ,ಕವಿ ಸಹೃದಯಿಗರ ಎದೆ ತುಂಬಿಸುತ್ತಾನೆ ಎಂದು ಸವದತ್ತಿಯ ಕವಿ,ಸಾಹಿತಿ ಶ್ರೀ ನಾಗೇಶ ನಾಯಿಕ ಹೇಳಿದರು.
ಅವರು ಗೋಕಾವಿ ಗೆಳೆಯರ ಬಳಗ ಶುಕ್ರವಾರ ಸಂಜೆ ೪ ಗಂಟೆಗೆ ಕೋರೋನಾ ಲಾಕ್ ಡೌನ್ ನಿಮಿತ್ಯ ಗೂಗಲ್ ಮೀಟ ನಲ್ಲಿ ಹಮ್ಮಿಕೊಂಡಿದ್ದ ವೆಬಿನಾರ್ ನ ನಾಲ್ಕನೇ ಉಪನ್ಯಾಸ ಮಾಲಿಕೆಯ ಚುಟುಕು ಸಾಹಿತ್ಯದ ಅವಲೋಕನ ವಿಷಯ ಕುರಿತು ಪ್ರಬಂಧ ಮಂಡಿಸಿ ಮಾತನಾಡಿದರು.
ಗೋಕಾಕದ ಸಂಶೋಧಕಿ, ವಿಮರ್ಶಕರಾದ ಪ್ರೊ.ಮಹಾನಂದ ಪಾಟೀಲ ಆಶಯ ನುಡಿಗಳನ್ನಾಡುತ್ತ ಚುಟುಕು ವಾಮನ ರೂಪದಲ್ಲಿದ್ದರೂ ತ್ರಿವಿಕ್ರಮನ ಬಲವನ್ನು ಹೊಂದಿದೆ. ಹಲವು ದಶಕದ ಹಿಂದೆ ಅನಾದರವಿದ್ದರೂ ನಂತರದ ಕಾಲದಲ್ಲಿ ಚುಟುಕು ಸಾಹಿತ್ಯ ವಿಭಿನ್ನ ಪ್ರಕಾರವಾಗಿ ಬೆಳೆಯಿತು ಎಂದರು.
ಐವತ್ತಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.
ಕಲ್ಲೋಳಿಯ ಅಧ್ಯಾಪಕ ಶಂಕರ ನಿಂಗನೂರ ಸ್ವಾಗತಿಸಿ, ಪರಿಚಯಿಸಿದರು.
ಬಳಗದ ಸಂಚಾಲಕ ಪ್ರಾ. ಜಯಾನಂದ ಮಾದರ ನಿರೂಪಿಸಿ,ವಂದಿಸಿದರು.