ಮೂಡಲಗಿ ತಾಲೂಕು ದಂಡಾಧಿಕಾರಿಗಳು ಯಾರು? ಸಾರ್ವಜನಿಕರಲ್ಲಿ ಅನುಮಾನ!!
ಮೂಡಲಗಿ: ಕೊರೋನಾ ಮಹಾಮಾರಿ ದೇಶವನ್ನೇ ಅಲ್ಲೋಲ ಕಲ್ಲೋಲ ಮಾಡಿದ್ದು ಈ ಸೋಂಕು ಹರಡದಂತೆ ಕೇಂದ್ರ, ರಾಜ್ಯ ಸರ್ಕಾರ ಸಾಕಷ್ಟು ಕಾನೂನುಗಳನ್ನು ಜಾರಿಗೊಳಿಸಿ ಜನರಿಗೆ ಯಾವುದೇ ಕುಂದು ಕೊರತೆ ಬರದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸುಗ್ರೀವಾಜ್ಞೆ ನೀಡಿವೆ.
ದೇವರು ವರ ಕೊಟ್ಟರೂ ಪೂಜಾರಿ ವರ ನೀಡಲಿಲ್ಲ ಎಂಬಂತೆ ಮೂಡಲಗಿ ತಾಲೂಕು ದಂಡಾಧಿಕಾರಿಗಳು ಕರ್ತವ್ಯ ನಿರ್ಲಕ್ಷ್ಯದ ಆರೋಪ ಸಾರ್ವಜನಿಕರ ವಲಯದಲ್ಲಿ ವ್ಯಕ್ತವಾಗಿದೆ.
ಕಳೆದ ಎರಡು ತಿಂಗಳಿಂದ ತಾಲೂಕು ಲಾಕ್ಡೌನ್ನಿಂದ ಸಂಕಷ್ಟ ಅನುಭವಿಸುತ್ತಿದ್ದು ಬಡಜನತೆ ಜೀವನ ಸಾಗಿಸಲೂ ಕಷ್ಟಪಡುತ್ತಿದ್ದಾರೆ. ಬಡ ಜನರಿಗೆ ಕೆಲಸವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರದಿಂದ ಲಭಿಸಬೇಕಾದ ನೆರವು ಸಿಗುತ್ತಿಲ್ಲ. ಇದಕ್ಕೆ ತಾಲೂಕು ದಂಡಾಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ತಾಲೂಕಿನ ಬಡ ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿರುವುದು ಕಂಡು ಬಂದರೆ ಅವರಿಗೆ ಬೇಕಾಗುವ ಸೌಲಭ್ಯವನ್ನು ಒದಗಿಸಿಕೊಡಬೇಕಾದದ್ದು ದಂಡಾಧಿಕಾರಿಗಳ ಕರ್ತವ್ಯ. ಆದರೆ, ಮೂಡಲಗಿ ತಹಶೀಲ್ದಾರ ಡಿ.ಜಿ.ಮಾಹತ ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಸಮಸ್ಯೆಯನ್ನು ಹೊತ್ತು ಬರುವ ಸಾರ್ವಜನಿಕರಿಗೆ ಪರಿಹಾರ ನೀಡದೇ ಅವರ ಮೇಲೆ ಹೌಹಾರುತ್ತಿದ್ದಾರೆ ಎಂದು ಜನತೆ ಅಳಲು ತೋಡಿಕೊಳ್ಳುತ್ತಿದ್ದಾರೆ. ಇವರ ಬಳಿ ಸಮಸ್ಯೆ ಹೇಳಿದರೇ “ ಇದು ನನಗೆ ಗೊತ್ತಿಲ್ಲ, ಸಿಪಿಐ. ಬಿಇಒ ಅವರನ್ನು ಕೇಳಿ ಎಂಬ ಉಡಾಫೆ ಉತ್ತರ ನೀಡುತ್ತಿರುವುದು ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡಿದ್ದು, ತಹಶೀಲ್ದಾರ ಸಾಹೇಬ್ರು ಸಿಪಿಐ ಮತ್ತು ಬಿಇಒ ಹೇಳಿದಂತೆ ಕಾರ್ಯ ನಿರ್ವಹಿಸುತ್ತಿರುವರೇ ಅಥವಾ ಅವರಿಬ್ಬರು ದಂಡಾಧಿಕಾರಿಗಳಾಗಿದ್ದಾರಾ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಉದ್ಬವಿಸಿದೆ.
ಕ್ಷೇತ್ರದ ಜನಪ್ರಿಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಲಾಕ್ಡೌನ್ನಿಂದಾಗಿ ಕ್ಷೇತ್ರದ ಜನತೆಯ ಕಷ್ಟ ಅರಿತು ದಿನೋಪಯೋಗಿ ವಸ್ತುಗಳ ಕಿಟ್ ನೀಡಿರುವುದು ಜನರಿಗೆ ಜೀವ ಹೋಗುವ ಸಮಯದಲ್ಲಿ ಅಮೃತ ನೀಡಿದಂತಾಗಿದೆ. ಆದರೆ ಇಂತಹ ಬೇಜವಾಬ್ದಾರಿ ಅಧಿಕಾರಿಗಳಿಂದಾಗಿ ಸರ್ಕಾರದ ಸೌಲಭ್ಯ ದೊರೆಯದಂತಾಗಿದೆ.
ಇದು ತಾಲೂಕು ದಂಡಾಧಿಕಾರಿಗಳ ಕಥೆಯಾದರೆ ಇನ್ನು ಪೋಲಿಸ್ ಇಲಾಖೆಯ ಕಥೆ ಇದಕ್ಕಿಂತ ವಿಭಿನ್ನ. ಇಲ್ಲಿಯ ಪೋಲಿಸ್ ಅಧಿಕಾರಿಗಳು ತಮ್ಮ ಇಲಾಖೆಯ ಕರ್ತವ್ಯ ನಿಯಮಗಳನ್ನು ಮೀರಿ ಕಾಣದ ಕೈಗಳ ಕೆಳಗೆ ಕರ್ತವ್ಯ ನಿರ್ವಹಿಸುವಂತೆ ಭಾಸವಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕರೋನ ವೈರಸ್ ಉಲ್ಬಣಗೊಳ್ಳುತ್ತಿದ್ದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಜಿಲ್ಲೆಯ ಇತರ ತಾಲೂಕಿಗೆ ಹೋಲಿಸಿದರೆ ಮೂಡಲಗಿ ಪಟ್ಟಣವೂ ಸುರಕ್ಷಿತವಾಗಿದೆ ಎಂದು ಜನ ಮಾತನಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಈ ಹೊಗಳಿಕೆ ಮಾಯವಾಗುತ್ತಿದೆ ಇದಕ್ಕೆ ಕಾರಣ ಪೋಲಿಸ್ ಇಲಾಖೆಯ ನಿರ್ಲಕ್ಷ್ಯ ಎನ್ನುತ್ತಾರೆ ಸಾರ್ವಜನಿಕರು.
ಕರೋನಾ ವೈರಸ್ ಹರಡದಂತೆ ಲಾಕ್ಡೌನ್ ಆದೇಶ ಬಂದಾಗ ಬಹಳ ಹುಮ್ಮಸ್ಸಿನಿಂದ ಕರ್ತವ್ಯ ನಿರ್ವಹಿಸಿ ಜನರಿಂದ ಪ್ರಶಂಸೆ ಪಡೆದ ಅಧಿಕಾರಿಗಳು ಈಗ ಬೇಕಾಬಿಟ್ಟಿಯಾಗಿ ಕರ್ತವ್ಯ ಎಸಗುತ್ತಿದ್ದಾರೆ. ಇದರಿಂದಾಗಿ ಕರೋನಾ ತಾಲೂಕಿಗೂ ಕಾಲಿಡುವುದರಲ್ಲಿ ಅಚ್ಚರಿಯಿಲ್ಲ. ಪಟ್ಟಣಕ್ಕೆ ಹೊರ ರಾಜ್ಯದ ವಾಹನಗಳು ರಾಜಾರೋಷವಾಗಿ ಆಗಮಿಸುತ್ತಿದ್ದು ಚೆಕ್ಪೋಸ್ಟಗಳು ಕಾಟಾಚಾರಕ್ಕೆ ಕಾರ್ಯನಿರ್ವಹಿಸುತ್ತಿದೆ.
ಪಟ್ಟಣದಲ್ಲೂ ದ್ವಿಚಕ್ರ ವಾಹನ ಮತ್ತು ವಾಹನಗಳು ಭಯವಿಲ್ಲದೇ ಓಡಾಡುತ್ತಿದೆ ಪೋಲಿಸರು ತಮಗೆ ಬೇಕಾದವರನ್ನು ಯಾವುದೇ ಪ್ರಶ್ನೇ ಮಾಡದೇ ಕಳಿಸಿಬಿಡುತ್ತಾರೆ. ಆದ್ರೆ ಬಡ ಜನತೆಯ, ಕೂಲಿ ಕಾರ್ಮಿಕರ, ರೈತರ ದ್ವಿಚಕ್ರ ವಾಹನಗಳನ್ನು ಠಾಣೆಗೆ ತೆಗೆದುಕೊಂಡು ಹೋಗಿ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿ ತಾರತಮ್ಯ ಮಾಡುತ್ತಿರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.
ಜನರು ಪೋಲಿಸರನ್ನು ಆರೋಗ್ಯ ಕಾಪಾಡುವ ದೇವರೆಂದು ಪೂಜಿಸುತ್ತಿರುವಾಗ ಅಧಿಕಾರಿಗಳು ಭೇದಭಾವ ಮಾಡುತ್ತಿರುವುದು ಸರಿಯೇ? ಎನ್ನುವುದು ಜನಾಭಿಪ್ರಾಯವಾಗಿದೆ.