ಮೂಡಲಗಿ: ‘ಮೂಡಲಗಿ ತಾಲ್ಲೂಕಿನ ಕಮಲದಿನ್ನಿಯ ಲಕ್ಷ್ಮೀದೇವಿ ಜಾತ್ರೆಯು ಫೆ. 17ರಿಂದ 18ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಮತ್ತು ಸ್ಪರ್ಧೆಗಳೊಂದಿಗೆ ಜರುಗಲಿದೆ’ ಎಂದು ಜಾತ್ರಾ ಸಮಿತಿಯ ಅಧ್ಯಕ್ಷ ಲಕ್ಕಪ್ಪ ಹುಚರಡ್ಡಿ ಅವರು ತಿಳಿಸಿದರು. ತಾಲ್ಲೂಕಿನ ಕಮಲದಿನ್ನಿಯಲ್ಲಿ ಲಕ್ಷ್ಮೀದೇವಿ ಜಾತ್ರೆಯ ಪ್ರಚಾರ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಫೆ. 17ರಂದು ಬೆಳಿಗ್ಗೆ 8ಕ್ಕೆ ಮುತ್ತೈದಿಯರಿಂದ ಉಡಿ ತುಂಬುವುದು, 10ಕ್ಕೆ ಕಮಲದಿನ್ನಿ ಗ್ರಾಮದಿಂದ ಲಕ್ಷ್ಮೀದೇವಿ ದೇವಸ್ಥಾನದ ವರೆಗೆ ಕುಂಭಮೇಳ, ಆರತಿ, ವಿವಿಧವಾದ್ಯಗಳೊಂದಿಗೆ ಪಾಲಕಿ ಉತ್ಸವ ಜರುಗಲಿದೆ.
ಜಾತ್ರೆ ಕಾರ್ಯಕ್ರಮದ ಸಾನ್ನಿಧ್ಯವನ್ನು ಮೂಡಲಗಿಯ
ದತ್ತಾತ್ರಯಬೋಧ ಸ್ವಾಮೀಜಿ, ಸುಣಧೋಳಿಯ ಶಿವಾನಂದ ಸ್ವಾಮೀಜಿ, ರಂಗಾಪೂರ, ಮುನ್ಯಾಳ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಅತಿಥಿಗಳಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ, ವಿರುಪಾಕ್ಷಯ್ಯ ಹಿರೇಮಠ ಹಾಗೂ ಊರ ಪ್ರಮುಖರು ಭಾಗವಹಿಸುವರು ಎಂದು ತಿಳಿಸಿದ್ದಾರೆ.
ಡೊಳ್ಳಿನ ಪದಗಳು: ಫೆ. 17ರಂದು ಮಧ್ಯಾಹ್ನ 2ಕ್ಕೆ ಅರಟಾಳದ ಮಾಳಿಂಗೇಶ್ವರ ಸಂಘದಿಂದ ಮಾಳಿಂಗೇಶ್ವರ ಮಾರ್ಗ, ಬಸನಾಳದ ಅಮೋಘಸಿದ್ಧೇಶ್ವರ ಸಂಘದ ಅಮೋಘಸಿದ್ಧೇಶ್ವರ ಮಾರ್ಗ ಡೊಳ್ಳಿ ಪದಗಳು ಇರುವವು. ಫೆ. 18ರಂದು ರಾತ್ರಿ 9ಕ್ಕೆ ಕಮಲದಿನ್ನಿಯ ಶ್ರೀರಾಮ ಮೆಲೋಡಿಸ್ದಿಂದ ಹಾಸ್ಯ ರಸಮಂಜರಿ ಇರುವುದು. ಜಾತ್ರೆಯ ಎರಡೂ ದಿನ ಮಹಾಪ್ರಸಾದ ಇರುವುದು. ಫೆ. 18ರಂದು ಸಂಜೆ 4ಕ್ಕೆ ಭಂಡಾರ ಒಡೆಯುವುದು, ಭಂಡಾರದ ಓಕುಳಿ ಇರುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಾತ್ರಾ ಸಮಿತಿಯ ಹಣಮಂತ ಪೂಜೇರಿ, ಉಲ್ಲಾಸ ಪಾಟೀಲ, ರಾಮಣ್ಣ ಭಾಗೋಜಿ, ರಮೇಶ ಗಿರಡ್ಡಿ, ರಾಮಣ್ಣ ಪೂಜೇರಿ, ಭೀಮಶಿ ಪೂಜೇರಿ, ಬಾಲು ಪಾಟೀಲ, ಪರಸಪ್ಪ ಚೌಡಕಿ, ಅಶೋಕ ಮಾಚಕನೂರ, ಬಸವರಾಜ ಹತ್ತರಕಿ ಇದ್ದರು.
IN MUDALGI Latest Kannada News