ಮೂಡಲಗಿ: ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪೌರ ನೌಕರರು ಪಟ್ಟಣದ ಪುರಸಭೆ ಅವರಣದಲ್ಲಿ ಮಂಗಳವಾರದಿಂದ ನಡೆಸುತ್ತಿರುವ ಅನಿರ್ಧಿμÁ್ಟವಧಿ ಮುಷ್ಕರ ಗುರುವಾರ ಮೂರು ದಿನ ಪೂರೈಸಿ ನಾಲ್ಕೆನೇ ದಿನಕ್ಕೆ ಮುಂದುವರಿದಿದೆ.
ಮುಷ್ಕರಕ್ಕೆ ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಬೆಂಬಲ ಸೂಚಿಸಿ ಮುಷ್ಕರದಲ್ಲಿ ಭಾಗವಹಿಸಿದರು.
ಈ ಸಮಯದಲ್ಲಿ ರೈತ ಮುಂಖಡ ಮಾರುತಿ ಕರಿಶೆಟ್ಟಿ ಮಾತನಾಡಿ, ಪೌರ ನೌಕರ ವಿವಿಧ ಬೇಡಿಕೆಗಳಿಗೆ ಸರಕಾರ ಕೂಡಲೇ ಸ್ಪಂದಿಸದಿದ್ದರೆ ರಾಜ್ಯಾಂದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸರಕಾರಕ್ಕೆ ಆಗ್ರಹಿಸಿದರು.
ಪೌರಸೇವಾ ನೌಕರರು ಹೊರ ಗುತ್ತಿಗೆ ಪದ್ಧತಿ ನಿಲ್ಲಿಸಿ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಬೇಕು. ನೀರು ಸರಬರಾಜುದಾರರು ಹಾಗೂ ವಾಹನ ಚಾಲಕರು ಜೀವನ ಭದ್ರತೆಯಿಲ್ಲದೆ ಅನೇಕ ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದಾರೆ. ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಬಿಬಿಎಂಪಿಯಲ್ಲಿರುವ ಪೌರ ಕಾರ್ಮಿಕರನ್ನು ಮಾತ್ರ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಯಂಗೊಳಿಸಿದ್ದು, ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರು ಹಾಗೂ ಪೌರ ನೌಕರರನ್ನು ನಿರ್ಲಕ್ಷಿಸಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು ವೇತನ ಸಿಗುತ್ತಿಲ್ಲ. ಇದರಿಂದ ಕುಟುಂಬದ ನಿರ್ವಹಣೆ ಕಷ್ಟವಾಗಿದೆ. ಜ್ಯೋತಿ ಸಂಜೀವಿನಿ ಯೋಜನೆ ಪೌರ ಕಾರ್ಮಿಕರಿಗೆ ಸಿಗಬೇಕು. ಗುತ್ತಿಗೆ ಹೊರ ಗುತ್ತಿಗೆ ಬದಲು ನೇರ ಪಾವತಿಯಾಗಬೇಕೆಂದು ಒತ್ತಾಯಿಸಿದರು.
ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುರೇಶ ನಾಯ್ಕ, ತಾಲೂಕಾಧ್ಯಕ್ಷ ಭೀಮಶಿ ರೋಡನ್ನವರ, ಪರೀಶ ಉಪ್ಪಿನ, ಸಂಗಪ್ಪ ಹಡಪದ, ಮಹಾದೇವ ಬಂಗೇನ್ನವರ, ಈಶ್ವರ ಮುಗಳಖೋಡ, ಪೌರ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಯಶವಂತ ಶಿದ್ದಿಂಗಪ್ಪಗೋಳ ಹಾಗೂ ಅನೇಕ ಪೌರ ಕಾರ್ಮಿಕರು ಇದ್ದರು.