ಮೂಡಲಗಿ ತಾಲ್ಲೂಕಿನ ಕಮಲದಿನ್ನಿ ಗ್ರಾಮದಲ್ಲಿ ಮೂಡಲಗಿಯ ಎಸ್ಎಸ್ಆರ್ ಪದವಿ ಪೂರ್ವ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಸುಣಧೋಳಿಯ ಶಿವಾನಂದ ಸ್ವಾಮಿಗಳು, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ಉದ್ಘಾಟಿಸಿದರು.
ಎನ್ಎಸ್ಎಸ್ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ರೂಪಿಸುತ್ತದೆ
ಮೂಡಲಗಿ: ‘ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆ, ಶಿಸ್ತು, ರಾಷ್ಟ್ರಾಭಿಮಾನವನ್ನು ಬೆಳೆಸುತ್ತದೆ’ ಎಂದು ಮೂಡಲಗಿಯ ಕಲಾ ಹಾಗೂ ವಾಣಿಜ್ಯ ಮಹಾವಿಯಾಲಯದ ಪ್ರಾಚಾರ್ಯ ಪ್ರೊ. ಜಿ.ವಿ. ನಾಗರಾಜ ಹೇಳಿದರು.
ತಾಲ್ಲೂಕಿನ ಕಮಲದಿನ್ನಿ ಗ್ರಾಮದಲ್ಲಿ ಎಸ್ಎಸ್ಆರ್ ಪದವಿ ಪೂರ್ವ ಮಹಾವಿದ್ಯಾಲಯದವರು ಏರ್ಪಡಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಯುವಕರಲ್ಲಿ ಅಗಾಧವಾದ ಶಕ್ತಿ ಇದ್ದು ಅದರ ಸದ್ಬಳಿಕೆ ಮಾಡಿಕೊಂಡು ಸಮಾಜವನ್ನು ಕಟ್ಟುವ ಕಾರ್ಯ ಮಾಡಬೇಕು ಎಂದರು.
ಶಿಬಿರವನ್ನು ಉದ್ಘಾಟಿಸಿದ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಆರ್. ಸೋನವಾಲಕರ ಮಾತನಾಡಿ ಕಮಲದಿನ್ನಿ ಗ್ರಾಮದ ಜನರ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಯು ಮಾದರಿಯಾಗಿದೆ. ವಿದ್ಯಾರ್ಥಿಗಳು ತಾವು ಗ್ರಾಮದಲ್ಲಿ ಮಾಡುವ ಸೇವೆಯು ಶಾಶ್ವತವಾಗಿ ಉಳಿಯುಂತೆ ಮಾಡಬೇಕು ಎಂದರು.
ಸಾನಿದ್ಯವಹಿಸಿದ್ದ ಸುಣಧೋಳಿಯ ಶಿವಾನಂದ ಸ್ವಾಮಿಗಳು ಮಾತನಾಡಿ ನಿಸ್ವಾರ್ಥದಿಂದ ಮಾಡು ಸೇವೆಯು ಸಮಾಜ ಸೇವೆಯಾಗುತ್ತದೆ. ವಿದ್ಯಾರ್ಥಿಗಳು ಶಿಬಿರದ ಅವಧಿಯಲ್ಲಿ ಸ್ಮರಣೀಯ ಕಾರ್ಯಗಳನ್ನು ಮಾಡಬೇಕು ಎಂದರು.
ಗ್ರಾಮದ ಗಣ್ಯ ವ್ಯಕ್ತಿ ಬಸಪ್ಪ ಸಂಕಣ್ಣವರ ಅಧ್ಯಕ್ಷತೆ ವಹಿಸಿದ್ದರು. ಬಾಲಶೇಖರ ಬಂದಿ, ಪದವಿ ಪೂರ್ವ ಮಹಾವಿದ್ಯಾಲಯ ಪ್ರಾಚಾರ್ಯ ಎಂ.ಎಸ್. ಪಾಟೀಲ, ಲಕ್ಕಪ್ಪ ಹುಚರಡ್ಡಿ, ರಮೇಶ ಪಾಟೀಲ, ಉಮೇಶ ಹುಚರಡ್ಡಿ, ರಾಮಣ್ಣ ಪಾಟೀಲ, ಅಶೋಕ ಮಾಚಕನೂರ, ನಾಗಪ್ಪ ಪೂಜೇರಿ ಮುಖ್ಯ ಅತಿಥಿಯಾಗಿದ್ದರು.
ಕಾರ್ಯಕ್ರಮಾಧಿಕಾರಿ ಸುಶಾಂತ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು.
ಬಿ.ಜಿ. ಗಡಾದ, ಎಲ್.ಆರ್. ಧರ್ಮಟ್ಟಿ, ಎಚ್.ಎಂ. ಹತ್ತರಕಿ, ಸಿದ್ಧಾರೂಢ ಸಣ್ಣಮೇತ್ರಿ, ಸುಭಾಷ ಖಾನಪ್ಪಗೋಳ ಇದ್ದರು.