ಗುಣಮಟ್ಟದ ಶಿಕ್ಷಣದಿಂದ ಮಕ್ಕಳ ಬದುಕು ಬಂಗಾರವಾಗುತ್ತದೆ: ಈರಪ್ಪ ದೇಯಣ್ಣವರ
ಬೆಟಗೇರಿ: ಕಲಿಕೆ ನಿಂತ ನೀರಾಗದೇ ಹರಿಯುವ ನೀರಿನಂತಿರಬೇಕು. ಶಾಲಾ ಶಿಕ್ಷಕರು ಮಕ್ಕಳಿಗೆ ನಿತ್ಯ ಹೊಸತನದ ಅನುಭವ ನೀಡಬೇಕು ಎಂದು ಬೆಟಗೇರಿ ತಾಪಂ ಮಾಜಿ ಸದಸ್ಯ ಈರಪ್ಪ ದೇಯಣ್ಣವರ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಚೈತನ್ಯ ಗ್ರುಪ್ಸ್ನ ಬೆಟಗೇರಿ ಕೃಷ್ಣಶರ್ಮ ಚೈತನ್ಯ ಕನ್ನಡ ಮಾಧ್ಯಮ ಮತ್ತು ಶ್ರೀಮತಿ ಸತ್ತೆವ್ವ ದೇಯಣ್ಣವರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ನಡೆದ ಉಭಯ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬಿಳ್ಕೋಡುವ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿ, ಗುಣಮಟ್ಟದ ಶಿಕ್ಷಣದಿಂದ ಮಕ್ಕಳ ಬದುಕು ಬಂಗಾರವಾಗುತ್ತದೆ ಎಂದರು.
ಶಿಕ್ಷಣಪ್ರೇಮಿ ಬಸಪ್ಪ ಮೇಳೆಣ್ಣವರ ಜ್ಯೋತಿ ಬೆಳಗಿಸಿ ಸಮಾರಂಭ ಉದ್ಘಾಟಿಸಿದರು. ಉಭಯ ಮಾಧ್ಯಮ ಶಾಲೆಗಳ ಆಡಳಿತಾಧಿಕಾರಿ ರವಿ ಭರಮನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಸನ್ 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸಂಸ್ಥೆಯ 5ನೇ ತರಗತಿ ಬಡ ಮತ್ತು ಪ್ರತಿಭಾವಂತ 25 ಜನ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು. ಸಂಸ್ಥೆಯ ಗೌರವ ಕಾರ್ಯದರ್ಶಿ ವೈ.ಬಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಕರ, ಪಾಲಕರ ಹಾಗೂ ಬಾಲಕರ ಜವಾಬ್ದಾರಿಗಳ ಕುರಿತು ಹೇಳಿದರು.
ವಿವಿಧ ವಲಯದಲ್ಲಿ ಸಾಧನೆಗೈದ ಮತ್ತು ಉನ್ನತ ವಿಶೇಷ ವ್ಯಾಸಂಗಕ್ಕೆ ಆಯ್ಕೆಯಾದ ಉಭಯ ಶಾಲೆಯ ವಿದ್ಯಾರ್ಥಿಗಳಿಗೆ, ಗಣ್ಯರನ್ನು ಸತ್ಕರಿಸಿದ ಬಳಿಕ ಉಭಯ ಮಾಧ್ಯಮ ಶಾಲಾ ಮಕ್ಕಳಿಂದ ಭಾಷಣ, ರೂಪಕಗಳ ವೇಷಭೂಷಣ ಹಾಗೂ ಸಾಂಸ್ಕøತೀಕ ಮನರಂಜನೆಯ ಕಾರ್ಯಕ್ರಮಗಳು ನಡೆದು ಬಹುಮಾನ ವಿತರಿಸಲಾಯಿತು.
ನಿವೃತ್ತ ಮುಖ್ಯಶಿಕ್ಷಕ ಎಸ್.ವೈ.ಪಾಟೀಲ, ರಮೇಶ ನಾಯ್ಕ, ಶೇಖರ ಪಾಟೀಲ, ಕನ್ನಡ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಕಮಲಾಕ್ಷಿ ನಾಯ್ಕ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ವಿದ್ಯಾಶ್ರೀ ಜನ್ಮಟ್ಟಿ, ನಬೀಸಾಬ ನದಾಫ್, ಷರಿಪ್ಸಾಬ ನದಾಫ್, ಉಭಯ ಮಾಧ್ಯಮ ಶಾಲೆಗಳ ಶಿಕ್ಷಕರು, ಪಾಲಕರು, ಶಿಕ್ಷಣ ಪ್ರೇಮಿಗಳು, ವಿದ್ಯಾರ್ಥಿಗಳು, ಇತರರು ಇದ್ದರು. ಕಾವೇರಿ ಹೊಸಮಠ ಪ್ರಾರ್ಥಿಸಿದರು. ಪಾರ್ವತಿ ಮುಧೋಳ ಸ್ವಾಗತಿಸಿದರು. ನಭೀಸಾಬ ನದಾಫ್ ಕಾರ್ಯಕ್ರಮ ನಿರೂಪಿಸಿದರು. ವೀಣಾ ಆಗೇರ ಕೊನೆಗೆ ವಂದಿಸಿದರು.