ಮೂಡಲಗಿ: ದೇಶ ಕಾಯುವ ಸೈನಿಕರಿಂದಾಗಿ ದೇಶದಲ್ಲಿರುವ ಜನರು ಸುರಕ್ಷಿತವಾಗಿ ಮತ್ತು ದೇಶವು ಸದೃಢವಾಗಿ ಬೆಳೆಯಲು ಸಾಧ್ಯವಾಗಿದೆ‘ ಎಂದು ಯಾದವಾಡ ಗ್ರಾಮ ಪಂಚಾಯತ ಅಧ್ಯಕ್ಷ ಬಸವರಾಜ ಭೂತಾಳಿ ಹೇಳಿದರು.
ಭಾರತೀಯ ಸೇನೆಯಲ್ಲಿ ಸುಧೀರ್ಘ 22 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ನಿವೃತ್ತಿಯಾಗಿ ಮರಳಿ ತವರೂರಿಗೆ ಆಗಮಿಸಿದ ಫಕೀರಪ್ಪ ಭೀಮಪ್ಪ ಭಜಂತ್ರಿ ಅವರಿಗೆ ಯಾದವಾಡ-ಗಿರಿಸಾಗರ ಗ್ರಾಮಸ್ಥರು ಮತ್ತು ಅಖಿಲ ಕರ್ನಾಟಕ ಮಾಜಿ ಸೈನಿಕರ ಕ್ಷೇಮಾಭವೃದ್ಧಿ ಸಂಘದವರ ಏರ್ಪಡಿಸಿದ್ದ ಸ್ವಾಗತ ಮತ್ತು ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗಡಿ ಕಾಯುವ ಸೈನಿಕರು ತಮ್ಮ ಜೀವವನ್ನು ಲೆಕ್ಕಿಸದೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಸೈನಿಕರ ಬಗ್ಗೆ ಗೌರವ ಕೊಡುವ ಮೂಲಕ ಜನರು ತಮ್ಮ ದೇಶಾಭಿಮಾನವನ್ನು ಬಿಂಬಿಸಬೇಕು ಎಂದರು.
ಫಕೀರಪ್ಪ ಭಜಂತ್ರಿ ಭಾರತೀಯ ಸೇನೆಯಿಂದ ನಿವೃತ್ತರಾಗಿ ತವರೂರಿಗೆ ಆಗಮಿಸಿದ್ದು ಯಾದವಾಡ–ಗಿರಿಸಾಗರ ಗ್ರಾಮಕ್ಕೆ ಹೆಮ್ಮೆ ತರುವಂತದ್ದು. ಫಕೀರಪ್ಪ ಅವರು ಯುವ ಜನತೆಗೆ ಮಾರ್ಗದರ್ಶನ ನೀಡುವ ಮೂಲಕ ಯುವಕರನ್ನು ದೇಶ ಸೇವೆ ಮಾಡಲು ಅನಿಗೊಳಿಸಬೇಕು ಎಂದರು. ಅಖಿಲ ಕರ್ನಾಟಕ ಮಾಜಿ ಸೈನಿಕರ ಕ್ಷೇಮಾಭವೃದ್ಧಿ ಸಂಘದ ಮೂಡಲಗಿ ತಾಲೂಕಾ ಘಟಕದ ಅಧ್ಯಕ್ಷ ಚರಂತಯ್ಯ ಮಳಿಮಠ ಮತ್ತು ಸಾಲಹಳ್ಳಿಯ ದೈಹಿಕ ಶಿಕ್ಷಕ ಅಶೋಕ ಗಾಣಗಿ ಮಾತನಾಡಿ ದೇಶಕ್ಕೆ ಅನ್ನ ನೀಡುವ ರೈತ, ದೇಶ ಕಾಯುವ ಯೋಧ ಹಾಗೂ ಅಕ್ಷರ ಕಲಿಸುವ ಶಿಕ್ಷಕ ಇವರು ಸಮಾಜದ ಕಣ್ಮಣಿಗಳು ಎಂದ ಅವರು ಸೇವಾ ನಿವೃತ್ತ ಸೈನಿಕ ಫಕೀರಪ್ಪ ಭೀಮಪ್ಪ ಭಜಂತ್ರಿ ಕಾರ್ಯವನ್ನು ಶ್ಲಾಘನಿಸಿದರು.
ಸಮಾರಂಭದ ಸಾನ್ನಿಧ್ಯವನ್ನು ವೆ.ಮೂ ಶ್ರೀ ಬಸಲಿಂಗಯ್ಯಾ ಹಿರೇಮಠ(ಪಟ್ಟದ ದೇವರು) ವಹಿಸಿದರು.ಸಮಾರಂಭವನ್ನು ಯಾದವಾಡ ಗ್ರಾಮ ಪಂಚಾಯತ ಉಪಾಧ್ಯಕ್ಷ ಕಲ್ಮೇಶ ಗಾಣಗಿ ಸಸಿಗೆ ನೀರೂಣಿಸುವ ಮೂಲಕ ಉದ್ಘಾಟಿಸಿದರು.
ಇದಕ್ಕೂ ಮೊದಲು ಯಾದವಾಡ ಗ್ರಾಮದ ಬಸವೇಶ್ವರ ವೃತ್ತದ ಬಳಿಯಲ್ಲಿ ಆಗಮಿಸಿದ್ದ ಸೇವಾ ನಿವೃತ್ತ ಸೈನಿಕ ಫಕೀರಪ್ಪ ಭೀಮಪ್ಪ ಭಜಂತ್ರಿ ಅವರನ್ನು ಶಾಲು, ಹೂ ಮಾಲೆಗಳನ್ನು ಹಾಕಿ ಜೈಕಾರ ಘೋಷಣೆಗಳೊಂದಿಗೆ ಗಣ್ಯರು, ಮಾಜಿ ಮತ್ತು ಹಾಲಿ ಸೈನಿಕರು, ವೀರನಾರಿಯರು, ವಿದ್ಯಾರ್ಥಿಗಳು ಮತ್ತು ಮಹಿಳೆಯರು ಆರತಿ ಬೆಳಗಿ ಸಂಭ್ರಮದಿಂದ ಬರಮಾಡಿಕೊಂಡರು. ಬಸವೇಶ್ವರ ವೃತ್ತದಿಂದ ತೆರೆದ ಜೀಪದಲ್ಲಿ ಸೇವಾ ನಿವೃತ್ತ ಸೈನಿಕ ಫಕೀರಪ್ಪ ಭೀಮಪ್ಪ ಭಜಂತ್ರಿ ಮತ್ತು ಆತನ ಪತ್ನಿ, ಮಕ್ಕಳನ್ನು ಮೆರವಣಿಗೆಯ ಮೂಲಕ ಗ್ರಾಮದ ಹೊನ್ನಮ್ಮದೇವಿ, ಘಟಗಿ ಬಸವೇಶ್ವರ ದೇವರ ದರ್ಶನ ಪಡೆದು ಪೇಟೆ ಮಾರ್ಗವಾಗಿ ತೇರಳಿ ಗಿರಿಸಾಗರದ ಪಾಂಡುರಂಗ, ಶಿರಿಡಿ ಸಾಯಿಬಾಬಾ, ಹನುಮಾನ ದೇವರು ಮತ್ತು ಲಕ್ಷ್ಮೀ ದೇವಿ ದರ್ಶನ ಪಡೆದು ಸಮಾರಂಭದ ಹನುಮಾನ ದೇವಸ್ಥಾನದ ಆವರಣಕ್ಕೆ ಕರೆ ತರಲಾಯಿತು.
ಬಾಜಾ ಭಜಂತ್ರಿ ಧ್ವನಿವರ್ದಕದಲ್ಲಿ ದೇಶ ಭಕ್ತಿ ಹಾಡುಗಳು, ದೇಶಾಭಿಮಾನದ ಘೋಷಣೆಗಳು ಮೆರವಣಿಗೆಯಲ್ಲಿ ಮೊಳಗಿದವು. ಮಾಜಿಯೋಧರ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಮತ್ತು ಯುವಕ ಸಂಘಗಳ ಪದಾಧಿಕಾರಿಗಳು ಸೇರಿದಂತೆ ಯೋಧನ ಪರಿವಾರದ ಸದಸ್ಯರು ಸನ್ಮಾನಿಸಿ ಗೌರವಿಸಿದರು.
ವೇದಿಕೆಯಲ್ಲಿ ಪುಂಡಲೀಕ ಕೋಟಿತೋಟ, ರಾಮಪ್ಪ ಮುಗಳಖೋಡ, ಅರ್ಜುನ ಕೋಲುರ, ಅನಿತಾ ಮಿರ್ಜಿ, ನಿಂಗಪ್ಪ ಸಂಗಾನಟ್ಟಿ, ಬಸಪ್ಪ ಮಾಲಮನಿ, ಗುಂಡು ಮೋರೆ, ಬಾಷಾಸಹೇಬ ಚಿಪಲಕಟ್ಟಿ, ವೀರುಪಾಕ್ಷ ಕಟ್ಟಿ, ಮೈಬುಸಾಬ ಮೋಮಿನ, ಶಂಕರ ತೋಟಗಿ ಶಿವಪ್ಪ ಶಿರೊಸಿ, ಹಣಮಂತ ತೋಟಗಿ, ರಾಯಪ್ಪ ರೂಗಿ, ಇಮಾಮಸಾಬ ಬಾಗವಾನ, ಮನೋಜ ಮಹಾಲಿಂಗಪೂರ, ಹಣಮಂತ ಭಜಂತ್ರಿ, ಬಾಳಪ್ಪ ಭಜಂತ್ರಿ, ಭೀಮಪ್ಪ ಭಜಂತ್ರಿ, ಸತ್ಯಪ್ಪ ಭಜಂತ್ರಿ ಮತ್ತಿತರು ಉಪಸ್ಥಿತರಿದ್ದರು.
ಗಿರಿಸಾಗರ ಸರಕಾರಿ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಡಿ.ಎ.ಘೋರ್ಪಡೆ ಸ್ವಾಗತಿಸಿದರು, ಶಿಕ್ಷಕರಾದ ಆರ್.ಕೆ.ರೂಗಿ, ವಿ.ಜಿ.ಕಲಾದಗಿ, ಎನ್.ಬಿ.ಗಾಣಿಗೇರ ನಿರೂಪಿಸಿದರು, ಎನ್.ಎಚ್.ಕಾಕನೂರ ವಂದಿಸಿದರು.
IN MUDALGI Latest Kannada News