ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ
ಬನವಾಸಿ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಶುಕ್ರವಾರ ಹುಟ್ಟೂರು ಭಾಶಿ ಗ್ರಾಮಕ್ಕೆ ಆಗಮಿಸಿದ ವೀರ ಯೋಧ ಶಿವಪ್ಪ ಬಡಿಗೇರ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.
ನಿವೃತ್ತರಾಗಿ ಗ್ರಾಮಕ್ಕೆ ಆಗಮಿಸುತ್ತಿರುವ ವಿಷಯವನ್ನು ಅರಿತ ಊರಿನ ಜನತೆ ವೀರ ಯೋಧನ ಸ್ವಾಗತಕ್ಕೆ ಕಾದು ಕುಳಿತಿದ್ದರು. ಭಾರತೀಯ ಸೇನೆಯಲ್ಲಿ 24 ವರ್ಷಗಳ ಕಾಲ ಭಾರತ ಮಾತೆಯ ಸೇವೆಗೈದು ಹುಟ್ಟೂರಿಗೆ ಸಂಜೆ 6 ಗಂಟೆಗೆ ಆಗಮಿಸಿದ ನಿವೃತ್ತ ವೀರ ಯೋಧ ಶಿವಪ್ಪ ಬಡಿಗೇರ ಅವರಿಗೆ ಸುಮಂಗಲೆಯರು ಆರತಿ ಬೆಳಗುವ ಮೂಲಕ ಬರ ಮಾಡಿಕೊಂಡರು. ಗ್ರಾಮದ ಮುಖಂಡರು, ಯುವಕರು ಯೋಧನ ಮೇಲೆ ಹೂವಿನ ಸುರಿಮಳೆಗೈಯುತ್ತ ವಂದೇ ಮಾತರಂ, ಭಾರತ್ ಮಾತಾ ಕೀ ಜೈ, ವೀರ ಯೋಧ ಶಿವಪ್ಪ ಬಡಿಗೇರ ಅವರಿಗೆ ಜಯವಾಗಲಿ ಎಂಬ ಜಯ ಘೋಷಣೆಯನ್ನು ಹಾಕುತ್ತ, ವಾದ್ಯ ಮೇಳದೊಂದಿಗೆ, ಹೂವಿನಿಂದ ಅಲಂಕೃತವಾದ ತೆರೆದ ವಾಹನದಲ್ಲಿ ಯೋಧನನ್ನು ಗ್ರಾಮದ ರಸ್ತೆಯಲ್ಲಿ ಮೆರವಣಿಗೆ ಮಾಡಿದರು.
ಈ ಸಂದರ್ಭದಲ್ಲಿ ಭಾಶಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಶಂಕರ ಗೌಡ ಮಾತನಾಡಿ, ಭಾರತೀಯ ಸೇನೆಯಲ್ಲಿ ಸುದೀರ್ಘ 24 ವರ್ಷಗಳ ಕಾಲ ಸೇವೆಗೈದು ಹುಟ್ಟೂರಿಗೆ ಆಗಮಿಸಿರುವ ವೀರ ಯೋಧ ಶಿವಪ್ಪ ಬಡಿಗೇರ ನಮ್ಮ ಊರಿನ ಹೆಮ್ಮೆಯ ಪುತ್ರರಾಗಿದ್ದಾರೆ. ಇವರ ದೇಶ ಸೇವೆ ಜನಮಾನಸದಲ್ಲಿ ಅಚ್ಚ ಅಳಿಯದೇ ಉಳಿಯಲಿದೆ. ಯುವ ಪೀಳಿಗೆ ಇವರ ತತ್ವ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸತ್ಕಾರ ಸ್ವೀಕರಿಸಿದ ನಿವೃತ್ತ ಯೋಧ ಶಿವಪ್ಪ ಬಡಿಗೇರ ಮಾತನಾಡಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದರಲ್ಲಿ ಸಿಗುವ ಆನಂದ ಯಾವ ಕೆಲಸದಲ್ಲೂ ದೊರೆಯುವುದಿಲ್ಲ. ನಿಮ್ಮೆಲ್ಲರ ಸ್ವಾಗತ ಗೌರವದಿಂದ ನನ್ನ 24 ವರ್ಷಗಳ ಸೈನಿಕ ವೃತ್ತಿ ಜೀವನ ಸಾರ್ಥಕವಾಯಿತು. ನಾವೆಲ್ಲರೂ ಯುವ ಜನತೆಯನ್ನು ಭಾರತೀಯ ಸೇನೆಗೆ ಸೇರುವಂತೆ ಪ್ರೇರೆಪಿಸಬೇಕು ಎಂದು ಹೇಳಿದರು.
ಭಾಶಿ ಗ್ರಾಮ ಪಂಚಾಯಿತಿಯ ವತಿಯಿಂದ ಪಿಡಿಓ ಪರಶುರಾಮ್ ಯೋಧನಿಗೆ ಮಾಲಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಬನವಾಸಿ ಸಹಕಾರಿ ಸಂಘದ ನಿರ್ದೇಶಕರಾದ ವಿರೇಂದ್ರ ಗೌಡ, ಗಜಾನನ ಗೌಡ, ಪ್ರಮುಖರಾದ ಜಯಶೀಲ ಗೌಡ, ಗುರುಮೂರ್ತಿ ನಾಯ್ಕ್, ಜಯಶೀ¯ ನಾಯ್ಕ್, ಕುಮಾರ ನಾಯ್ಕ್, ಪ್ರವೀಣ ಪಾಟೀಲ, ಶಶಿಧರ ನಾಯ್ಕ್, ಯೋಧನ ತಾಯಿ ಈರಮ್ಮ ಬಡಿಗೇರ, ಪತ್ನಿ ಮೋಹಿನಿ ಬಡಿಗೇರ, ಸಹೋದರ ಪಾಂಡು ಬಡಿಗೇರ ಸೇರಿದಂತೆ ಊರಿನ ಗ್ರಾಮಸ್ಥರು ಪಾಲ್ಗೋಂಡಿದ್ದರು.