ಮೂಡಲಗಿ: ಸತತ 7 ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿಯ ಸರ್ಕಾರ ದೇಶದಲ್ಲಿ ಮಾಡಿದಂತಹ ಅದ್ವೀತಿಯ ಸಾಧನೆ ಮತ್ತು ಅಭಿವೃದ್ಧಿ ಪರ ರಾಜಕಾರಣವನ್ನು ಜನ ಮೆಚ್ಚಿ ಪಂಚರಾಜ್ಯ ಚುನಾವಣೆಯಲ್ಲಿ 4 ರಾಜ್ಯಗಳಲ್ಲಿ ಆರ್ಶಿವಾದ ಮಾಡಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಸಂತಸ ವ್ಯಕ್ತಪಡಿಸಿದರು.
ಗುರುವಾರ ಮಾ.10 ರಂದು ಪತ್ರಿಕಾ ಹೇಳಿಕೆ ನೀಡಿದ ಅವರು ಕರೋನಾ ಕಾಲಘಟದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಕಠಿಣವಾಗಿದ್ದರೂ ಕೂಡ ಮತ್ತು ವಿರೋಧಿಗಳ ಅಪಪ್ರಚಾರದ ಮಧ್ಯೆಯು ಜನರನ್ನು ಒಂದು ಸುರಕ್ಷಿತ ದಡಕ್ಕೆ ತರುವಲ್ಲಿ ನರೇಂದ್ರ ಮೋದಿ ಸಫಲರಾಗಿದ್ದಾರೆ. ಅವರ ಹೇಳಿಕೆಯಾಗಿರುವ “ಸಭ್ ಕಾ ಸಾಥ್, ಸಭ್ ಕಾ ವಿಕಾಸ, ಸಭ್ ಕಾ ವಿಶ್ವಾಸ, ಸಭ್ ಕಾ ಪ್ರಯಾಸ್” ಅನ್ನುವಂತಹ ಅವರ ಮಾತನ್ನು ಜನ ಅಕ್ಷರ ಸಹ ಸ್ವೀಕಾರ ಮಾಡಿದ್ದಾರೆ ಎಂದರು.
ದೇಶದ ಜನ ಕಾಂಗ್ರೇಸ್ ಹಾಗೂ ಸಮಾಜವಾದಿ ಪಾರ್ಟಿಗಳ ಕುಟುಂಬ ರಾಜಕಾರಣವನ್ನು ದಿಕ್ಕರಿಸಿ, ಒಂದು ಗುಲಗಂಜಿಯಷ್ಟು ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತಹ ಮತ್ತು ಸ್ವಹಿತಾಶಕ್ತಿ ಇಲ್ಲದಂತಹ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವವನ್ನು ದೇಶದ ಜನ ಒಪ್ಪಿಕೊಂಡಿದ್ದಾರೆ, ಅದರ ಪರಿಣಾಮ ಇಷ್ಟು ದೊಡ್ಡ ಪ್ರಮಾಣದ ಗೆಲುವು ಸಾಧ್ಯವಾಗಿದೆ ಎಂದರು.
ಒಂದು ವಿಶಿಷ್ಟ ಪರಿಸ್ಥಿತಿ ಕಾರಣದಿಂದ ಪಂಜಾಬ್ನಲ್ಲಿ ನಾವು ಹಿಂದುಳಿದಿರಬಹುದು, ಮುಂದಿನ ದಿನಗಳಲ್ಲಿ ಪಂಜಾಬ್ ಗೆಲ್ಲುವಂತಹ ದಿಶೆಯಲ್ಲಿ ಬಿಜೆಪಿ ಮುನ್ನುಗುತ್ತದೆ ಮತ್ತು ಮುಂಬರುವ 2023ರ ರಾಜ್ಯ ವಿಧಾನಸಭೆ ಚುನಾವಣೆ 2024ರ ಲೋಕಸಭಾ ಚುನಾವಣೆ ಈ ಎರಡು ಚುನಾವಣೆಗಳಲ್ಲೂ ಕೂಡಾ ನಿಶ್ಚಿತವಾಗಿ ಮತ್ತೊಂದು ಸಲ ಭಾರತೀಯ ಜನತಾ ಪಾರ್ಟಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುವಂತಹ ಎಲ್ಲ ಲಕ್ಷಣಗಳೂ ಈ ಚುನಾವಣೆ ಮೂಲಕ ಕಂಡುಬರುತ್ತದೆ ಎಂದರು. ಈ ಗೆಲುವಿಗೆ ಕಾರಣಿಭೂತರಾದ ಮತದಾರ ಬಂಧುಗಳಿಗೆ ಹೃದಯಪೂರ್ವಕ ಅಭಿನಂಧನೆ ತಿಳಿಸುವುದಾಗಿ ಸಂಸದ ಈರಣ್ಣ ಕಡಾಡಿ ಹೇಳಿದ್ದಾರೆ.
