‘ಆರೋಗ್ಯಪೂರ್ಣ ಸಮಾಜಕ್ಕಾಗಿ ಸಾವಯವ ಕೃಷಿ ಅವಶ್ಯವಿದೆ’: ಶ್ರೀಧರಬೋಧ ಸ್ವಾಮಿಜಿ
ಮೂಡಲಗಿ: ‘ರೈತರು ಕೃಷಿಯನ್ನು ಕೌಶಲತೆಯಿಂದ ಮಾಡುವ ಮೂಲಕ ಉತ್ತಮ ಆದಾಯವನ್ನು ಪಡೆಯಲು ಸಾಧ್ಯ’ ಎಂದು ಮೂಡಲಗಿ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀಧರಬೋಧ ಸ್ವಾಮಿಜಿ ಹೇಳಿದರು.
ಇಲ್ಲಿಯ ಶಿವಬೋಧರಂಗ ಮಠದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದವರು ಏರ್ಪಡಿಸಿದ್ದ ಸಾವಯವ ಕೃಷಿ ಕುರಿತು ವಿಚಾರ ಸಂಕಿರ್ಣ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ರೈತರು ರಾಸಾಯಣಿಕ ಗೊಬ್ಬರವನ್ನು ಬಳಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಕಡಿಮೆ ಮಾಡುತ್ತಿದ್ದು, ಅಹಾರವನ್ನು ವಿಷಕಾರಿ ಮಾಡುತ್ತಿದ್ದಾರೆ. ಆರೋಗ್ಯಪೂರ್ಣವಾದ ಸಮಾಜ ನಿರ್ಮಿಸಲು ಸಾವಯವ ಕೃಷಿಯೊಂದೆ ದಾರಿ ಎಂದರು.
ಮುಖ್ಯ ಅತಿಥಿ ಮುಧೋಳ ತಾಲ್ಲೂಕಿನ ಮುಗಳಖೋಡ ಗ್ರಾಮದ ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಶ್ರೀಕಾಂತ ಕುಂಬಾರ ಮಾತನಾಡಿ ‘ರೈತರು ತಾವು ಕಷ್ಟಪಟ್ಟು ಬೆಳೆದ ಬೆಳೆಯನ್ನು ಬೇರೆಯವರಿಗೆ ಕೊಟ್ಟು ಪರಾವಲಂಬಿಗಳಾಗುತ್ತಿದ್ದು, ತಾವು ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆಗೊಳಿಸುವ ಮೂಲಕ ಉತ್ತಮ ಆದಾಯ ಪಡೆಯಬಹುದಾಗಿದೆ’ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಕಲ್ಲೋಳಿಯ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ರಮೇಶ ಖಾನಗೌಡ್ರ ಮಾತನಾಡಿ ನಾಟಿ ಮಾಡುವ ಪರ್ವದಲ್ಲಿ ಭೂಮಿಯ ಮಣ್ಣು ಪರೀಕ್ಷೆ ಮಾಡಿಸಿ ಕೊರೆತೆಯಿರುವ ಲವಣಾಂಶಗಳನ್ನು ಮಾತ್ರ ಹಾಕಬೇಕು. ಸಾಯವ ಕೃಷಿಗೆ ತಾಳ್ಮೆ ಶ್ರದ್ಧೆ ಮತ್ತು ಪ್ರಾಮಾಣಿಕ ಕಾರ್ಯ ಮಾಡಿದರೆ ಕಂಡಿತ ಯಶಸ್ಸು ದೊರೆಯುತ್ತದೆ ಎಂದರು.
ಅಧ್ಯಕ್ಷತೆವಹಿಸಿದ್ದ ಲಯನ್ಸ್ ಕ್ಲಬ್ ಪರಿವಾದ ಅಧ್ಯಕ್ಷ ಸಂಜಯ ಮೋಕಾಶಿ ಪ್ರಾಸ್ತಾವಿಕ ಮಾತನಾಡಿದರು.
ಸಾವಯವದಲ್ಲಿ ಬೆಳೆದ ಅರಿಷಿನ ಪುಡಿ, ಬೆಲ್ಲದ ಚಕ್ಕಿ, ಕರಿಬೇವು, ಆಕಳ ಸೆಗಣಿಯ ಉದಬತ್ತಿ ಇವನ್ನು ಪ್ರದರ್ಶಿಸಿದರು.
ಮೂಡಲಗಿ ಸೇರಿದಂತೆ ನಾಗನೂರ, ಗುರ್ಲಾಪುರ, ಕಮಲದಿನ್ನಿ, ರಂಗಾಪುರ, ಪಟಗುಂದಿ ಗ್ರಾಮಗಳ ರೈತರು ಭಾಗವಹಿಸಿದ್ದರು.
ವೆಂಕಟೇಶ ಸೋನವಾಲಕರ, ಕೃಷ್ಣಾ ಕೆಂಪಸತ್ತಿ, ಮಲ್ಲಿಕಾರ್ಜುನ ಸಸಾಲಟ್ಟಿ, ಸುರೇಶ ದೇಸಾಯಿ, ಡಾ. ಸಂಜಯ ಶಿಂಧಿಹಟ್ಟಿ, ಡಾ. ಎಸ್.ಎಸ್.ಪಾಟೀಲ, ಮಹಾಂತೇಶ ಹೊಸೂರ ಇದ್ದರು.
ಈರಣ್ಣ ಕೊಣ್ಣೂರ ಸ್ವಾಗತಿಸಿದರು, ಬಾಲಶೇಖರ ಬಂದಿ ನಿರೂಪಿಸಿದರು.