
ಮೂಡಲಗಿ: ‘ಸಮಾಜಕ್ಕೆ ಆದರ್ಶಪ್ರಾಯವಾಗಿರುವ ಮತ್ತು ಸ್ತ್ರೀಲೋಕದ ಕೀರ್ತಿಯನ್ನು ಹೆಚ್ಚಿಸಿರುವ ಮಹಾ ಸಾದ್ವಿ ಹೇಮರಡ್ಡಿ ಮಲ್ಲಮ್ಮಳ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು ಶ್ಲಾಘನೀಯವಾಗಿದೆ’ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ತಾಲ್ಲೂಕಿನ ಯಾದವಾಡದ ಬಳಿಯ ಕಾಮನಕಟ್ಟಿ ಗ್ರಾಮದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮಳ ಮೂರ್ತಿ ಅನಾವರಣಗೊಳಿಸಿ ಮುತ್ತು ವೃತ್ತವನ್ನು ಉದ್ಘಾಟಿಸಿ ಸಂಘಟಕರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಮಾನವ ಕುಲಕ್ಕೆ ಆದರ್ಶನೀಯವಾಗಿರುವ ಶರಣೆ ಮಲ್ಲಮ್ಮಳ ಮೂರ್ತಿ ಅನಾವರಣ ಮಾಡುವ ಭಾಗ್ಯ
ನನ್ನದಾಗಿದ್ದು ಸುಯೋಗ ಎಂದರು.
ಹೇಮರಡ್ಡಿ ಮಲ್ಲಮ್ಮಳು ಎದುರಿಸಿದ ಕಷ್ಟಗಳು, ಅವಳ ತ್ಯಾಗ ಮತ್ತು ದೈವಿಭಕ್ತಿಯು ಸಮಾಜಕ್ಕೆ ಬಹು ದೊಡ್ಡ ಸಂದೇಶವಾಗಿದೆ ಎಂದರು.
ಎರೆಹೊಸಳ್ಳಿಯ ಮಹಾಯೋಗಿ ವೇಮನ್ ಸಂಸ್ಥಾನ ಪೀಠಧ ವೇಮನಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.
ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮುಖಂಡರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು
ಭಾಗವಹಿಸಿದ್ದರು.
ಮೆರವಣಿಗೆ: ಕುಂಭ ಮೇಳ ಮತ್ತು ವಿವಿಧ ವಾದ್ಯಗಳೊಂದಿಗೆ ಹೇಮರಡ್ಡಿ ಮಲ್ಲಮ್ಮಳ ಮೂರ್ತಿಯ ಮೆರವಣಿಗೆಯ ಮೂಲಕ ಪ್ರತಿಷ್ಠಾಪನೆಯ ಸ್ಥಳಕ್ಕೆ ಬರಮಾಡಿಕೊಂಡರು.
ಮೂರ್ತಿಗೆ ಮಹಾರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ಜರುಗಿತು. ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು