ಸತೀಶ ಶುಗರ್ಸಗೆ “ವಾಯುವ್ಯ ವಲಯದ ಅತ್ಯುತ್ತಮ ತಾಂತ್ರಿಕ ಕಾರ್ಯನಿರ್ವಹಣೆ”ಪ್ರಶಸ್ತಿ
ಮೂಡಲಗಿ: ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಕೋಡಮಾಡು 2019-20 ನೇ ಸಾಲಿನ “ವಾಯುವ್ಯ ವಲಯದ ಅತ್ಯುತ್ತಮ ತಾಂತ್ರಿಕ ಕಾರ್ಯನಿರ್ವಹಣೆ” ಪ್ರಶಸ್ತಿಯನ್ನು ತಾಲೂಕಿನ ಸತೀಶ ಶುಗರ್ಸ ಲಿಮಿಟೆಡ್ ಸಕ್ಕರೆ ಕಾರ್ಖಾನೆಗೆ ನೀಡಿ ಗೌರವಿಸಿದರು.
ಸಕ್ಕರೆ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಬೆಳಗಾವಿಯಲ್ಲಿ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಭಾಂಗಣದಲ್ಲಿ ಜರುಗಿದ 14ನೇ ವಾರ್ಷಿಕ ಸರ್ವ ಸಾಧಾರಣಾ ಮಹಾಸಭೆಯಲ್ಲಿ ಸತೀಶ ಶುಗರ್ಸ ಲಿಮಿಟೆಡ್ ಕಾರ್ಖಾನೆಯ ಹಿರಿಯ ಅಧಿಕಾರಿಗಳು ಪ್ರಶಸ್ತಿ ಸ್ವೀಕರಿಸಿದರು.
ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯು ಸಕ್ಕರೆ ಉದ್ಯಮದ ಮತ್ತು ಕಬ್ಬು ಬೆಳೆಯ ಕುರಿತು ವಿಶೇಷ ಅಧ್ಯಯನ, ಸಕ್ಕರೆ ಉದ್ಯಮಕ್ಕೆ ಸಂಬಂಧಿಸಿದ ಪದವಿ ಕೋರ್ಸಗಳು, ತಾಂತ್ರಿಕ ಅಭಿವೃದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿ ಶಿಬಿರಗಳನ್ನು ಏರ್ಪಡಿಸುವ ಮೂಲಕ ಸಕ್ಕರೆ ಉದ್ಯಮಕ್ಕೆ ಅತ್ಯಮೂಲ್ಯ ಕೊಡುಗೆಯನ್ನು ನೀಡಿ ಕರ್ನಾಟಕದ ಎಲ್ಲ ಸಹಕಾರಿ ಮತ್ತು ಖಾಸಗಿ ಸಕ್ಕರೆ ಕಾರ್ಖಾನೆಗಳ ಕಾರ್ಯನಿರ್ವಹಣೆಯನ್ನು ಗುರ್ತಿಸಿ ಪ್ರಶಸ್ತಿಯನ್ನು ನೀಡುವ ಮೂಲಕ ಪ್ರೋತ್ಸಾಹಿಸುತ್ತದೆ.
ಸಂಸ್ಥಾಪಕ ಅಧ್ಯಕ್ಷರಾದ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಕಾರ್ಖಾನೆಯು ಏಳ್ಗೆಯನ್ನು ಸಾಧಿಸುತ್ತಿದ್ದು, ಕಾರ್ಖಾನೆಯ ಚೇರಮನ್ ಮತ್ತು ಸಿ.ಎಫ್.ಓ ಪ್ರದೀಪಕುಮಾರ, ವ್ಯವಸ್ಥಾಪಕ ನಿರ್ದೇಶಕ ಸಿದ್ದಾರ್ಥ ವಾಡೆನ್ನವರ ಅವರ ನೇತೃತ್ವದ ಆಡಳಿತ ಮಂಡಳಿಯ ನಿರ್ಣಯ, ರೈತ ಭಾಂದವರ ಸಹಕಾರ, ಅಧಿಕಾರಿಗಳ ಮತ್ತು ಕಾರ್ಮಿಕ ಹಾಗೂ ಸಿಬ್ಬಂದಿ ವರ್ಗದವರ ಪರಿಶ್ರಮದಿಂದ ಈ ಪ್ರಶಸ್ತಿಗೆ ಪಾತ್ರವಾಗಿದೆ.
ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಸತೀಶ ಶುಗರ್ಸ ಲಿಮಿಟೆಡ್ ಹಿರಿಯ ಉಪಾಧ್ಯಕ್ಷ ಎಲ್.ಆರ್.ಕಾರಗಿ, ಪಿ.ಡಿ.ಹಿರೇಮಠ, ಉಪಾಧ್ಯಕ್ಷರುಗಳಾದ ವಿ.ಎಮ್.ತಳವಾರ, ಡಿ.ಆರ್.ಪವಾರ, ಎ.ಎಸ್.ರಾಣಾ, ಕಾರ್ಖಾನೆಯ ಸಿ.ಎಫ್.ಓ ಪ್ರದೀಪಕುಮಾರ, ವ್ಯವಸ್ಥಾಪಕ ನಿರ್ದೇಶಕ ಸಿದ್ದಾರ್ಥ ವಾಡೆನ್ನವರ ಉಪಸ್ಥಿತರಿದ್ದರು.