ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಭವಿಷ್ಯದ ಜೀವನವನ್ನು ರೂಪಿಸಿಕೊಳ್ಳಲೂ ಸಾಧ್ಯ- ದ್ಯಾಮಣ್ಣ ದೊಡ್ಮನಿ
ಬನವಾಸಿ: ಮನುಷ್ಯನಿಗೆ ದೈಹಿಕ ಸಾರ್ಮಥ್ರ್ಯವನ್ನು ನೀಡುವ ಅಪೂರ್ವ ಶಕ್ತಿಯು ಕ್ರೀಡೆಯಲ್ಲಿದೆ ಎಂದು ಬಿಜೆಪಿ ಮುಖಂಡ ದ್ಯಾಮಣ್ಣ ದೊಡ್ಮನಿ ಹೇಳಿದರು.
ಅವರು ಬದನಗೋಡ ಪಂಚಾಯಿತಿಯ ರಂಗಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕ್ರಿಕೆಟ್ ಟೂರ್ನಮೆಂಟ್ಗೆ ಚಾಲನೆ ನೀಡಿ ಮಾತನಾಡುತ್ತ, ಪ್ರತಿಯೊಬ್ಬರು ಕ್ರೀಡೆಯನ್ನು ಪ್ರೋತ್ಸಹಿಸಬೇಕು. ಕ್ರೀಡೆಗಳು ಸಂಬಂಧಗಳನ್ನು ಉತ್ತಮಪಡಿಸಿಕೊಳ್ಳಲು ಅನುಕೂಲವಾಗಿದೆ. ಇಂದಿನ ವೇಗದ ವ್ಯವಸ್ಥೆಯಲ್ಲಿ ಮನುಷ್ಯನ ದೇಹ ಮತ್ತು ಮನಸ್ಸಿನ ಮೇಲೆ ಸಾಕಷ್ಟು ಒತ್ತಡ ಬೀಳುತ್ತಿದ್ದು ಅಂಥ ಒತ್ತಡದಿಂದ ಮುಕ್ತರಾಗಲು ಕ್ರೀಡೆಗಳಲ್ಲಿ ಭಾಗವಹಿಸುವುದು ಅವಶ್ಯವಿದೆ. ಯುವ ಪೀಳಿಗೆಯೂ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಆಯಸ್ಸು ವೃದ್ದಿಯಾಗುವುದಲ್ಲದೇ ಭವಿಷ್ಯದ ಜೀವನವನ್ನು ರೂಪಿಸಿಕೊಳ್ಳಲೂ ಸಾಧ್ಯವಿದೆ. ಗ್ರಾಮೀಣ ಮಟ್ಟದ ಸಂಘ ಸಂಸ್ಥೆಗಳು ಇಂತಹ ಗ್ರಾಮೀಣ ಕ್ರೀಡೋತ್ಸವವನ್ನು ಹಮ್ಮಿಕೊಳ್ಳುವುದರಿಂದ ಕ್ರೀಡೆಗಳು ಉಳಿಯುವುದರ ಜೊತೆಗೆ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದಂತಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಆಲೂರು ಮಾತನಾಡಿ, ಯುವಶಕ್ತಿಯೂ ದೇಶದ ಆಸ್ತಿಯಾಗಿದ್ದು ಯುವಕರು ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಬೇಕು. ಇತ್ತಿಚಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳೂ ಹೆಚ್ಚಿನ ಖ್ಯಾತಿ ಪಡೆಯುತ್ತಿವೆ. ಯುವಕರು ಗ್ರಾಮೀಣ ಕ್ರೀಡೆಯೂ ನಶಿಸಿ ಹೋಗಲು ಬಿಡಬಾರದು. ಇಂತಹ ಕ್ರೀಡೋತ್ಸವಗಳೂ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಹೆಚ್ಚು ನಡೆಯುವಂತಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಕ್ಷಯ ಜಕ್ಕಲನ್ನವರ, ಅಕ್ಕಮ್ಮ ಆಲೂರು, ರೇಣುಕಮ್ಮ, ಕೃಷ್ಣಪ್ಪ ಚನ್ನಯ್ಯ, ಜಯಪುತ್ರ ಸೇರಿದಂತೆ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಇದ್ದರು.