ಬೆಟಗೇರಿ:ಗ್ರಾಮದಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ ಗುರುವಾರ ಜೂ.24 ರಂದು ಜೋಡೆತ್ತುಗಳನ್ನು ಶೃಂಗರಿಸಿ ಪೂಜೆ ನೆರವೇರಿಸಿದ ಬಳಿಕ ಇಲ್ಲಿಯ ಅಗಸಿಯ ಹೆಬ್ಬಾಗಿಲಿಗೆ ಕಟ್ಟಿರುವ ಕರಿ ಹರೆದು ಎತ್ತುಗಳನ್ನು ಓಡಿಸಿ ಕಾರಹುಣ್ಣಿಮೆ ಆಚರಿಸಿ ಸ್ಥಳೀಯರು ಸಂಭ್ರಮಿಸಿದರು.
ಗ್ರಾಮದ ಎಲ್ಲ ರೈತರ ಮನೆಗಳಲ್ಲಿ ಮಣ್ಣಿನಿಂದ ಮಾಡಿದ ಎತ್ತುಗಳನ್ನು ಪೂಜಿಸಿ, ಗ್ರಾಮದ ಪುರದೇವರ ದೇವಾಲಯಗಳಲ್ಲಿ ಪೂಜೆ ಪುನಸ್ಕಾರ, ನೈವೇದ್ಯ ಸಮರ್ಪನೆ ಪುರಜನರಿಂದ ಸಡಗರದಿಂದ ನಡೆಯಿತು. ಅನಾಧಿಕಾಲಗಳಿಂದಲೂ ಗ್ರಾಮದಲ್ಲಿ ಆಚರಿಸಿಕೊಂಡು ಬರಲಾಗುತ್ತಿರುವ ಕಾರ ಹುಣ್ಣಿಮೆ ಕರಿ ದಿನ ಸಂಪ್ರದಾಯದಂತೆ ಎತ್ತುಗಳಿಗೆ ವಿವಿಧ ಬಗೆಯ ಬಣ್ಣಹಚ್ಚಿ ಕೊಡುಗಳಿಗೆ ರಿಬ್ಬನ್, ಗೆಜ್ಜೆಯ ಸರ, ಹಣೆಪಟ್ಟಿ, ಬೇವು, ಮಾವು ತೋರಣ ಕಟ್ಟಿ ಶೃಂಗರಿಸಿ ಕರಿ ಹರಿಯಲಾಯಿತು.
ಸ್ಥಳೀಯ ರೈತರು ಇಲ್ಲಿಯ ದೇಯನ್ನವರ ಮನೆತನದ ಮುಂಗಾರು ಹಾಗೂ ಸೋಮಗೌಡ್ರ ಮನೆತನದ ಹಿಂಗಾರು ಹಂಗಾಮಿನ ನಾಮಾಂಕಿತ ಎರಡು ಎತ್ತುಗಳನ್ನು ಶೃಂಗರಿಸಿ ಪೂಜೆ ನೆರವೇರಿಸಿ, ಊರಿನ ಅಗಸಿಯ ಹೆಬ್ಬಾಗಿಲಲ್ಲಿ ಓಡಿಸಲಾಯಿತು. ಈ ವರ್ಷ ಅಗಸಿ ಹೆಬ್ಬಾಗಿಲಿನಲ್ಲಿ ಈ ಎರಡು ಎತ್ತುಗಳು ಸಮಬಲವಾಗಿ ಓಡಿದವು. ಎತ್ತುಗಳನ್ನು ಕರಿ ಹರಿದ ಬಳಿಕ ಯುವಕರು ಒಬ್ಬರಿಗಿಂತ ಮತ್ತೂಬ್ಬರು ಮೇಲಕ್ಕೆ ಹಾರಿ ಅಗಸಿಯ ಹೆಬ್ಬಾಗಿಲಿಗೆ ಕಟ್ಟಿದ ಕರಿಯನ್ನು ಹರಿಯಲು ಹರಸಾಹಸ ಮಾಡುತ್ತಿದ್ದರೆ ನೋಡುಗರಿಗೆ ಮನರಂಜನೆ ನೀಡುವಂತಿತ್ತು.
ಇಲ್ಲಿಯ ರೈತರು ಒಬ್ಬರಿಗೊಬ್ಬರು ಈ ಸಲ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆಗಳ ಬೆಳೆಯುವ ಕುರಿತು ಮಾತನಾಡುತ್ತಾ ತಮ್ಮ ಮನೆಗಳ ಕಡೆಗೆ ಹಜ್ಜೆ ಹಾಕಿದರು. ಸ್ಥಳೀಯ ಯುವಕರು, ರೈತರು, ಮಹಿಳೆಯರು, ವಯೋವೃದ್ಧರು, ಮಕ್ಕಳು ಕಾರಹುಣ್ಣಿಮೆ ಪ್ರಯುಕ್ತ ಕರಿ ಹರಿಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.