ಪತ್ರಿಕಾ ವಿತರಕರು ಪತ್ರಿಕೋದ್ಯಮದ ಪ್ರಮುಖ ಭಾಗವಾಗಿದ್ದಾರೆ.
ಮೂಡಲಗಿ: ‘ಕೋವಿಡ್ ದುರಿತ ಅವಧಿಯಲ್ಲಿ ತಮ್ಮ ಜೀವದ ಹಂಗು ತೊರೆದು ಮನೆ, ಮನೆಗೆ ದಿನ ಪತ್ರಿಕೆಗಳನ್ನು ವಿತರಿಸಿರುವ ಪತ್ರಿಕಾ ವಿತರಕರ ಕಾರ್ಯವು ಶ್ಲಾಘನೀಯವಾಗಿದೆ’ ಎಂದು ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷ ಬಾಲಶೇಖರ ಬಂದಿ ಹೇಳಿದರು.
ಶನಿವಾರ ಇಲ್ಲಿಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಹಾಗೂ ಮೂಡಲಗಿ ತಾಲ್ಲೂಕಾ ಪತ್ರಿಕಾ ಬಳಗದಿಂದ ಆಚರಿಸಿದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮಾಜದ ಎಲ್ಲ ಕ್ಷೇತ್ರಕ್ಕೆ ಮಾಹಿತಿ ಮತ್ತು ಜ್ಞಾನವನ್ನು ಹಂಚುವ ಪವಿತ್ರ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.
ಸುದ್ದಿ ಮನೆಯಿಂದ ಪತ್ರಿಕೆಯ ಮುದ್ರಣ, ಪ್ರಸರಣದ ಪ್ರಕ್ರಿಯೆಗಳು ಒಂದು ಭಾಗವಾದರೆ ಕೊನೆಯಲ್ಲಿ ಪತ್ರಿಕೆಯನ್ನು ಓದುಗರ ಕೈಗೆ ತಲುಪಿಸುವಲ್ಲಿ ಪತ್ರಿಕಾ ವಿತರಕರ ಪಾತ್ರ ಮಹತ್ವದಾಗಿದೆ. ಹೀಗಾಗಿ ಪತ್ರಿಕಾ ವಿತರಕರು ಪತ್ರಿಕೋದ್ಯಮದ ಭಾಗವಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಪತ್ರಿಕಾ ವಿತರಕರನ್ನು ಸರ್ಕಾರವು ಅಸಂಘಟಿತ ಕಾರ್ಮಿಕರು ಎಂದು ಪರಿಗಣಿಸಲು ಒಪ್ಪಿಕೊಂಡಿದ್ದು, ಅದು ಬೇಗಾ ಆದೇಶವಾಗಬೇಕು. ಸರ್ಕಾರದ ಸೌಲಭ್ಯಗಳು ಪತ್ರಿಕಾ ವಿತರಕರಿಗೂ ಬಹು ಬೇಗ ದೊರೆಯುವಂತಾಗಬೇಕು ಎಂದು ಒತ್ತಾಯಿಸಿದರು.
ಪತ್ರಿಕಾ ವಿತರಕರಿಗೆ ನೋಟ್ಬುಕ್, ಪೆನ್, ಮಾಸ್ಕ್ ಹಾಗೂ ಸಿಹಿ ವಿತರಿಸಿ ಸನ್ಮಾನಿಸಿ ಗೌರವಿಸಿದರು. ಕೇಕ್ ಕತ್ತರಿಸಿ ಪತ್ರಿಕಾ ವಿತರಕರೊಂದಿಗೆ ಸಂಭ್ರಮಿಸಿದರು.
ಲಯನ್ಸ್ ಕ್ಲಬ್ ಸದಸ್ಯರಾದ ವೆಂಕಟೇಶ ಸೋನವಾಲಕರ, ಶಿವಾನಂದ ಗಾಡವಿ, ಶ್ರೀಶೈಲ್ ಲೋಕನ್ನವರ, ಶಿವಾನಂದ ಕಿತ್ತೂರ, ತಾಲ್ಲೂಕು ಪತ್ರಿಕಾ ಬಳಗದ ಎಲ್.ಸಿ. ಗಾಡವಿ, ಕೃಷ್ಣಾ ಗಿರೆಣ್ಣವರ, ಅಲ್ತಾಫ್ ಹವಾಲ್ದಾರ್, ಮಲ್ಲು ಬೋಳನ್ನವರ, ಎಸ್.ಎಂ. ಚಂದ್ರಶೇಖರ, ಸುಭಾಷ ಕಡಾಡಿ, ಪುಟ್ಟು ಗಾಡವಿ, ಹನಮಂತ ಕಂಕಣವಾಡಿ, ಶಿವಬಸು ಮೋರೆ, ಚಂದ್ರಶೇಖರ ಪತ್ತಾರ, ಮೆಹಬೂಬ್ ಶೇಖಬಡೆ ಭಾಗವಹಿಸಿದ್ದರು.
ಮಲ್ಲು ಬೋಳನ್ನವರ ಸ್ವಾಗತಿಸಿದರು, ಅಲ್ತಾಫ್ ಹವಾಲ್ದಾರ್ ವಂದಿಸಿದರು.