ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘ ಹಾಗೂ ಬಸವ ಕೇಂದ್ರ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಬುಧವಾರ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಿದರು.
ಬೆಳಿಗ್ಗೆ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿ ಅಲಂಕೃತ ಎತ್ತುಗಳ ಜೋಡಿಗಳ ಮೆರವಣಿಗೆಗೆ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಾಳಪ್ಪ ಬಿ. ಬೆಳಕೂಡ ಅವರು ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿ ‘ಬಸವ ಜಯಂತಿ ಉತ್ಸವದಲ್ಲಿ ಕಳೆದ ಎರಡು ದಶಕಗಳಿಂದ ಬಸವೇಶ್ವರ ಸೊಸೈಟಿಯಿಂದ ರೈತರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಜೋಡು ಎತ್ತುಗಳ ಮೆರವಣಿಗೆಯನ್ನು ಅವಿರತವಾಗಿ ಮಾಡಿಕೊಂಡು ಬಂದಿರುವೆವು’ ಎಂದರು.
ಅನ್ನದಾತನ ಬದುಕಿನ ಆಸರೆಯಾಗಿರುವ ಎತ್ತುಗಳ ಮಹತ್ವ ಮತ್ತು ಸಂಪ್ರದಾಯ ಕೃಷಿಯ ಮಹತ್ವ ಸಾರುವುದು ಎತ್ತುಗಳ ಜೋಡಿಗಳ ಮೆರವಣಿಗೆಯ ಮುಖ್ಯ ಉದೇಶವಾಗಿದೆ. ಪ್ರತಿ ವರ್ಷ ಅಪಾರ ಸಂಖ್ಯೆಯಲ್ಲಿ ರೈತರು ಭಾಗವಹಿಸುತ್ತಿದ್ದಾರೆ ಎಂದರು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಒಂದು ನೂರಕ್ಕೂ ಅಧಿಕ ಸಂಖ್ಯೆಯ ಜೋಡು ಎತ್ತುಗಳು ಎಲ್ಲರ ಗಮನಸೆಳೆದವು. ರಾಮಲಿಂಗೇಶ್ವರ ದೇವರ ಪಲ್ಲಕ್ಕಿ ಮತ್ತು ವಿವಿಧ ವಾದ್ಯಗಳೊಂದಿಗೆ ಸಾಗಿದ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಮರಳಿ ಮೂಲ ಸ್ಥಳದಲ್ಲಿ ಸಮಾವೇಶಗೊಂಡಿತು.
ಬಸವೇಶ್ವರ ಸೊಸೈಟಿಯ ಬಳಿಯಲ್ಲಿ ಜೋಡು ಎತ್ತುಗಳೊಂದಿಗೆ ಭಾಗವಹಿಸಿದ್ದ ರೈತರಿಗೆ ಸೊಸೈಟಿ ವತಿಯಿಂದ ರೈತರಿಗೆ ಎರಡು ಟೀಶರ್ಟ, ಎರಡು ಸ್ಟೀಲ್ ಬುಟ್ಟಿ ಮತ್ತು ಒಂದು ಸ್ಟೀಲ್ ಬಕೆಟ್ಗಳನ್ನು ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಬಸವೇಶ್ವರ ಸೊಸೈಟಿಯ ಉಪಾಧ್ಯಕ್ಷ ಶಿವರುದ್ರಪ್ಪ ಬಿ. ಪಾಟೀಲ, ನಿರ್ದೇಶಕರಾದ ಬಸಗೌಡ ಪಾಟೀಲ, ಬಸವಣ್ಣೆಪ್ಪ ಗೊರೋಶಿ, ಮಲ್ಲಪ್ಪ ಖಾನಾಪೂರ, ರಾಮಪ್ಪ ದಬಾಡಿ, ಹಣಮಂತ ಪರಕನಟ್ಟಿ, ಸುಭಾಸ ಖಾನಾಪೂರ, ಬಸಪ್ಪ ಹೆಬ್ಬಾಳ, ದುಂಡವ್ವ ಕಡಾಡಿ, ಲಕ್ಷ್ಮೀಬಾಯಿ ಕಂಕಣವಾಡಿ, ಪ್ರಕಾಶ ಕಲಾಲ, ಮಹ್ಮದಷಫಿ ಮೊಕಾಶಿ, ಕಲ್ಲೋಳೆಪ್ಪ ತೆಳಗಡೆ, ಭೀಮಶೆಪ್ಪ ಕಡಾಡಿ, ಪ್ರಧಾನ ವ್ಯವಸ್ಥಾಪಕ ಹಣಮಂತ ಖಾನಗೌಡ್ರ, ಬಸವ ಕೇಂದ್ರದ ಅಧ್ಯಕ್ಷ ಶಂಕರ ಬಸಪ್ಪ ಬೆಳಕೂಡ, ಸದಸ್ಯ ಆನಂದ ಕಡಾಡಿ, ಸೊಸೈಟಿಯ ಸಿಬ್ಬಂದಿಯವರಾದ ಈರಯ್ಯ ಕರಗಾಂವಿಮಠ, ರಮೇಶ ಕವಟಕೊಪ್ಪ ಹಾಗೂ ಸಿಬ್ಬಂದಿಯವರು, ರೈತರು ಭಾಗವಹಿಸಿದ್ದರು.