ಮೂಡಲಗಿ: ‘ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಆತ್ಮವಿಶ್ವಾಸದಿಂದ ಅಧ್ಯಯನ ಮಾಡಿದರೆ ಖಂಡಿತ ಯಶಸ್ಸು ದೊರೆಯುತ್ತದೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.
ತಾಲ್ಲೂಕಿನ ಕಮಲದಿನ್ನಿಯ ಮಾರುತೇಶ್ವರ ಓಕುಳಿ, ರಥೋತ್ಸವ ಅಂಗವಾಗಿ ಮಹಾಲಕ್ಷ್ಮೀದೇವಿ ಸಮಿತಿಯ ಸಹಯೋಗದಲ್ಲಿ ಏರ್ಪಡಿಸಿದ್ದ ರಸಮಂಜರಿ ಕಾರ್ಯಕ್ರಮದ ಉದ್ಘಾಟನೆ ಮತ್ತು ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡು ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮಾಡಿರುವ ಸಾಧನೆಯು ನಿಮ್ಮ ಸಾಧನೆ ಮತ್ತು ಭವಿಷ್ಯದ ಅಡಿಪಾಯವಾಗಬೇಕು. ಇದೇ ನಿಟ್ಟಿನಲ್ಲಿ ಶೈಕ್ಷಣಿಕ ವಿವಿಧ ಮೆಟ್ಟಿಲುಗಳನ್ನು ದಾಟಬೇಕು ಎಂದರು.
ಎಸ್ಎಸ್ಎಲ್ಸಿ ನಂತರ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳಲ್ಲಿ ಸಾಕಷ್ಟು ಅವಕಾಶಗಳಿದ್ದು ಈ ಹಂತದಲ್ಲಿ ವಿದ್ಯಾರ್ಥಿಗಳ ನಿರ್ಧಾರ ಪ್ರಮುಖವಾಗಿದೆ. ವಿದ್ಯಾರ್ಥಿಗಳು ನಿಮ್ಮ ಭವಿಷ್ಯದ ರೂವಾರಿಗಳು ನೀವೇ ಆಗಬೇಕು. ಜಯ ಮತ್ತು ಅಪಜಯ ಎರಡೂ ನಿಮ್ಮ ಕೈಯಲ್ಲಿದೆ ಎಂದರು.
ಕಮಲದಿನ್ನಿ ಗ್ರಾಮದಲ್ಲಿ ಓಕುಳಿ ಸಂದರ್ಭದಲ್ಲಿ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯವಾಗಿದೆ. ಈ ಸಂಪ್ರದಾಯ ನಿರಂತರವಾಗಿ ಮುಂದುವರಿಯಲಿ ಎಂದರು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿಜಯಾ ಬಡಗಣ್ಣವರ, ಹೇಮಾ ದಂಡಪ್ಪನ್ನವರ, ಅರ್ಪಿತಾ ಪೂಜಾರಿ, ಸಂಗೀತಾ ಖಿಲಾರಿ, ವಿಕಾಸ ಬೆಳ್ಳಿವರಿ, ರಾಯಣ್ಣ ಹೊಸೂರ, ಪಾರ್ವತಿ ಕುಲಗೋಡ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡಿರುವ ಪ್ರಿಯಂಕಾ ಗುಜಗೊಪ್ಪ, ಶ್ರೀನಿವಾಸ ದಂಡಪ್ಪನ್ನವರ, ಸುಪ್ರೀತಾ ಖಿಲಾರಿ, ನಂದಿತಾ ಬಡಿಗೇರ ಇವರನ್ನು ಸನ್ಮಾನ ಮಾಡಿದರು.
ಮೂಡಲಗಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಾ ಗಿರೆಣ್ಣವರ ಹಾಗೂ ಮುಖ್ಯ ಅತಿಥಿ ಬಾಲಶೇಖರ ಬಂದಿ ಅವರನ್ನು ಸನ್ಮಾನಿಸಿದರು.
ಅಧ್ಯಕ್ಷತೆಯನ್ನು ಬಿ.ಎಚ್. ರಡ್ಡಿವಹಿಸಿದ್ದರು. ಉದ್ಘಾಟನೆಯನ್ನು ಲಕ್ಷ್ಮಣ ಹುಚ್ಚರಡ್ಡಿ, ಬಸಪ್ಪ ಸಂಕಣ್ಣವರ ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಗೋವಿಂದಪ್ಪÀ ಹುಚ್ಚರಡ್ಡಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಉದಯ ಸನದಿ, ಲಕ್ಕಪ್ಪ ಹುಚ್ಚರಡ್ಡಿ, ಸುರೇಶ ಬಡಗಣ್ಣವರ, ಈರಪ್ಪ ಸಂಕಣ್ಣವರ, ರಾಮಣ್ಣ ಭಾಗೋಜಿ, ಬಸವರಾಜ ಹತ್ತರಕಿ, ಸಂಗಪ್ಪ ಕುಲಗೋಡ, ಹಣಮಂತ ಮನ್ನಿಕೇರಿ ಭಾಗವಹಿಸಿದ್ದರು.
ಹಣಮಂತ ಹತ್ತರಕಿ ನಿರೂಪಿಸಿದರು.
ರಸಮಂಜರಿ: ಓಕುಳಿ ಅಂಗವಾಗಿ ಏರ್ಪಡಿಸಿದ್ದ ಕಮಲದಿನ್ನಿ ಗ್ರಾಮದ ಜೈ ಶ್ರೀರಾಮ ಮೇಲೋಡಿಸ್ ಆಕೇಸ್ಟ್ರದವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು. ಗಾಯಕ, ಗಾಯಕಿಯರು ಜಾನಪದ, ಸಿನಿಮಾ ಹಾಡುಗಳನ್ನು ಸುಶ್ರವ್ಯವಾಗಿ ಹಾಡಿ ಎಲ್ಲರ ಮೆಚ್ಚುಗೆ ಪಡೆದುಕೊಂಡರು.