
ಮೂಡಲಗಿ: ‘ಭಾರತದ ಸನಾತನ ಹಿಂದೂ ಧರ್ಮವು ಶಾಶ್ವತವಾಗಿರುವಂತದ್ದು ಅದು ಎಂದಿಗೂ ನಶೀಸಿ ಹೋಗುವಂತದಲ್ಲ’ ಎಂದು ಹುಕ್ಕೇರಿ ಕ್ಯಾರಗುಡ್ಡ ಮಠದ ಅಭಿನವ ಮಂಜುನಾಥ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕಲ್ಲೋಳಿಯ ಬಲಭೀಮ ರಂಗಮಂಟಪದಲ್ಲಿ ಆಯೋಜಿಸಿದ್ದ ಹಿಂದೂ ಬೃಹತ್ ಸಮಾವೇಶದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ದೇಶದ ಜನರ ಮನಸ್ಸು ಒಡೆಯದೇ ಮಾನವರೆಲ್ಲೂರ ಒಂದೇ ಎನ್ನುವ ಸಂದೇಶವನ್ನು ಹಿಂದೂ ಧರ್ಮ ನೀಡುತ್ತದೆ. ಪ್ರತಿ ಭಾರತೀಯನು ಹಿಂದೂ ಧರ್ಮದ ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಂಡು ಹೋಗುವುದು ಇಂದಿನ ಅವಶ್ಯಕತೆ ಇದೆ ಎಂದರು.

ದಿಕ್ಸೂಚಿ ಭಾಷಣ ಮಾಡಿದ ವೈಭವಿ ಕುಲಕರ್ಣಿ ದೇಶದ ಸಂಸ್ಕೃತಿ, ಪರಂಪರೆಯನ್ನು ಕಾಯ್ದುಕೊಂಡು ಮುಂದುವರಿಸುವಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ. ಭಾರತದಲ್ಲಿ ಮಾತೃದೇವೋಭವ ಎಂದು ಎಂದು ತಾಯಿಗೆ ಮೊದಲ ಗೌರವ ನೀಡುವಂತ ಏಕೈಕ ದೇಶವು ಭಾರತವಾಗಿದೆ. ಅದುವೇ ಹಿಂದೂ ಸನಾತನ ಧರ್ಮದ ತಿರುಳು ಆಗಿದೆ ಎಂದರು.
ಇನ್ನೋರ್ವ ದಿಕ್ಸೂಚಿ ಭಾಷಣಕಾರ ಸುರೇಶ ನಿಂಗಪ್ಪನವರ, ನಾಗನೂರದ ಕಾವ್ಯಾ ಅಮ್ಮನವರು ಮಾತನಾಡಿದರು.

ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಸತೀಶ ಕಡಾಡಿ ಪ್ರಾಸ್ತಾವಿಕ ಮಾತನಾಡಿ ಪರಕೀಯರ ಕುತಂತ್ರದಿಂದ ಹಿಂದೂ ಧರ್ಮವನ್ನು ರಕ್ಷಿಸುವುದು, ಭಾರತೀಯರಲ್ಲಿ ಭಾವೈಕ್ಯತೆಯ ನೆಲೆಯಲ್ಲಿ ಹಿಂದೂತ್ವವನ್ನು ಜಾಗೃತಿಗೊಳಿಸುವುದು ಹಿಂದೂ ಸಮಾವೇಶಗಳ ಉದ್ಧೇಶವಾಗಿದೆ. ಹಿಂದೂಗಳ ಜಾತಿ, ಮತ, ಧರ್ಮಗಳ ಒಗ್ಗೂಡಿಸಿ ಬಲಿಷ್ಠವಾಗುವುದಕ್ಕೆ ಸಮಾವೇಶಗಳನ್ನು ಮಾಡುವುದು ಅವಶ್ಯವಿದೆ ಎಂದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಭಾರತ ಮಾತೆ ಮತ್ತು ದೇಶದ ನಾಯಕರ ಭಾವಚಿತ್ರಗಳಿಗೆ ಪುಷ್ಪಾರ್ಪಣೆಯನ್ನು ಮಾಡಿ ಗೌರವ ಸಲ್ಲಿಸಿದರು.
ಸಮಾರಂಭದ ಪೂರ್ವದಲ್ಲಿ ಕುಂಭ ಮೇಳ, ವಿವಿಧ ದೇಶಿ ವಾದ್ಯ ವೃಂದದೊಂದಿಗೆ ಪ್ರಮುಖ ರಸ್ತೆಗಳಲ್ಲಿ ಶೋಭಾಯಾತ್ರೆ ಜರುಗಿತು. ದಾರಿಯುದ್ದಕ್ಕೂ ಒಂದೇ ಮಾತರಂ, ಭಾರತ ಮಾತಾಕೀ ಜೈ ಎನ್ನುವ ಘೋಷಣೆಗಳು ಮೊಳಗಿದವು. ದೇಶದ ನಾಯಕರ ವೇಷಗಳಲ್ಲಿ ಪುಟಾಣಿಗಳು ಎಲ್ಲರ ಗಮನಸೆಳೆದರು.
ಕಲ್ಲೋಳಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಲೋಹಿತ ಕಲಾಲ ನಿರೂಪಿಸಿದರು.
IN MUDALGI Latest Kannada News