ಬೆಟಗೇರಿ:ಕರೊನಾ 2ನೇ ಅಲೆ ಅಬ್ಬರಿಸುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಆದೇಶದ ಮಾರ್ಗಸೂಚಿಯಂತೆ ಶನಿವಾರ ಏ.24 ಮತ್ತು ಏ.25 ಹಾಗೂ ಏ.26ರಂದು ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಅಗತ್ಯ ಸೇವೆ ಹೊರತು ಪಡಿಸಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಗೊಳಿಸಲಾಗಿದೆ ಎಂದು ಸ್ಥಳೀಯ ಗ್ರಾಪಂ ಪಿಡಿಒ ಎಚ್.ಎನ್.ಬಾವಿಕಟ್ಟಿ ಹೇಳಿದರು.
ಬೆಟಗೇರಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಸ್ಥಳೀಯ ಗ್ರಾಪಂ ಮತ್ತು ಪಿಎಚ್ಸಿ ಸಹಯೋಗದಲ್ಲಿ ಕರೋನಾ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಆದೇಶದ ಮಾರ್ಗಸೂಚಿ ನಿಯಮಗಳನ್ನು ಗ್ರಾಮದಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವ ಕುರಿತು ಗುರುವಾರ ಏ.22ರಂದು ಇಲ್ಲಿಯ ಹಿರಿಯ ನಾಗರಿಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಆಯೋಜಿಸಿದ ಸಭೆಯಲ್ಲಿ ಮಾತನಾಡಿದರು.
ಸರ್ಕಾರದ ಆದೇಶದಂತೆ ಮೇ.2ವರೆಗೆ ಯಾರೂ ಅನವಶ್ಯಕವಾಗಿ ತಿರುಗಾಡುವುದು ಮಾಡಬಾರದು. ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಮಾಸ್ಕ್ ಧರಿಸುವುದರ ಜೋತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕರೊನಾ ವೈರಸ್ ನಿಯಂತ್ರಣಾ ಕ್ರಮಗಳನ್ನು ತಪ್ಪದೇ ಅನುಸರಿಬೇಕು. ಪ್ರತಿಯೊಬ್ಬರಿಗೂ ಜೀವವಿದ್ದರೆ ಜೀವನ, ಕರೋನಾ ಬಗ್ಗೆ ಭಯಪಡಬೇಡಿ, ಮನ್ನೆಚ್ಚರಿಕೆ ವಹಿಸುವಂತೆ ಪಿಡಿಒ ಎಚ್.ಎನ್.ಬಾವಿಕಟ್ಟಿ ತಿಳಿಸಿದರು.
ಬಾಕ್ಸ್ ಐಟಮ್: ಭಾನುವಾರ ಸಂತೆ ರದ್ದು: ಬೆಟಗೇರಿ ಗ್ರಾಮದಲ್ಲಿ ಏ.25ರಂದು ನಡೆಯಬೇಕಾಗಿದ್ದ ಭಾನುವಾರ ಸಂತೆಯನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಗ್ರಾಮದ ಹಾಗೂ ಸುತ್ತಲಿನ ಹತ್ತೂರಿನ ನಾಗರಿಕರು, ರೈತರು, ಅಂಗಡಿ-ಮುಂಗಟ್ಟು ವ್ಯಾಪಾರಸ್ಥರು ರದ್ದುಗೊಳಿಸಲಾದ ಈ ರವಿವಾರದ ಸಂತೆಗೆ ಯಾರೂ ಬರದೇ ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಸಹಕರಿಸಬೇಕು ಎಂದು ಸ್ಥಳೀಯ ಹಿರಿಯ ನಾಗರಿಕರು ಕೋರಿದ್ದಾರೆ.
ಗ್ರಾಮದ ಹಿರಿಯ ನಾಗರಿಕರು, ಗ್ರಾಪಂ ಪಿಡಿಒ, ಪಿಎಚ್ಸಿ ವೈದ್ಯಾಧಿಕಾರಿ ಹಾಗೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಜೋತೆ ಕರೊನಾ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮದಲ್ಲಿ ಸ್ಥಳೀಯರು, ಅಂಗಡಿ-ಮುಂಗಟ್ಟುಗಾರರು ಅನುಸರಿಸಬೇಕಾದ ರಾಜ್ಯ ಸರ್ಕಾರದ ಮಾರ್ಗಸೂಚಿ ನಿಯಮಗಳ ಕುರಿತು ಚರ್ಚಿಸಿದರು.
ಗ್ರಾಮಲೆಕ್ಕಾಧಿಕಾರಿ ಜೆ.ಎಂ.ನದಾಫ್, ವೈದ್ಯಾಧಿಕಾರಿ ರಾಜೇಶ್ವರಿ ಹಿರೇಮಠ, ಬಸವಂತ ಕೋಣಿ, ಲಕ್ಷ್ಮಣ ಚಂದರಗಿ, ಈಶ್ವರ ಮುಧೋಳ, ವೈ.ಸಿ.ಶೀಗಿಹೊಳಿ, ಸುರೇಶ ಬಾಣಸಿ, ಗೌಡಪ್ಪ ಮಾಳೇದ, ಬಸವರಾಜ ಪಣದಿ, ಬಸವರಾಜ ದೇಯಣ್ಣವರ, ಗ್ರಾಮದ ಹಿರಿಯ ನಾಗರಿಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾಪಂ ಮತ್ತು ಪಿಎಚ್ಸಿ ಸಿಬ್ಬಂದಿ, ಮತ್ತೀತರರು ಇದ್ದರು.
