ಮೂಡಲಗಿ ತಾಲ್ಲೂಕಿನ ಕಲ್ಲೋಳಿಯಲ್ಲಿ ರಾಜ್ಯಸಭಾ ನೂತನ ಸದಸ್ಯ ಈರಣ್ಣ ಕಡಾಡಿ ಅವರ ಜನಸಂಪರ್ಕ ಕಾರ್ಯಾಲಯವನ್ನು ಶುಕ್ರವಾರ ರೈತರು, ಯೋಧರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು
ಮೂಡಲಗಿ: ‘ರಾಜ್ಯಸಭಾ ಸದಸ್ಯತ್ವದ ಅವಧಿಯನ್ನು ಜನರ ಸೇವೆಗಾಗಿ ಪ್ರಾಮಾಣಿಕವಾಗಿ ಸದ್ವಿನಿಯೋಗಿಸಿಕೊಳ್ಳುವೆನು’ ಎಂದು ನೂತನ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಹೇಳಿದರು.
ರಾಜ್ಯಸಭೆಗೆ ನೂತನವಾಗಿ ಆಯ್ಕೆಯಾಗಿರುವ ಈರಣ್ಣ ಕಡಾಡಿ ಅವರು ಕಲ್ಲೋಳಿಯಲ್ಲಿ ಶ್ರೀ ಮಹಾಲಕ್ಷ್ಮೀ ಕೋ.ಆಪ್ ಕ್ರೆಡಿಟ್ ಸೊಸೈಟಿಯ ಕಟ್ಟಡದಲ್ಲಿ ಸ್ಥಾಪಿಸಿರುವ ಜನಸಂಪರ್ಕ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಪಕ್ಷಾತಿತವಾಗಿ ಜನಸೇವೆ ಮಾಡುವ ದ್ಯೇಯೆ ನನ್ನದಾಗಿದೆ ಎಂದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷತೆ ಸೇರಿದಂತೆ ಈ ವರೆಗೆ ನನಗೆ ದೊರೆತ ಅಧಿಕಾರವಧಿಯಲ್ಲಿ ಅಭಿವೃದ್ಧಿಪರವಾದ ಸಾಕಷ್ಟು ಕಾರ್ಯಗಳನ್ನು ಮಾಡಿರುವ ತೃಪ್ತಿ ಇದೆ. ಇನ್ನು ಮುಂದೆಯು ರಾಜ್ಯಸಭಾದ ಆರು ವರ್ಷಗಳ ಅವಧಿಯಲ್ಲಿ ಎಲ್ಲ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಕಾರ್ಯಮಾಡುತ್ತೇನೆ ಎಂದರು.
ನನ್ನ ಬೆಳವಣಿಗೆಯಲ್ಲಿ ಕಲ್ಲೋಳಿಯ ಜನರ ಸಹಕಾರ, ಅಭಿಮಾನ ನನ್ನೊಂದಿಗೆ ಇದೆ. ಜಾರಕಿಹೊಳಿ ಸಹೋದರರು ಸಹ ನನ್ನ ಪರವಾಗಿ ಇರುವುದರಿಂದ ನನಗೆ ಕೆಲಸ ಮಾಡಲು ಸಾಕಷ್ಟು ಬಲ ಬಂದಂತಾಗಿದೆ ಎಂದರು.
ಈ ವರೆಗೆ ಯಾರೊಂದಿಗೂ ದ್ವೇಷ ಸಾಧಿಸದೆ, ಯಾರನ್ನೂ ಟೀಕೆ ಮಾಡದೆ, ಶ್ರದ್ಧೆಯಿಂದ ಕಾರ್ಯಮಾಡುತ್ತಾ ಬಂದಿದ್ದು, ಇನ್ನು ಮುಂದೆಯೂ ಅದೇ ಪ್ರವತ್ತಿಯನ್ನು ಮುಂದುವರಿಸಿಕೊಂಡು ಹೋಗುವೆನು ಎಂದರು.
ಗ್ರಾಮೀಣ ಜನರಿಗೆ ಹೆಚ್ಚು ಅನುಕೂಲವಾಗಲಿ ಎನ್ನುವ ಉದ್ಧೇಶದಿಂದ ಕಲ್ಲೋಳಿಯಲ್ಲಿ ಜನಸಂಪರ್ಕ ಕಚೇರಿಯನ್ನು ವಯಕ್ತಿಕವಾಗಿ ತೆರೆದಿದ್ದು,
ಜನರು ಸಲಹೆ ಸೂಚನೆಗಳನ್ನು ನೀಡಬೇಕು ಎಂದರು.
ಹಿರಿಯರಾದ ಸುರೇಶ ಕಬ್ಬೂರ, ಚನ್ನಪ್ಪ ಪಟ್ಟಣಶೆಟ್ಟಿ, ಬಾಲಶೇಖರ ಬಂದಿ ಮಾತನಾಡಿದರು.
ಸಾವಯವ ಕೃಷಿಕರು, ಯೋಧರು, ವೈದ್ಯರು, ವಕೀಲರು, ಶಿಕ್ಷಕರು, ಪತ್ರಕರ್ತರು ಹೀಗೆ ಸಮಾಜದ ವಿವಿಧ ಕ್ಷೇತ್ರದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಸವರಾಜ ಕಡಾಡಿ ಸ್ವಾಗತಿಸಿದರು, ವಕೀಲ ಶಂಕರ ಗೋರೋಶಿ ಪರಿಚಯಿಸಿದರು, ಸತೀಶ ಕಡಾಡಿ ಪ್ರಾಸ್ತಾವಿಕ ಮಾತನಾಡಿದರು. ಪರಪ್ಪ ಗಿರೆಣ್ಣವರ ನಿರೂಪಿಸಿದರು, ಶ್ರೀಶೈಲ್ ತುಪ್ಪದ ವಂದಿಸಿದರು.
‘ಯೋಧ, ರೈತರಿಂದ ಉದ್ಘಾಟನೆ’
ಕೊರೊನಾ ಸೋಂಕು ಆತಂಕದಲ್ಲಿ ಜನಸಂಪರ್ಕ ಕಚೇರಿಯ ಉದ್ಘಾಟನೆಯು ಕಡಿಮೆ ಜನರೊಂದಿಗೆ, ಅಂತರ ಕಾಯ್ದುಕೊಂಡು ಸರಳ ರೀತಿಯಲ್ಲಿ ಜರುಗಿತು.
ಯೋಧರು ಮತ್ತು ಸೈನಿಕರಿಂದ ಜನಸಂಪರ್ಕ ಕಚೇರಿಯು ಉದ್ಘಾಟನೆಗೊಂಡರೆ, ವೈದ್ಯರ ಕಡೆಯಿಂದ ‘ಸ್ವದೇಶಿ ಬಳಿಸಿ, ದೇಶ ಉಳಿಸಿ’ ಸಂದೇಶ ಸಾರುವ ಮಾಸ್ಕ್ಗಳನ್ನು ಕೊಡಮಾಡಿಸಿದರು. ವಕೀಲರ ಕಡೆಯಿಂದ ಸಿಹಿ ವಿತರಿಸಿದರು. ಕಾರ್ಯಕ್ರಮದಲ್ಲಿ ಹೂಮಾಲೆ, ತುರಾಯಿ ಯಾವುದು ವಿಜೃಂಭಿಸಲಿಲ್ಲ. ಹೀಗಾಗಿ ಕಾರ್ಯಕ್ರಮವು ವೈಶಿಷ್ಟ್ಯತೆಯಿಂದ ಗಮನಸೆಳೆಯಿತು